ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳ ತಂಡವು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನ 16 ಸ್ಥಳಗಳಲ್ಲಿ ಬೆಳ್ಳಂಬೆಳಗ್ಗೆ ಸ್ಥಳೀಯ ಪೊಲೀಸರ ನೆರವಿನಿಂದ ಶೋಧ ಕಾರ್ಯದಲ್ಲಿ ತೊಡಗಿದೆ.
ಹವಾಲಾ ಹಣಕ್ಕೆ ಸಂಬಂಧಿಸಿದ ಆರೋಪಗಳು ಮತ್ತು ದೇಶದಲ್ಲಿ ಕೋಮು ಗಲಭೆ ಸೃಷ್ಟಿಸಲು ಯತ್ನ ಆರೋಪಗಳ ಹಿನ್ನೆಲೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದೇ ಪ್ರಕರಣದ ತನಿಖೆಯ ಜಾಡು ಹಿಡಿದು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದ್ದ ಎನ್ಐಎ ಅಧಿಕಾರಿಗಳು ಬಂಟ್ವಾಳ ಮತ್ತು ಪುತ್ತೂರಿನಲ್ಲಿ ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದಿದ್ದರು.
ಕರ್ನಾಟಕ ಮಾತ್ರವಲ್ಲದೆ ಕೇರಳ ಮತ್ತು ಬಿಹಾರದ ಹಲವು ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ದಾಳಿ ನಡೆಸಿದೆ. ಪಾಟ್ನಾದ ಫುಲ್ವಾರಿಶರೀಫ್ ಪ್ರದೇಶದಲ್ಲಿ ಹಿಂಸಾತ್ಮಕ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಸಂಚಿನ ಹಿನ್ನೆಲೆ ಶಂಕಿತರ ನಿವಾಸಗಳ ಮೇಲೆ ಇನ್ನೂ ದಾಳಿಗಳು ನಡೆಯುತ್ತಿವೆ.
ಈ ಸುದ್ದಿ ಓದಿದ್ದೀರಾ? ಕುಸ್ತಿಪಟುಗಳ ಮೇಲಿನ ಹಲ್ಲೆಗೆ ಕುಂಬ್ಳೆ ಬೇಸರ; ಆದಷ್ಟು ಬೇಗ ಸಮಸ್ಯೆ ಪರಿಹರಿಸಿ ಎಂದ ಕ್ರಿಕೆಟಿಗ
ಈ ಮೊದಲು, ಬಿಹಾರದ ಪಾಟ್ನಾ ಜಿಲ್ಲೆಯ ಫುಲ್ವಾರಿಶರೀಫ್ ಪೊಲೀಸ್ ಠಾಣೆಯಲ್ಲಿ ಕಳೆದ ವರ್ಷ ಜುಲೈ 12 ರಂದು ಆರಂಭದಲ್ಲಿ ದಾಖಲಾಗಿದ್ದ ಮತ್ತು ಕಳೆದ ವರ್ಷ ಜುಲೈ 22 ರಂದು ಎನ್ಐಎಯಿಂದ ಮರು ನೋಂದಾಯಿಸಲ್ಪಟ್ಟ ತ್ವರಿತ ಪ್ರಕರಣದಲ್ಲಿ ಆರು ಜನರನ್ನು ಬಂಧಿಸಲಾಗಿದೆ.
ಈ ವರ್ಷದ ಫೆಬ್ರವರಿ 4 ಮತ್ತು 5 ರಂದು, ಎನ್ಐಎ ತಂಡ ಬಿಹಾರದ ಮೋತಿಹಾರಿಯಲ್ಲಿ ಎಂಟು ಸ್ಥಳಗಳಲ್ಲಿ ಶೋಧಿಸಿ ಹತ್ಯೆಯನ್ನು ನಡೆಸಲು ಉದ್ದೇಶಿಸಿದ್ದ ಎನ್ನಲಾದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವ್ಯವಸ್ಥೆ ಮಾಡಿದ ಇಬ್ಬರನ್ನು ಬಂಧಿಸಿತ್ತು.