ಕರ್ನಾಟಕ ರಾಜ್ಯ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರನ್ನು ಪದಚ್ಯುತಿಗೊಳಿಸಬೇಕು ಎಂದು ಆಗ್ರಹಿಸಿ ‘ನೈಜ ಹೋರಾಟಗಾರರ ವೇದಿಕೆ’ ಸಂಘಟನೆಯು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದೆ.
‘ನೈಜ ಹೋರಾಟಗಾರರ ವೇದಿಕೆ’ಯ ಮುಖಂಡ ಎಚ್.ಎಂ ವೆಂಕಟೇಶ್ ಅವರ ನೇತೃತದ್ವ ನಿಯೋಗವು, ಸ್ಪೀಕರ್ ಯು.ಟಿ. ಖಾದರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿತು.
ಮನವಿಯಲ್ಲಿ, ‘ಪ್ರಸ್ತುತ ಲೋಕಾಯುಕ್ತ ನ್ಯಾಯಮೂರ್ತಿಯಾಗಿರುವ ಬಿ.ಎಸ್. ಪಾಟೀಲ್ ಮತ್ತು ಅವರ ಕುಟುಂಬದ ಮೇಲೆ ಗಂಭೀರವಾದ ಆರೋಪ, ಆಪಾದನೆಗಳಿದ್ದರೂ ಸಹಿತ ಅವರ ಮೇಲೆ ಎಫ್ಐಆರ್ ಮಾಡದಂತೆ ಲೋಕಾಯುಕ್ತರು ಪೊಲೀಸರ ಮೇಲೆ ಪ್ರಭಾವ ಬೀರಿದ್ದಾರೆ” ಎಂದು ‘ನೈಜ ಹೋರಾಟಗಾರರ ವೇದಿಕೆ’ ಆರೋಪಿಸಿದೆ.
‘ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾ. ಬಿ.ಎಸ್.ಪಾಟೀಲ್ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿಧಾನಸಭೆಯಲ್ಲಿ ನಿರ್ಣಯವನ್ನು ಮಂಡಿಸಬೇಕು. ಅವರನ್ನು ಲೋಕಾಯುಕ್ತ ಸ್ಥಾನದಿಂದ ಪದಚ್ಯುತಿಗೊಳಿಸಬೇಕು. ಅವರ ಸ್ಥಾನಕ್ಕೆ ಪ್ರಾಮಾಣಿಕ ನ್ಯಾಯಮೂರ್ತಿ ಒಬ್ಬರನ್ನು ಲೋಕಾಯುಕ್ತರನ್ನಾಗಿ ನೇಮಿಸಿ ಲೋಕಾಯುಕ್ತ ಸಂಸ್ಥೆಯ ಘನತೆಯನ್ನು ಎತ್ತಿ ಹಿಡಿಯಬೇಕು’ ಎಂದು ಯು.ಟಿ. ಖಾದರ್ ಅವರನ್ನು ‘ನೈಜ ಹೋರಾಟಗಾರರ ವೇದಿಕೆ’ ಒತ್ತಾಯಿಸಿದೆ.