- ಬಿಜೆಪಿ ಸೋಲಿಗೆ ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದೇ ಕಾರಣ: ಆರೋಪ
- ಬಿ ಎಲ್ ಸಂತೋಷ್ ಪಕ್ಷ ಕಟ್ಟಿದ ಇತಿಹಾಸ ಹೊಂದಿಲ್ಲ: ರೇಣುಕಾಚಾರ್ಯ
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಗೈರು ಹಾಜರಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರು ಲೋಕಸಭಾ ಚುನಾವಣೆ ಪೂರ್ವಸಿದ್ಧತಾ ಸಭೆ ನಡೆಸಿರುವುದಕ್ಕೆ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿದೆ.
ಉದ್ದೇಶಪೂರ್ವಕವಾಗಿಯೇ ಯಡಿಯೂರಪ್ಪ ಅವರನ್ನು ಸಭೆಯಿಂದ ದೂರವಿಡುವ ಪ್ರಯತ್ನ ನಡೆದಿದೆ ಎನ್ನುವ ಅನುಮಾನ ಅವರ ಬೆಂಬಲಿಗರ ತಲೆಗೆ ದಟ್ಟವಾಗಿ ಹೊಕ್ಕಿದೆ. ಯಡಿಯೂರಪ್ಪ ಶಿವಮೊಗ್ಗ ಪ್ರವಾಸ ನಿಗದಿ ಬಳಿಕವೇ ಬೆಂಗಳೂರಿನಲ್ಲಿ ಸಭೆ ನಡೆಸಲು ನಿರ್ಧರಿಸಿದ್ದು, ಯಡಿಯೂರಪ್ಪನವರಿಗೆ ಮಾಡುವ ಅವಮಾನ ಎನ್ನಲಾಗುತ್ತಿದೆ.
ಬಿಜೆಪಿಯ ರಾಜ್ಯ ಕಚೇರಿಯಲ್ಲಿ ಗುರುವಾರ ನಡೆದ ಸಭೆಗೆ ಗೈರಾಗಿರುವ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಈಗ ಬಿ ಎಲ್ ಸಂತೋಷ್ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ನಿನ್ನೆ ಸಭೆ ಮಾಡಿದವರು ಬಿಜೆಪಿ ಕಟ್ಟಿ ಬೆಳೆಸಿದವರಲ್ಲ. ಕೇವಲ 2006-07 ರಲ್ಲಿ ಸಂಘ ಪರಿವಾರದಿಂದ ಬಂದವರು. ಈಗ ಇಡೀ ಪಕ್ಷವನ್ನು ಕಂಟ್ರೋಲ್ ಮಾಡಲು ಹೊರಟಿದ್ದಾರೆ. ಅವರ ಪರವಾಗಿ ಒಂದು ಗ್ಯಾಂಗ್ ಇದೆ” ಎಂದು ಕಿಡಿಕಾರಿದ್ದಾರೆ.
“ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಯಡಿಯೂರಪ್ಪ ಅವರನ್ನು ಕಡೆಗಣಿಸಿರುವ ಶಾಪವೇ ಕಾರಣ. ತಾನು ಮುಖ್ಯಮಂತ್ರಿಯಾಗಬೇಕು ಎನ್ನುವ ಆಸೆಯಿಂದ ಅವರು ಹೀಗೆಲ್ಲ ನಡೆದುಕೊಳ್ಳುತ್ತಿದ್ದಾರೆ. ಎಂದಿಗೂ ಅವರು ಜನರಿಂದ ಆಯ್ಕೆಯಾದವರಲ್ಲ. ಪಕ್ಷ ಕಟ್ಟಿದ ಇತಿಹಾಸ ಹೊಂದಿಲ್ಲ” ಎಂದು ವಾಗ್ದಾಳಿ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಬಿ ಎಲ್ ಸಂತೋಷ್ ಮೊದಲು ತಮ್ಮ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲಿ: ಜಗದೀಶ್ ಶೆಟ್ಟರ್ ತಿರುಗೇಟು
“ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದರೂ ಅವರ ಕೈ ಕಟ್ಟಿ ಹಾಕಲಾಗಿತ್ತು. ಅವರದ್ದು ಸರ್ವಾಧಿಕಾರಿ ಧೋರಣೆ ಇದೆ. ಯಾರು ಯಡಿಯೂರಪ್ಪ ವಿರುದ್ಧವಾಗಿ ಮಾತಾಡುತ್ತಾರೋ ಅಂತವರಿಗೆ ವರಿಷ್ಠರ ಭೇಟಿಗೆ ಸಮಯ ಕೊಡಿಸುತ್ತಾರೆ. ಈ ಬಗ್ಗೆ ಸಾಕಷ್ಟು ಪತ್ರಗಳಿವೆ” ಎಂದು ಹೇಳಿದ್ದಾರೆ.
“ಬೇರೆಯವರ ತರ ನಾನು ರೆಡಿಮೇಡ್ ಫುಡ್ ಅಲ್ಲ. ಹೋರಾಟದ ಫಲವಾಗಿ ಜನ ನನ್ನ ಶಾಸಕನನ್ನಾಗಿ ಮಾಡಿದ್ದಾರೆ. ನನ್ನ ರಾಜಕೀಯದ ಗಾಢ್ ಫಾದರ್ ಯಡಿಯೂರಪ್ಪ. ಇವರು ಯಡಿಯೂರಪ್ಪನವರನ್ನು ಇಳಿಸಿದ್ದಲ್ಲದೇ ಅವರ ಮನೆಗೆ ಯಾರ್ಯಾರು ಹೋಗುತ್ತಾರೆ ಎಂದು ಕಣ್ಣಿಟ್ಟಿದ್ದಾರೆ” ಎಂದು ಹರಿಹಾಯ್ದರು.
“ಯಡಿಯೂರಪ್ಪ ವಿರುದ್ಧ ಷಡ್ಯಂತ್ರ ಮಾಡುವವರು ಬಿಜೆಪಿ ಕಚೇರಿಯಲ್ಲಿದ್ದಾರೆ. ಇಡೀ ಪಕ್ಷ ಅವರ ಶಿಷ್ಯರ ಕೈಯಲ್ಲಿ ಇರಬೇಕು ಎಂದು ಯಡಿಯೂರಪ್ಪನವರನ್ನು ಸೈಡ್ ಲೈನ್ ಮಾಡಿದರು. ಬಿಜೆಪಿಯಲ್ಲಿರುವ ಲಿಂಗಾಯತ ನಾಯಕರನ್ನೆಲ್ಲ ಮುಗಿಸಿದರು. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಈಶ್ವರಪ್ಪ, ಲಕ್ಷ್ಮಣ ಸವದಿಗೆ ಟಿಕೆಟ್ ಕೊಡದೇ ಕಡೆಗಣಿಸಿದರು” ಎಂದು ಬಿ ಎಲ್ ಸಂತೋಷ್ ವಿರುದ್ಧ ಸಾಲು ಸಾಲು ಆರೋಪಗಳನ್ನು ರೇಣುಕಾಚಾರ್ಯ ಮಾಡಿದರು.