ಮಾರ್ಚ್ 7ರಂದು ವಾಯವ್ಯ ನೈಜೀರಿಯಾದಲ್ಲಿ ಬಂದೂಕುಧಾರಿಗಳು ಅಪಹರಿಸಿದ್ದ 250ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಮನೆಗೆ ಮರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೈಜೀರಿಯಾದ ಕಡುನಾ ರಾಜ್ಯದ ಕುರಿಗಾದಲ್ಲಿ ಶಾಲಾ ಮಕ್ಕಳನ್ನು ಅಪಹರಿಸಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ನಡೆದ ಅತಿದೊಡ್ಡ ಅಪಹರಣ ಇದಾಗಿತ್ತು. ರಾಷ್ಟ್ರೀಯ ಅಭದ್ರತೆಯ ಬಗ್ಗೆ ಆಕ್ರೋಶವೂ ವ್ಯಕ್ತವಾಗಿತ್ತು. ಇದೀಗ, ಆ ಎಲ್ಲ ಮಕ್ಕಳು ತಮ್ಮ ಮನೆಗಳಿಗೆ ಮರಳಿದ್ದಾರೆ.
“ಅಪಹರಣಕ್ಕೊಳಗಾದ ಕುರಿಗಾದಲ್ಲಿನ ಶಾಲಾ ಮಕ್ಕಳನ್ನು ಬಿಡುಗಡೆಗೊಂಡಿದ್ದಾರೆ. ಮಕ್ಕಳಿಗೆ ಯಾವುದೇ ಹಾನಿಯಾಗಿಲ್ಲ” ಎಂದು ಕಡುನಾ ರಾಜ್ಯದ ಗವರ್ನರ್ ಉಬಾ ಸಾನಿ ತಿಳಿಸಿದ್ದಾರೆ. ಆದರೆ, ಮಕ್ಕಳು ಹೇಗೆ ಬಿಡುಗಡೆಯಾದರು ಎಂಬುದನ್ನು ಗವರ್ನರ್ ವಿವರಿಸಿಲ್ಲ.
ಇದು ನಿಜಕ್ಕೂ ಸಂತೋಷದ ದಿನ ಎಂದು ಹೇಳಿರುವ ಅವರು, ಸೈನ್ಯಕ್ಕೆ, ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು, ರಾಷ್ಟ್ರೀಯ ಭದ್ರತಾ ಸಲಹೆಗಾರರು ಹಾಗೂ ಶಾಲಾ ಮಕ್ಕಳ ಮರಳುವಿಕೆಗಾಗಿ ಪ್ರಾರ್ಥಿಸಿದ ಎಲ್ಲ ನೈಜೀರಿಯನ್ನರಿಗೆ ಧನ್ಯವಾದ ತಿಳಿಸಿದ್ದಾರೆ.
ಸ್ಥಳೀಯವಾಗಿ ಡಕಾಯಿತರು ಎಂದು ಕರೆಯಲ್ಪಡುವ ಕೆಲ ಗುಂಪುಗಳು ಮಕ್ಕಳನ್ನು ಅಪಹರಿಸಿದ್ದವು. ಈ ಗುಂಪುಗಳು ಆಗಾಗ್ಗೆ ಹಳ್ಳಿಗಳಿಗೆ ನುಗ್ಗಿ ಲೂಟಿ ಮಾಡುತ್ತವೆ. ವಾಯುವ್ಯ ಮತ್ತು ಉತ್ತರ-ಮಧ್ಯ ನೈಜೀರಿಯಾದಲ್ಲಿ ಸುಲಿಗೆಗಾಗಿ ಸಾಮೂಹಿಕ ಅಪಹರಣ ನಡೆಸುತ್ತವೆ ಎಂದು ಹೇಳಲಾಗಿದೆ.
ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಲು ಅಪಹಾರಣಕಾರರು ಬೃಹತ್ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ, ಅಧ್ಯಕ್ಷ ಟಿನುಬು ಅವರು ಯಾವುದೇ ಹಣವನ್ನು ನೀಡದಂತೆ ಭದ್ರತಾ ಪಡೆಗಳಿಗೆ ಅದೇಶಿಸಿದ್ದರು ಎಂದು ಗವರ್ನರ್ ತಿಳಿಸಿದ್ದಾರೆ.