ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅಳವಡಿಸುವ ಗ್ರಾಮಗಳ ಮಾರ್ಗ ಸೂಚನಾ ಫಲಕಗಳು ಅಪರಿಚಿತ ಪ್ರಯಾಣಿಕರಿಗೆ ಮಾರ್ಗಸೂಚಿಯಾಗಿರಬೇಕು. ಆದರೆ, ಬೀದರ್-ವನಮಾರಪಳ್ಳಿ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಿರುವ ಭಾರತದ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಅಳವಡಿಸಿರುವ ಗ್ರಾಮಗಳ ಮಾರ್ಗಸೂಚಿ ಫಲಕಗಳು ತಪ್ಪು ತಪ್ಪಾಗಿ ಬರೆದು ಪ್ರಯಾಣಕರಿಗೆ ದಿಕ್ಕು ತಪ್ಪಿಸುವಂತಾಗಿದೆ.
ಬೀದರ್ದಿಂದ ಔರಾದ ತಾಲೂಕಿನ ಗಡಿ ಗ್ರಾಮ ವನಮಾರಪಳ್ಳಿವರೆಗೆ ಸುಮಾರು 45 ಕಿ.ಮೀ. ರಾಷ್ಟ್ರೀಯ ಹೆದ್ದಾರಿ-161A ಕಾಮಗಾರಿ ಬಹುತೇಕ ಮುಕ್ತಾಯ ಹಂತದಲ್ಲಿದೆ. ಹೆದ್ದಾರಿಯುದ್ದಕ್ಕೂ ಗ್ರಾಮಗಳ ಮಾರ್ಗಸೂಚಿ ಫಲಕಗಳನ್ನು ಅಳವಡಿಸಲಾಗಿದೆ. ಆದರೆ, ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿ ಬರೆಯಲಾದ ಕೆಲ ಗ್ರಾಮಗಳ ಹೆಸರುಗಳು ತಪ್ಪು ತಪ್ಪಾಗಿವೆ. ಈ ಮಾರ್ಗಸೂಚಿ ಫಲಕಗಳು ಸಂಚರಿಸುವ ವಾಹನಗಳಿಗೆ ನಾಮಫಲಕದಲ್ಲಿದ್ದ ಊರುಗಳ ಹೆಸರುಗಳನ್ನು ನೋಡಿ ವಾಹನ ಸವಾರರು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಮೂರು ಭಾಷೆಯ ನಾಮಫಲಕಗಳಲ್ಲಿ ಲೋಪದೋಷ:
ಬೀದರ್ ಗಡಿ ಜಿಲ್ಲೆ, ಅದರಲ್ಲೂ ಔರಾದ ತಾಲೂಕು ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯದ ಗಡಿ ಹಂಚಿಕೊಂಡ ತಾಲೂಕು ಆಗಿರುವ ಕಾರಣಕ್ಕೆ ಕೆಲವು ಕಡೆ ಕನ್ನಡ, ಇಂಗ್ಲಿಷ್ ಜೊತೆಗೆ ಹಿಂದಿ ಭಾಷೆಯಲ್ಲಿ ಗ್ರಾಮಗಳ ಹೆಸರು ಬರೆಯಲಾಗಿದೆ. ಆದರೆ ಕನ್ನಡ ಸೇರಿದಂತೆ ಹಿಂದಿ ಹಾಗೂ ಇಂಗ್ಲೀಷ್ ಭಾಷೆಯ ಫಲಕಗಳಲ್ಲಿ ಲೋಪದೋಷಗಳಾಗಿದ್ದು ವಿಪರ್ಯಾಸವೇ ಸರಿ.
