ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೆ.ಇ.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ನರಗುಂದದ ಕನ್ನಡ ಸಾಹಿತ್ಯ ಪರಿಷತ್ತು ನರಗುಂದ ತಾಲೂಕ ಘಟಕ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಕೆ. ಜೋಷಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು, ಕನ್ನಡ ಭಾಷೆ ಭವ್ಯ ಪರಂಪರೆಯನ್ನು ಹೊಂದಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದರು.
ʼಜನಪದ ಸಾಹಿತ್ಯʼ ವಿಷಯದ ಕುರಿತು ಎಸ್ ಎಸ್ ಪೂಜಾರ ವಿಶೇಷ ಉಪನ್ಯಾಸ ನೀಡಿದರು. ನಮ್ಮದು ಶ್ರೀಮಂತ ಜಾನಪದ ಪರಂಪರೆ. ಎಲ್ಲ ಸಾಹಿತ್ಯಕ್ಕೂ ಜನಪದ ಸಾಹಿತ್ಯವೇ ಮೂಲ. ಅಂತಹ ಜನಪದ ಸಾಹಿತ್ಯ ಇಂದು ಅಳಿವಿನಂಚಿನಲ್ಲಿದ್ದು, ಯುವ ಜನಾಂಗ ಜನಪದ ಸಾಹಿತ್ಯದ ಅಧ್ಯಯನ ಹಾಗೂ ಜನಪದ ಸಾಹಿತ್ಯ ಸಂಗ್ರಹ ಕಾರ್ಯಕ್ಕೆ ಮುಂದಾಗಬೇಕು. ಜನಪದರ ಜೀವನ ಕ್ರಮ, ಅವರ ಶ್ರಮ ಸಂಸ್ಕೃತಿ, ಹಾಡು, ಕಥೆ, ವಡಪು, ಸೋಬಾನೆ ಹಾಡು, ಕುಟ್ಟುವ ಬೀಸುವ ಹಾಡುಗಳು, ಗಾದೆಗಳು, ಮುಂತಾದವು ನಮ್ಮ ಕನ್ನಡ ಸಂಸ್ಕೃತಿಯ ಪ್ರತಿಬಿಂಬಗಳಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರೊ. ಬಿ.ಸಿ. ಹನಮಂತಗೌಡ್ರ, ಕನ್ನಡ ನಾಡಿನ ಜನಪದ ಸಂಸ್ಕೃತಿ ತುಂಬಾ ಅದ್ಭುತವಾದ ಸಂಸ್ಕೃತಿಯಾಗಿದ್ದು, ಈ ಸಂಸ್ಕೃತಿಯನ್ನು ಇಂದಿನ ಯುವಪೀಳಿಗೆಗೆ ಸರಿಯಾಗಿ ಪರಿಚಯಿಸಬೇಕು. ಅಂದಾಗ ಮಾತ್ರ ಜನಪದ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೊ. ಎಂ.ಡಿ. ಚಲವಾದಿ, ತುಳಸಿಗೇರಿ ಖ್ಯಾಡದ, ಎ.ಎಚ್. ಅಸೂಟಿ ಪಾಲ್ಗೊಂಡಿದ್ದರು. ಎಸ್.ಎಮ್. ಚೌವ್ಹಾಣ್ ಕಾರ್ಯಕ್ರಮ ನಿರೂಪಿಸಿದರು.