ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯಿಲ್ಲದೆ ಕಾಂಗ್ರೆಸ್ ಪ್ರಚಾರ ನಡೆಸುತ್ತಿದೆ. ಜಿಪಂ ಸದಸ್ಯನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಕಾಂಗ್ರೆಸ್ ಮತ್ತೆ ಟಿಕೆಟ್ ನೀಡಿದೆ. ಆದರೆ, ವಿನಯ್ ಅವರಿಗೆ ಧಾರವಾಡ ಪ್ರವೇಶಿಸದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರ್ಬಂಧ ಹೇರಿದ್ದು, ವಿನಯ್ ಪರವಾಗಿ ಅವರು ಪತ್ನಿ ಪ್ರಚಾರ ನಡೆಸುತ್ತಿದ್ದಾರೆ.
ವಿಶೇಷ ನ್ಯಾಯಾಲಯದ ಆದೆಶವನ್ನು ಪ್ರಶ್ನಿಸಿ ವಿಜಯ್ ಅವರು ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್ ಕೂಡ ಅನುಮತಿ ನೀಡಲು ಶುಕ್ರವಾರ ನಿರಾಕರಿಸಿದೆ. ಈ ನಡುವೆ, ವಿನಯ್ ಪರವಾಗಿ ಅವರ ಪತ್ನಿ ಶಿವಲೀಲಾ ಅವರೇ ನಾಮಪತ್ರ ಸಲ್ಲಿಸಿದ್ದರು. ಇದೀಗ, ಕ್ಷೇತ್ರದಲ್ಲಿ ಪ್ರಚಾರದ ಹೊಣೆಹೊತ್ತಿದ್ದಾರೆ. ಅವರೊಂದಿಗೆ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರು ಸಾಥ್ ನೀಡುತ್ತಿದ್ದಾರೆ. ಅವರು ಪಕ್ಷದ ಸ್ಥಳೀಯ ಕಾರ್ಯಕರ್ತರೊಂದಿಗೆ ಪ್ರತಿ ಹಳ್ಳಿಗೆ ಭೇಟಿ ನೀಡಿ ಮತದಾರರೊಂದಿಗೆ ಸಭೆಗಳನ್ನು ನಡೆಸುತ್ತಿದ್ದಾರೆ.
“ಪ್ರಚಾರ ಚಟುವಟಿಕೆಗಳ ಕುರಿತು ಯೋಜಿಸಲು ಮತ್ತು ದಿನಚರಿ ಪಾಲಿಸಲು ಹಿರಿಯರ ಸಹಾಯ ಪಡೆಯುತ್ತಿದ್ದೇನೆ. ನಮ್ಮ ಕ್ಷೇತ್ರದ ಎಲ್ಲ ಗ್ರಾಮಗಳ ಜನರೊಂದಿಗೆ ಸಭೆ ನಡೆಸುತ್ತೇನೆ. ಗ್ರಾಮೀಣ ಭಾಗದ ರೈತರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿರುವ ಕಾರಣ ಜನರು ನೀಡಿದ ಸಮಯಕ್ಕೆ ನಾವು ಭೇಟಿ ನೀಡುತ್ತೇವೆ. ಮಹಿಳೆಯರು ಸೇರಿದಂತೆ ಮತದಾರರು ಬೆಂಬಲ ಸೂಚಿಸುತ್ತಿದ್ದಾರೆ. ವಿನಯ್ ಅವರನ್ನು ಗೆಲ್ಲಿಸಬೇಕು. ಆ ಮೂಲಕ ಅವರ ಸಮಸ್ಯೆಗಳನ್ನು ಬಗೆಹರಿಸಬೇಕು,” ಎಂದು ಶಿವಲೀಲಾ ಹೇಳಿದ್ದಾರೆ.
“ವಿನಯ್ ಅವರು ಸಚಿವ ಮತ್ತು ಶಾಸಕರಾಗಿದ್ದ ಅವಧಿಯಲ್ಲಿ ಕೈಗೊಂಡ ಗ್ರಾಮಗಳಲ್ಲಿ ರಸ್ತೆ, ಕೆರೆಗಳ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಎತ್ತಿ ತೋರಿಸುತ್ತೇನೆ. ಪ್ರಚಾರವನ್ನು ಮುನ್ನಡೆಸುವುದು ನನಗೆ ದೊಡ್ಡ ಸವಾಲಾಗಿದೆ. ಆದರೆ, ಎಲ್ಲ ಮತದಾರರನ್ನು ತಲುಪಲು ನಾನು ನನ್ನ ಪ್ರಯತ್ನ ಮಾಡುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಚುನಾವಣೆ 2023 | ಹಲವು ಷರತ್ತುಗಳೊಂದಿಗೆ ಕಾಂಗ್ರೆಸ್ಗೆ ದಸಂಸ ಬೆಂಬಲ
ಧಾರವಾಡದ ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಅವರಿಗೆ ಕೆಲವು ಷರತ್ತುಗಳನ್ನು ವಿಧಿಸಿ, ವಿಶೇಷ ನ್ಯಾಯಾಲಯವು ಜಾಮೀನು ನೀಡಿತ್ತು. ಅದರಲ್ಲಿ, ಪ್ರಕರಣದ ವಿಚಾರಣೆ ಮುಗಿಯುವವರೆಗೂ ಧಾರವಾಡಕ್ಕೆ ಪ್ರವೇಶಿಸಬಾರದೆಂದು ತಾಕೀತು ಮಾಡಿತ್ತು. ತನ್ನ ಆದೇಶವನ್ನು ಮತ್ತೊಮ್ಮೆ ಪರಿಶೀಲಿಸಿ, ಧಾರವಾಡ ಪ್ರವೇಶಕ್ಕೆ ಅನುಮತಿ ನೀಡುವಂತೆ ವಿನಯ್ ಅರ್ಜಿ ಸಲ್ಲಿಸಿದ್ದರು.
ಆದರೆ, ಅನುಮತಿ ನೀಡಲು ನಿರಾಕರಿಸಿದ್ದ ಕೋರ್ಟ್, ಅರ್ಜಿಯನ್ನ ವಜಾಗೊಳಿಸಿತ್ತು. ಇದೀಗ, ನಿರ್ಬಂಧವನ್ನು ತೆರವುಗೊಳಿಸುವಂತೆ ಕೋರಿ ವಿನಯ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ನಲ್ಲಿ ವಿನಯ್ ಕುಲಕರ್ಣಿಗೆ ಹಿನ್ನಡೆಯಾಗಿದೆ.