- ಸಾವರ್ಕರ್ ಜೀವನಾಧಾರಿತ ಚಿತ್ರಕ್ಕೆ ನಟ ರಾಮ್ ಚರಣ್ ಬಂಡವಾಳ
- ಚುನಾವಣೆ ಹೊತ್ತಲೇ ತೆರೆಗೆ ಬರಲಿವೆ ಸಾವರ್ಕರ್ ಜೀವನಾಧಾರಿತ ಚಿತ್ರಗಳು
ತೆಲುಗಿನ ಖ್ಯಾತ ನಟ ರಾಮ್ ಚರಣ್ ಇತ್ತೀಚೆಗೆ ʼವಿ ಮೆಗಾ ಪಿಕ್ಚರ್ಸ್ʼ ಹೆಸರಿನ ಚಿತ್ರ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದು, ಈ ನೂತನ ಸಂಸ್ಥೆಯ ಮೂಲಕ ʼಸಾವರ್ಕರ್ʼ ಜೀವನಾಧಾರಿತ ಚಿತ್ರವನ್ನು ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ.
ಸಾವರ್ಕರ್ ಅವರ 140ನೇ ಜನ್ಮದಿನದ ಪ್ರಯುಕ್ತ ಅವರ ಬದುಕಿನ ಕಥೆಯನ್ನು ಆಧರಿಸಿದ ʼದಿ ಇಂಡಿಯಾ ಹೌಸ್ʼ ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ರಾಮ್ ಚರಣ್ ಘೋಷಿಸಿದ್ದಾರೆ. ತೆಲುಗಿನ ಖ್ಯಾತ ನಟ ನಿಖಿಲ್ ಸಿದ್ಧಾರ್ಥ ಚಿತ್ರದಲ್ಲಿ ಸಾವರ್ಕರ್ ಪಾತ್ರದಲ್ಲಿ ನಟಿಸುತ್ತಿದ್ದು, ಟೈಟಲ್ ಟೀಸರ್ನಲ್ಲಿ ಭಿನ್ನ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಮ ವಂಶಿ ಕೃಷ್ಣ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಬಾಲಿವುಡ್ನ ಖ್ಯಾತ ನಟ ಅನುಪಮ್ ಖೇರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ರಾಮ್ ಚರಣ್ ಮಾತ್ರವಲ್ಲದೆ, ಈ ಹಿಂದೆ ವಿವಾದಾತ್ಮಕ ʼದಿ ಕಾಶ್ಮೀರ್ ಫೈಲ್ಸ್ʼ ಚಿತ್ರಕ್ಕೆ ಬಂಡವಾಳ ಹೂಡಿದ್ದ ಅಭಿಷೇಕ್ ಅಗರ್ವಾಲ್ ಕೂಡ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ ಎಂಬುದು ಗಮನಿಸಬೇಕಾದ ಅಂಶ.
ಇದೇ ವೇಳೆ ಬಾಲಿವುಡ್ನ ಖ್ಯಾತ ನಟ ರಣದೀಪ್ ಹೂಡಾ ಬಂಡವಾಳ ಹೂಡಿ, ನಟಿಸಿ, ನಿರ್ದೇಶಿಸುತ್ತಿರುವ ʼಸ್ವಾತಂತ್ರ್ಯ ವೀರ್ ಸಾವರ್ಕರ್ʼ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದೆ. ಒಂದೂವರೆ ನಿಮಿಷಗಳ ಟೀಸರ್ನಲ್ಲಿ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಎಂದು ತೋರಿಸಲಾಗಿದ್ದು, ಗಾಂಧೀಜಿ ಜೊತೆಗೆ ಸಾವರ್ಕರ್ಗಿದ್ದ ಭಿನ್ನಾಭಿಪ್ರಾಯಗಳನ್ನು ಕೂಡ ಕಟ್ಟಿಕೊಡಲಾಗಿದೆ. “ಗಾಂಧೀಜಿ ಕೆಟ್ಟವರಾಗಿರಲಿಲ್ಲ. ಆದರೆ, ಅವರು ಅಹಿಂಸಾವಾದದ ಪಟ್ಟು ಸಡಿಲಿಸಿದ್ದರೆ ಭಾರತ 33 ವರ್ಷಗಳ ಹಿಂದೆಯೇ ಸ್ವತಂತ್ರಗೊಳ್ಳುತ್ತಿತ್ತು” ಎಂಬ ಸಂಭಾಷಣೆ ಟೀಸರ್ನಲ್ಲಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ಬಿಡುಗಡೆಯಾಗಿದ್ದ, ತಿರುಚಿದ ಕಥಾಹಂದರ ಹೊಂದಿರುವ ʼದಿ ಕೇರಳ ಸ್ಟೋರಿʼ ಸಿನಿಮಾ ದೇಶಾದ್ಯಂತ ವಿವಾದ ಸೃಷ್ಟಿಸಿದೆ. ರಾಜ್ಯದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸ್ವತಃ ಪ್ರಧಾನಿ ಮೋದಿಯವರೇ ರಾಜಕೀಯ ಲಾಭಕ್ಕಾಗಿ ʼದಿ ಕೇರಳ ಸ್ಟೋರಿʼ ಚಿತ್ರವನ್ನು ಉಲ್ಲೇಖಿಸಿ ಮಾತನಾಡಿದ್ದರು ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಸಾವರ್ಕರ್ ಬುದಕಿನ ಕಥೆಯನ್ನು ಆಧರಿಸಿದ ಎರಡೆರೆಡು ಚಿತ್ರಗಳು ಸಿದ್ಧವಾಗುತ್ತಿವೆ. ಈ ಸಿನಿಮಾಗಳ ಹಿಂದೆಯೂ ರಾಜಕೀಯ ಪ್ರೇರಿತ ಉದ್ದೇಶಗಳಿವೆಯೇ ಎಂಬ ಮಾತುಗಳು ಕೇಳಿ ಬರುತ್ತಿವೆ.