ಬೀದರ್ ತಾಲೂಕಿನ ಮರಖಲ ಗ್ರಾಮದ ಹೆಸರನ್ನು ʼಮಾರ್ಕಾಲ್ʼ ಮತ್ತು ʼಮರಕಲʼ ಎಂದು, ‘ಮುಸ್ತಾಪುರ’ ಗ್ರಾಮಕ್ಕೆ ʼಮಸ್ತಾಪುರʼ ಎಂದು, ʼಬೋರಾಳʼ ಗ್ರಾಮಕ್ಕೆ ‘ಬೋರಾಲ್’ ಎಂದು, ʼವನಮಾರಪಳ್ಳಿʼ ಗ್ರಾಮಕ್ಕೆ ‘ಕನಮಾರಪಳ್ಳಿʼ ಸೇರಿದಂತೆ ಹಲವು ಗ್ರಾಮಗಳ ಹೆಸರು ತಪ್ಪಾಗಿ ಬರೆಯಲಾಗಿದೆ. ಇನ್ನು ʼಹೊಸ ಸೋಲಾರ್ ಸಸ್ಯʼ, ʼನದಿಗʼ ಎಂದು ಮೇಲ್ನೋಟಕ್ಕೆ ಇಂಗ್ಲೀಷ್ ದಿಂದ ಕನ್ನಡಕ್ಕೆ ಭಾಷಾಂತರಿಸಿ ಬರೆದ ಫಲಕಗಳು ಅಲ್ಲಲ್ಲಿ ತಲೆಯೆತ್ತಿ ನಿಂತಿವೆ. ಕೆಲ ಕಡೆ ಗ್ರಾಮಗಳ ಮೂಲ ಹೆಸರೇ ನಾಪತ್ತೆಯಾದರೆ, ಇನ್ನು ಕೆಲವು ʼಅರ್ಥವಿಲ್ಲದʼ ನಾಮಪಲಕಗಳು ಪ್ರಯಾಣಕರನ್ನು ಗೊಂದಲ ಮೂಡಿಸಿವೆ.
“ಬೀದರ್-ವನಮಾರಪಳ್ಳಿ ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ಅಳವಡಿಸಿದ ಗ್ರಾಮಗಳ ನಾಮಫಲಕಗಳಲ್ಲಿ ಹಲವು ಲೋಪದೋಷಗಳಿವೆ ಎಂಬುದು ಗೊತ್ತಾಗಿದೆ. ಅದರಲ್ಲೂ ಕನ್ನಡ ಹೆಸರೇ ತಪ್ಪು ತಪ್ಪಾಗಿ ಬರೆದಿರುವುದು ಪ್ರಮಾದವೇ ಸರಿ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕೂಡಲೇ ಸರಿಪಡಿಸುವಂತೆ ತಿಳಿಸುವೆ” ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಈದಿನ.ಕಾಮ್ ಜೊತೆಗೆ ಮಾತನಾಡಿ ಹೇಳಿದರು.
“ಗ್ರಾಮಗಳ ನಾಮಫಲಕ ಸಿದ್ದಪಡಿಸುವಾಗ ಅಲ್ಲಿನ ಗ್ರಾಮಸ್ಥರಿಗೆ ಕೇಳಲಾಗಿದೆ. ಆದರೂ ಸರಿಯಾದ ತಿಳಿವಳಿಕೆ ಇಲ್ಲದ್ದ ಕಾರಣ ಈ ಪ್ರಮಾದ ಆಗಿರಬಹುದು. ತಪ್ಪುಗಳಾಗಿರುವ ಎಲ್ಲ ನಾಮಫಲಕಗಳು ಸರಿಪಡಿಸಿ ಸರಿಯಾದ ಹೆಸರಿನ ಮಾರ್ಗಸೂಚಿ ಫಲಕಗಳನ್ನು ಅಳವಡಿಸಲಾಗುವುದು” ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ಈದಿನ.ಕಾಮ್ ಗೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಯಾವುದೇ ಕಾರಣಕ್ಕೂ ಗ್ಯಾರಂಟಿಗಳು ಸ್ಥಗಿತವಾಗುವುದಿಲ್ಲ, ಅಪಪ್ರಚಾರ ನಂಬಬೇಡಿ: ಸಿಎಂ ಸಿದ್ದರಾಮಯ್ಯ
ಹಿರಿಯ ಕನ್ನಡ ಹೋರಾಟಗಾರ ಬಸವರಾಜ ಶೆಟಕಾರ್ ಈದಿನ.ಕಾಮ್ ಜೊತೆಗೆ ಮಾತನಾಡಿ, “ರಾಷ್ಟ್ರೀಯ ಹೆದ್ದಾರಿ-161A ಬದಿಯಲ್ಲಿ ಅಳವಡಿಸಲಾದ ಗ್ರಾಮಗಳ ನಾಮಫಲಕಗಳಲ್ಲಿ ಹಲವು ಲೋಪದೋಷಗಳಿವೆ. ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತುಕೊಂಡು ತಪ್ಪಾಗಿ ಬರೆಯಲಾದ ನಾಮಫಲಕ ತೆರವುಗೊಳಿಸಿ ಸರಿಪಡಿಸಬೇಕು. ಇಲ್ಲದಿದ್ದರೆ ಲೋಪದೋಷವಿರುವ ನಾಮಫಲಕಗಳಿಗೆ ಮಸಿ ಬಳಿಯುವುದಾಗಿ ಎಚ್ಚರಿಸಿದರು.