ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾದ ಬಳಿಕ ಸುತ್ತಮುತ್ತ ಗ್ರಾಮಗಳಿಗಿದ್ದ ಸಂಪರ್ಕ ಕಡಿತಗೊಂಡಿದೆ. ಇದರಿಂದ ಸುತ್ತಮುತ್ತ ಗ್ರಾಮಗಳಲ್ಲಿ ವಾಸಿಸುವ ಜನರು ತಮ್ಮ ಗ್ರಾಮಗಳಿಗೆ ತೆರಳಲು ಹೆದ್ದಾರಿ ದಾಟಲು ಪರದಾಡುವಂತಾಗಿದೆ. ರಸ್ತೆ ದಾಟಲು ಜನರು ತಮ್ಮ ಪ್ರಾಣವನ್ನೇ ಪಣಕ್ಕಿಡಬೇಕಾದ ಸ್ಥಿತಿ ಎದುರಾಗಿದೆ. ಈ ಬಗ್ಗೆ ಸ್ಥಳೀಯರಿಂದ ಪದೇ ಪದೆ ದೂರುಗಳು ಬಂದ ಹಿನ್ನೆಲೆ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್ಎಚ್ಎಐ) ಬೆಂಗಳೂರು-ಮೈಸೂರು ಹೆದ್ದಾರಿಗೆ ಅಡ್ಡಲಾಗಿ ಒಟ್ಟು 24 ಸ್ಕೈವಾಕ್ಗಳನ್ನು ನಿರ್ಮಿಸಲು ನಿರ್ಧರಿಸಿದೆ.
“ಬೆಂಗಳೂರು-ಮೈಸೂರಿನ ಹೆದ್ದಾರಿಯಲ್ಲಿ ವಾಹನಗಳು ವೇಗವಾಗಿ ಚಲಿಸುತ್ತವೆ. ಈ ವೇಳೆ, ಸ್ಕೈವಾಕ್ಗಳ ಅನುಪಸ್ಥಿತಿಯಲ್ಲಿ, ಜನರು ರಸ್ತೆ ದಾಟಲು ಪ್ರಯತ್ನಿಸುವ ಮೂಲಕ ತಮ್ಮ ಪ್ರಾಣವನ್ನು ಅಪಾಯಕ್ಕೆ ತಂದುಕೊಳ್ಳುತ್ತಾರೆ” ಎಂದು ಜೂನ್ನಲ್ಲಿ ಹೆದ್ದಾರಿಯನ್ನು ಪರಿಶೀಲಿಸಿದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್ ಹೇಳಿದ್ದರು.
“ಪಾದಚಾರಿಗಳು ಹೆಚ್ಚಿನ ವೇಗದಲ್ಲಿ ವಾಹನಗಳು ಚಲಿಸುವ ಹೆದ್ದಾರಿಯನ್ನು ದಾಟಲು ಪ್ರಯತ್ನಿಸುವ ಮೂಲಕ ತಮ್ಮ ಪ್ರಾಣವನ್ನು ಅಪಾಯಕ್ಕೆ ತಂದುಕೊಳ್ಳುತ್ತಾರೆ. ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು. ಹಾಗಾಗಿ, ಹಲವಾರು ಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಈ ಪೈಕಿ ಸ್ಕೈವಾಕ್ಗಳನ್ನು ನಿರ್ಮಿಸುವುದು ಒಂದು ಉತ್ತಮವಾದ ಕ್ರಮ” ಎಂದು ಸಲಹೆ ನೀಡಿದ್ದರು.
“ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ಜನರು ಪ್ರವೇಶಿಸುವುದನ್ನು ತಡೆಯಲು ಲೋಹದ ತಡೆ ಬೇಲಿಯನ್ನು ಹಾಕಲಾಗಿದೆ. ಆದರೆ, ಬೇರೆಡೆ ತೆರಳಲು ಮಾರ್ಗಗಳಿಲ್ಲದ ಕಾರಣ ಪಾದಚಾರಿಗಳು ಹಲವೆಡೆ ಹೆದ್ದಾರಿ ದಾಟಲು ಬೇಲಿಯನ್ನು ಕಡಿದು ಹಾಕಿದ್ದಾರೆ” ಎಂದು ಎನ್ಎಚ್ಎಐ ಮೂಲಗಳು ತಿಳಿಸಿವೆ.
“ಸುಮಾರು ಒಂದು ವರ್ಷದಲ್ಲಿ 24 ಸ್ಕೈವಾಕ್ಗಳನ್ನು ಹೆದ್ದಾರಿಗೆ ಅಡ್ಡಲಾಗಿ ನಿರ್ಮಿಸಲಾಗುವುದು. ಬೆಂಗಳೂರು ಹೊರವಲಯದಲ್ಲಿರುವ ಪಂಚಮುಖಿ ಗಣೇಶ ದೇವಸ್ಥಾನದ ನಂತರ ಪ್ರಾರಂಭವಾಗುವ ಫ್ಲೈಓವರ್ ರ್ಯಾಂಪ್ನಲ್ಲಿ ಎಲ್ಲ ವಾಹನಗಳು ಇಳಿಯುವ ಕಣಿಮಿಣಿಕೆಯಲ್ಲಿ ಮೊದಲ ಸ್ಕೈವಾಕ್ ನಿರ್ಮಿಸಿದರೆ, ಕೊನೆಯ ಸ್ಕೈವಾಕ್ ಸಿದ್ದಲಿಂಗಪುರದಲ್ಲಿ ಬರಲಿದೆ” ಎಂದು ಎನ್ಎಚ್ಎಐ ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಾಜಿ ಸಿಎಂ ಎಚ್ಡಿಕೆ ಆಸ್ಪತ್ರೆಗೆ ದಾಖಲು
ಈ ಸ್ಕೈವಾಕ್ಗಳ ನಿರ್ಮಾಣದಿಂದ ಮೈಸೂರು ಮತ್ತು ಬೆಂಗಳೂರು ನಡುವಿನ ಹೆದ್ದಾರಿಯುದ್ದಕ್ಕೂ ಅನೇಕ ಹಳ್ಳಿಗಳ ಜನರಿಗೆ ಪ್ರಯೋಜನವಾಗಿದೆ.
ಕಣಿಮಿಣಿಕೆ, ಮಂಚನಾಯಕನಹಳ್ಳಿ, ಕಲ್ಲುಗೊಪ್ಪಹಳ್ಳಿ, ಹುಲ್ತಾರ್ ಹೊಸದೊಡ್ಡಿ, ಮಾದಾಪುರ, ದಬನಗುಂದ, ರುದ್ರಾಕ್ಷಿಪುರ, ಅಗರಲಿಂಗನದೊಡ್ಡಿ, ಮೊಬ್ಬಲಗೆರೆ, ಗೆಜ್ಜಲಗೆರೆ ಕೈಗಾರಿಕಾ ಪ್ರದೇಶ, ಗೆಜ್ಜಲಗೆರೆ, ಬಿ ಗೌಡಗೆರೆ, ಬೂದನೂರು, ಕಲ್ಲಂಗಡಿ, ಗೌಡನಹಳ್ಳಿ, ಬ್ರಹ್ಮಪುರ, ಕಳಸ್ತವಾಡಿ ಮತ್ತು ಸಿದ್ದಲಿಂಗಪುರ, ಕಲಮಿಣಿಕೆಯಲ್ಲಿ ಸ್ಕೈವಾಕ್ಗಳು ಬರಲಿವೆ.