- ‘ನೃತ್ಯ ಮಾಡಲು ಬಾರದವನು ಅಂಗಳ ಡೊಂಕು ಅಂದನಂತೆ‘
- ‘ಕೊಟ್ಟ ಭರವಸೆ ಈಡೇರಿಸದ ಕಾಂಗ್ರೆಸ್ ಪ್ರತಿಭಟನೆ ಮೂರ್ಖತನ‘
ನೃತ್ಯ ಮಾಡಲು ಬಾರದವ ಅಂಗಳ ಡೊಂಕು ಅಂದನಂತೆ – ಈ ಗಾದೆಯಂತೆ ಕಾಂಗ್ರೆಸ್ನ ಪರಿಸ್ಥಿತಿ ಆಗಿದೆ. ಕಾಂಗ್ರೆಸ್ ಬಿಟ್ಟಿ ಭಾಗ್ಯ ಘೋಷಿಸಿ ಅದನ್ನು ಜಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ ವೆಬ್ ಸೈಟ್ ಹ್ಯಾಕ್ ಮಾಡಲಾಗಿದೆ ಎಂಬ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದರು.
ಕೇಂದ್ರ ಸರ್ಕಾರ ಹತ್ತು ವರ್ಷಗಳಿಂದ ಹತ್ತು ಕೆ.ಜಿ ಅಕ್ಕಿ ನೀಡಿದೆ. ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ₹27 ಕ್ಕೆ ಒಂದು ಕೆ.ಜಿ ಅಕ್ಕಿಯನ್ನು ಕೇಂದ್ರ ಸರ್ಕಾರ ಕೊಡುತ್ತಿತ್ತು. ₹3 ಮಾತ್ರವೇ ರಾಜ್ಯ ಸರ್ಕಾರ ಕೊಡುತ್ತಿದ್ದರೂ ಭಾವಚಿತ್ರ ಸಿದ್ದರಾಮಯ್ಯರದ್ದೇ ಇತ್ತು. ಚುನಾವಣೆ ಬಂದಾಗ ಪ್ರಣಾಳಿಕೆಯಲ್ಲಿ ಹತ್ತು ಕೆ.ಜಿ ಅಕ್ಕಿ ಕೊಡುತ್ತೇವೆ ಎಂದಿದ್ದು ಕಾಂಗ್ರೆಸ್ ಇಂದು ವಿಫಲವಾಗಿದೆ. ಆವತ್ತು ಕೇಂದ್ರ ಸರ್ಕಾರ ಅಕ್ಕಿ ಕೊಟ್ಟರೆ ಮಾತ್ರವೇ ಕೊಡುತ್ತೇವೆ ಎಂದು ಹೇಳಿದ್ರಾ? ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಐದು ಕೆ.ಜಿ ಅಕ್ಕಿ ಕೊಡುತ್ತಿದೆ. ಕೋವಿಡ್ ಬಂದಾಗಲೂ ನೀಡುತ್ತಿತ್ತಿತ್ತು. ಆದರೆ, ಎರಡು ಲಕ್ಷ ಟನ್ ಅಕ್ಕಿಗೆ ಪ್ರಧಾನಿ ಬಳಿ ಯಾರೂ ಬೇಡಿಕೆ ಇಟ್ಟಿಲ್ಲ. ಸುಮ್ಮನೆ ಪ್ರಚಾರ ಮತ್ತು ರಾಜಕಾರಣ ಮಾಡಲು ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ನ ಹೋರಾಟಕ್ಕೆ ನಾನು ಅಭಿನಂದನೆ ಸಲ್ಲಿಸ್ತೇನೆ. ಅವರ ಭರವಸೆಯಂತೆ ಅಕ್ಕಿ ಕೊಡಲು ಆಗದ್ದಕ್ಕೆ ಕಾಂಗ್ರೆಸ್ ವಿರುದ್ದವೇ ಪ್ರತಿಭಟನೆ ಮಾಡ್ತಾ ಇದ್ದಾರೆ. ಇವರ ಸರ್ಕಾರದ ವಿರುದ್ಧ ಮಾಡೊ ಪ್ರತಿಭಟನೆ ಮೂರ್ಖತನ. ಇದೆಲ್ಲಾ ಆದ ಮೇಲೆ ಈಗ ಹ್ಯಾಕ್ ಆರೋಪ ಮಾಡ್ತಾ ಇದ್ದಾರೆ ಎಂದು ಕುಟುಕಿದರು.
ಈ ಸುದ್ದಿ ಓದಿದ್ದೀರಾ? ವಿಧಾನಸಭೆ ಡಿಜಿಟಲೈಜೇ಼ಷನ್ ಮಾಡುವ ಬಗ್ಗೆ ಶೀಘ್ರ ಕ್ರಮ: ಸ್ಪೀಕರ್ ಖಾದರ್
ಕೇಂದ್ರ ಸರ್ಕಾರ ಇಂತಹ ಕೆಲಸ ಮಾಡುವುದಿಲ್ಲ. ಬದಲಿಗೆ ಇದು ಕಾಂಗ್ರೆಸ್ ವಿಫಲತೆಯಾಗಿದೆ. ಯಾವುದೇ ಹ್ಯಾಕ್ ಕೇಂದ್ರ ಅಥವಾ ಯಾವುದೇ ಸರ್ಕಾರ ಮಾಡಲ್ಲ. ಹಾಗಿದ್ರೆ ಇವರ ಸರ್ಕಾರ ಈಗ ಹ್ಯಾಕ್ ಮಾಡುತ್ತಾ? ಎಂದ ಅವರು, ಬಿಜೆಪಿ ಕೈಯ್ಯಲ್ಲಿರೋ ಪಾಲಿಕೆ ಹಾಗೂ ಬೇರೆ ಆಡಳಿತದಲ್ಲಿ ಇವರಿಗೆ ಹ್ಯಾಕ್ ಮಾಡಲು ಆಗಲಿದೆಯಾ? ಈ ಆರೋಪವನ್ನು ಎಲ್ಲರೂ ಹಾಕಬಹುದು, ಇವರಿಗೆ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ಗೆ ನೈತಿಕತೆ ಇದ್ದರೆ ಜನರಿಗೆ ಹತ್ತು ಕೆ.ಜಿ ಅಕ್ಕಿ ಕೊಡಲಿ. ಕೇಂದ್ರ ಸರ್ಕಾರ ಯಾವುದೇ ಅಕ್ಕಿ ಕಡಿತ ಮಾಡಿಲ್ಲ. ಇಲ್ಲಿ ಮಾತ್ರ ನಮ್ಮ ವಿರೋಧ ಪಕ್ಷದ ಸರ್ಕಾರ ಇಲ್ಲ, ಕೆಲವು ರಾಜ್ಯದಲ್ಲಿ ಇದೆ. ಎಲ್ಲೂ ಕೇಂದ್ರ ಸರ್ಕಾರ ಇಂಥದ್ದನ್ನು ಮಾಡಿಲ್ಲ. ಸಿದ್ದರಾಮಯ್ಯ ಸುಮ್ಮನೆ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.