- ಪುಣೆಯ ರಾಜಾ ಬಹದ್ದೂರ್ ಮಿಲ್ನಲ್ಲಿ ಆಯೋಜಿಸಲಾಗಿದ್ದಎ ಆರ್ ರೆಹಮಾನ್ ಕಾರ್ಯಕ್ರಮ
- ಸಂಗೀತ ಕಾರ್ಯಕ್ರಮದ ಅವಕಾಶಕ್ಕೆ ಪುಣೆಯ ಜನತೆಗೆ ರೆಹಮಾನ್ ಟ್ವಿಟರ್ನಲ್ಲಿ ಧನ್ಯವಾದ
ಆಸ್ಕರ್ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅವರ ಸಂಗೀತ ಕಾರ್ಯಕ್ರಮಕ್ಕೆ ಮಹಾರಾಷ್ಟ್ರ ಪೊಲೀಸರು ತಡೆ ನೀಡಿದ್ದಾರೆ.
ರಾತ್ರಿಯ ನಿಗದಿತ ಸಮಯಕ್ಕಿಂತ ಹೆಚ್ಚು ಕಾಲ ಕಾರ್ಯಕ್ರಮ ನಡೆಯುತ್ತಿತ್ತು ಎಂದು ಹೇಳಲಾಗಿದೆ.
ಭಾನುವಾರ (ಏಪ್ರಿಲ್ 30) ರಾತ್ರಿ 10 ಗಂಟೆಯ ನಂತರವೂ ಸಂಗೀತ ಕಾರ್ಯಕ್ರಮ ಮುಂದುವರಿದ ಕಾರಣ ಪುಣೆ ಪೊಲೀಸರು ಮಧ್ಯೆ ಪ್ರವೇಶಿಸಿ ಕಾರ್ಯಕ್ರಮ ನಿಲ್ಲಿಸುವಂತೆ ಸೂಚಿಸಿರುವುದು ವರದಿಯಾಗಿದೆ.
ಭಾನುವಾರ ರಾತ್ರಿ ಮಹಾರಾಷ್ಟ್ರದ ಪುಣೆಯ ರಾಜಾ ಬಹದ್ದೂರ್ ಮಿಲ್ನಲ್ಲಿ ಎ ಆರ್ ರೆಹಮಾನ್ ಅವರ ‘ಲೈವ್ ಕನ್ಸರ್ಟ್’ ನಡೆಯುತ್ತಿತ್ತು.
ಕಾರ್ಯಕ್ರಮದಲ್ಲಿ ರೆಹಮಾನ್ ಅವರ ಸಾವಿರಾರು ಅಭಿಮಾನಿಗಳು ಭಾಗವಹಿಸಿದ್ದರು. ರಾತ್ರಿ 8 ಗಂಟೆಗೆ ಸಂಗೀತ ಕಾರ್ಯಕ್ರಮ ಆರಂಭವಾಗಿತ್ತು. 10 ಗಂಟೆಯ ನಂತರವೂ ಕಾರ್ಯಕ್ರಮ ಮುಂದುವರಿದಿತ್ತು.
ಕಾರ್ಯಕ್ರಮ ನಡೆಯುತ್ತಿರುವ ಸಂದರ್ಭದಲ್ಲಿ ಪೊಲೀಸರೊಬ್ಬರು ವೇದಿಕೆ ಮೇಲೆ ಬಂದಿದ್ದಾರೆ. ಸನ್ನೆ ಮೂಲಕ ಕೈಗಡಿಯಾರ ತೋರಿಸಿ ಕಾರ್ಯಕ್ರಮ ನಿಲ್ಲಿಸುವಂತೆ ಕಲಾವಿದರಿಗೆ ಸೂಚಿಸಿದ್ದಾರೆ.
ಬಳಿಕ ಎ ಆರ್ ರೆಹಮಾನ್ ಅವರ ಬಳಿ ಬಂದು ಕಾರ್ಯಕ್ರಮ ನಿಲ್ಲಿಸುವಂತೆ ಸೂಚಿಸಿದ್ದಾರೆ. ಈ ಕುರಿತು ದೃಶ್ಯದ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ.
