ದಸರಾ ಆಹಾರ ಮೇಳದಲ್ಲಿ ಮಳಿಗೆ ತೆರೆಯಲು ಅಧಿಕಾರಿಗಳು ಬಿಡುತ್ತಿಲ್ಲ. ಅಧಿಕ ಬಾಡಿಕೆ ಕಟ್ಟಬೇಕೆಂದು ತೊಂದರೆ ಕೊಡುತ್ತಿದ್ದಾರೆ ಎಂದು ಪ್ರಕೃತಿ ಆದಿವಾಸಿ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಕೃಷ್ಣಯ್ಯ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಅವರು, “ಅರಣ್ಯ ರಕ್ಷಣೆಯಲ್ಲಿ ನಾವು ಇಲಾಖೆಗಳಿಗೆ ಸಹಾಯ ಮಾಡುತ್ತೇವೆ. ಆದರೆ, ವರ್ಷಕ್ಕೊಮ್ಮೆ ಆಹಾರ ಮೇಳಕ್ಕೆ ಬಂದಾಗ ಹೆಚ್ಚು ಬಾಡಿಗೆ ದರ ವಿಧಿಸುವುದು ಸರಿಯಾದ ನಡೆಯಲ್ಲ. 2014ರಿಂದ ದಸರಾ ಆಹಾರ ಮೇಳದಲ್ಲಿ ಮಳಿಗೆ ಹಾಕಿಕೊಳ್ಳುತ್ತಿದ್ದೇವೆ. ಅಂದಿನಿಂದಲೂ ಯಾರೂ ಬಾಡಿಗೆ ಕೇಳಿಲ್ಲ. ಅದರೆ ಈ ವರ್ಷ ಮಳಿಗೆ ಹಾಕಿಕೊಳ್ಳಲು ಒಂದು ಲಕ್ಷ ರೂ. ಬಾಡಿಗೆ ಕೇಳುತ್ತಿದ್ದಾರೆ” ಎಂದು ಆರೋಪಿಸಿದರು.
“ಅನುಮತಿ ಇಲ್ಲದೇ ನಿಯಮ ಉಲ್ಲಂಘಿಸಿ ಆಹಾರ ಮೇಳದಲ್ಲಿ ಮಳಿಗೆ ತೆರೆದಿದ್ದಾರೆ ನಮ್ಮ ವಿರುದ್ಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ನೀಡಿದೆ. ಎಚ್.ಡಿ.ಕೋಟೆ ತಾಲೂಕಿನ ವಿವಿಧ ಹಾಡಿಗಳ 50 ಮಂದಿ ದಸರಾದಲ್ಲಿ ಮೈಸೂರಿಗೆ ಬಂದು ಬುಡಕಟ್ಟು ಆಹಾರವನ್ನು ನಗರದವರಿಗೆ ಪರಿಚಯಿಸುತ್ತಿದ್ದಾರೆ. ಶೆಡ್ ಹಾಕಿಕೊಳ್ಳುವುದಕ್ಕೆ 2 ಲಕ್ಷ ರೂ. ಬೇಕು. ಆಹಾರ ಸಾಮಗ್ರಿ ಖರೀದಿಸಲು 1 ಲಕ್ಷ ರೂ. ಬೇಕು. ಈಗ ಬಾಡಿಗೆ 1 ಲಕ್ಷ ರೂ. ಕೇಳಿದರೆ, ನಾವು ಎಲ್ಲಿಗೆ ಹೋಗಬೇಕು” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಈ ಹಿಂದೆ ನಮಗೆ ಎರಡು ಸ್ಟಾಲ್ ಕೊಡುತ್ತಿದ್ದರು. ಬಾಡಿಗೆಯನ್ನೇನು ಕೇಳುತ್ತಿರಲಿಲ್ಲ. ಆಹಾರ ಮೇಳದಲ್ಲಿ ಬುಡಕಟ್ಟು ಸಮುದಾಯಗಳಾದ ಜೇನುಕುರುಬ, ಎರವ, ಸೋಲಿಗ, ಡೋಂಗ್ರಿ ಗ್ರೆಸಿಯಾ, ರಾಮನಗರದ ಇರುಳಿಗ ಜನರು ಬರುತ್ತಾರೆ. ಬಂದ ಲಾಭದಲ್ಲಿ ಹಂಚಿಕೊಳ್ಳುತ್ತೇವೆ. ಕಳೆದ ದಸರಾದಲ್ಲಿ ಏನೂ ಆದಾಯ ಬರಲಿಲ್ಲ. 2019ರಲ್ಲಿ ₹1 ಲಕ್ಷ ಲಾಭ ಇತ್ತು. ಅದರಿಂದ ಸಮುದಾಯದವರಿಗೆ ರಗ್ಗು, ಸೊಳ್ಳೆ ಪರದೆ ಕೊಟ್ಟಿದ್ದೆವು. ಲಾಭವನ್ನೂ ಸಮುದಾಯದವರಿಗೆ ಖರ್ಚು ಮಾಡುತ್ತೇವೆ. ಈಗ ಬಾಡಿಗೆ ಕೇಳುತ್ತಿರುವುದರಿಂದ ನೋವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು. ‘
“ಸ್ಥಳಕ್ಕೆ ಮುಡಾ ಎಇಇ ಸಂಪತ್ ಕುಮಾರ್ ಹಾಗೂ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅವರೂ ಬಂದಿದ್ದರು. ಆದಿವಾಸಿಗಳಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಲು ಹೋದರೆ, ಆಹಾರ ಮೇಳ ಉಪಸಮಿತಿಯ ಕಾರ್ಯಾಧ್ಯಕ್ಷರೂ ಆದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕಿ ಕುಮುದಾ ಅವರಲ್ಲಿ ಕೇಳಿ ಎನ್ನುತ್ತಾರೆ. ಹಾಗಾಗಿ ಸಚಿವ ಮಹದೇವಪ್ಪ ಅವರಲ್ಲಿ ಮನವಿ ಸಲ್ಲಿಸುತ್ತೇವೆ” ಎಂದರು.