ಶುಕ್ರವಾರ ತಡರಾತ್ರಿ ನೇಪಾಳದಲ್ಲಿ 6.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 128 ಮಂದಿ ಸಾವನ್ನಪ್ಪಿದ್ದಾರೆ. 140ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಭೂಕಂಪದಿಂದಾಗಿ ಮನೆಗಳು ಮತ್ತು ಕಟ್ಟಡಗಳು ಕುಸಿದು ಬದ್ದಿವೆ. ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಬದುಕುಳಿದವರನ್ನು ರಕ್ಷಣಾ ತಂಡಗಳು ಹುಡುಕುತ್ತಿದ್ದಾರೆ. ಭೂಕಂಪದಿಂದ ನೇಪಾಳದ ರುಕುಮ್ ವೆಸ್ಟ್ನಲ್ಲಿ ಕನಿಷ್ಠ 36 ಜನರು ಮತ್ತು ಜಾಜರ್ಕೋಟ್ನಲ್ಲಿ 34 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
“ರುಕುಮ್ ವೆಸ್ಟ್ನಲ್ಲಿ ಕನಿಷ್ಠ 36 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಛಾಗುವ ಸಾಧ್ಯತೆ ಇದೆ. ಬೆಳಿಗ್ಗೆ 5 ಗಂಟೆಯವರೆಗೆ ನಡೆದ ಕಾರ್ಯಾಚರಣೆಯಲ್ಲಿ 36 ಮಂದಿಯ ಮೃತದೇಹಗಳು ಸಿಕ್ಕವೆ” ಎಂದು ರುಕುಮ್ನ ಮುಖ್ಯ ಜಿಲ್ಲಾಧಿಕಾರಿ ಹರಿ ಪ್ರಸಾದ್ ಪಂತ್ ತಿಳಿಸಿದ್ದಾರೆ.
“ಭೂಕಂಪದಿಂದ ಉಂಟಾದ ಪ್ರಾಣ ಹಾನಿಯಿಂದ ದುಃಖವಾಗಿದೆ. ರಕ್ಷಣಾ ಪಡೆಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. ಜನರ ರಕ್ಷಣೆ ಮತ್ತು ಪರಿಹಾರ ಒದಗಿಸಲು ಎಲ್ಲ ಮೂರು ಭದ್ರತಾ ಏಜೆನ್ಸಿಗಳನ್ನು ಕಳುಹಿಸಲಾಗಿದೆ” ಎಂದು ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಅವರು ತಿಳಿಸಿದ್ದಾರೆ.
ನೇಪಾಳ ಭೂಕಂಪನ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದುಃಖ ವ್ಯಕ್ತಪಡಿಸಿದ್ದಾರೆ. “ನೇಪಾಳದಲ್ಲಿ ಸಂಭವಿಸಿದ ಭೂಕಂಪದಿಂದ ಪ್ರಾಣಹಾನಿ ಮತ್ತು ನಷ್ಟದಿಂದ ತೀವ್ರ ದುಃಖವಾಗಿದೆ. ಭಾರತವು ನೇಪಾಳದ ಜನರೊಂದಿಗಿದೆ. ಸಾಧ್ಯವಿರುವ ಎಲ್ಲ ನೆರವನ್ನು ನೀಡಲು ಸಿದ್ಧವಾಗಿದೆ. ದುಃಖಿತ ಕುಟುಂಬಗಳು ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಆಶಿಸುತ್ತೆವೆ” ಎಂದು ಟ್ವೀಟ್ ಮಾಡಿದ್ದಾರೆ.
2015ರಲ್ಲಿ ನೇಪಾಳದಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಆ ಭೂಕಂಪವು ಸುಮಾರು 9,000 ಜನರನ್ನು ಬಲಿಪಡೆದಿತ್ತು. 22,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 5,00,000ಕ್ಕೂ ಹೆಚ್ಚು ಮನೆಗಳನ್ನು ಹಾನಿಯಾಗಿದ್ದವು.