“ರಾತ್ರಿ 10 ಗಂಟೆಯ ನಂತರವೂ ರೆಹಮಾನ್ ಅವರ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ನಿಗದಿ ಮಾಡಿದ ಸಮಯದ ಗಡುವು ಮೀರಿದ್ದರಿಂದ ನಾವು ರೆಹಮಾನ್ ಮತ್ತು ಕಲಾವಿದರಿಗೆ ಕಾರ್ಯಕ್ರಮ ನಿಲ್ಲಿಸುವಂತೆ ಹೇಳಿದೆವು. ನಮ್ಮ ಮನವಿ ಪುರಸ್ಕರಿಸಿ ಅವರು ಕಾರ್ಯಕ್ರಮ ನಿಲ್ಲಿಸಿದರು” ಎಂದು ಬುಂಡ್ಗಾರ್ಡನ್ ಪೊಲೀಸ್ ಠಾಣೆಯ ಅಧಿಕಾರಿ ಸಂತೋಷ್ ಪಾಟೀಲ್ ತಿಳಿಸಿದರು.
ಎ ಆರ್ ರೆಹಮಾನ್ ಅವರು ಸೌಜನ್ಯದಿಂದ ವರ್ತಿಸಿ, ಪೊಲೀಸರಿಗೆ ಮನವಿ ಸ್ಪಂದಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸಿಸಲಾಗಿದೆ.
ಯಾವುದೇ ವಾಗ್ವಾದ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಸಂಗೀತ ಕಾರ್ಯಕ್ರಮ ನಡೆಸಿದ ಸಂಬಂಧ ರೆಹಮಾನ್ ಅವರು ಸೋಮವಾರ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪುಣೆ ಜನತೆಗೆ ಧನ್ಯವಾದ ಸಲ್ಲಿಸಿದ್ದಾರೆ.
“ಸಂಗೀತ ಕಾರ್ಯಕ್ರಮದ ಸುಖಭಾವನೆ ನೀಡಿದ್ದಕ್ಕಾಗಿ ಧನ್ಯವಾದ” ಎಂದು ಹೇಳಿದ್ದಾರೆ. ಆದರೆ ರೆಹಮಾನ್ ಸಂಗೀತ ಕಾರ್ಯಕ್ರಮಕ್ಕೆ ತಡೆ ನೀಡಿರುವ ಬಗ್ಗೆ ಉಲ್ಲೇಖಿಸಿಲ್ಲ.
ಈ ಸುದ್ದಿ ಓದಿದ್ದೀರಾ? ಕಟ್ಟುಪಾಡು ದಾಟಿ ಹೃದಯ ಸ್ಪರ್ಶಿಸುವ ಬ್ರಹ್ಮಚರ್ಯದ ಗೋಳಿನ ಕತೆ ‘ರಾಘವೇಂದ್ರ ಸ್ಟೋರ್ಸ್’
ಆದರೆ, ರೆಹಮಾನ್ ಅವರ ಆಪ್ತರೊಬ್ಬರು ಪೊಲೀಸರ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. “ಕಾರ್ಯಕ್ರಮ ನಿಲ್ಲಿಸಲು ಆಯೋಜಕರ ಬಳಿ ಮಾತನಾಡುವುದನ್ನು ಬಿಟ್ಟು ಒಬ್ಬ ಪದ್ಮಭೂಷಣ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕರಿಗೆ ಬೊಟ್ಟು ಮಾಡುವುದು ತರವಲ್ಲ” ಎಂದು ಹೇಳಿದ್ದಾರೆ.
“ಎ ಆರ್ ರೆಹಮಾನ್ ಅವರು ಈಗ ಕೊನೆಯ ಗೀತೆ ಹಾಡುತ್ತಿದ್ದೇನೆ ಎಂದು ಹೇಳಿದ್ದರು. ಆದರೂ ಪೊಲೀಸ್ ಅಧಿಕಾರಿ ವೇದಿಕೆಗೆ ಹೋಗಿ ರೆಹಮಾನ್ ಅವರತ್ತ ಬೊಟ್ಟು ಮಾಡಿ ಕಾರ್ಯಕ್ರಮ ನಿಲ್ಲಿಸುವಂತೆ ಹೇಳಿದರು. ಪೊಲೀಸರು ಕಾರ್ಯಕ್ರಮದ ಆಯೋಜಕರ ಬಳಿ ಮಾತನಾಡಬೇಕಿತ್ತು” ಎಂದು ಅಸಮಾಧಾನ ವ್ಯಕ್ತಪಡಿಸಿದರು.