ಸುಳ್ಳು ಸುದ್ದಿ ಹಬ್ಬಿಸಿದ್ದ ಬಲಪಂಥೀಯರು
ಅಸಲಿಯತ್ತು ಬಹಿರಂಗಪಡಿಸಿದ್ದ ʼಆಲ್ಟ್ ನ್ಯೂಸ್ʼ
ಬಾಲಾಸೋರ್ನಲ್ಲಿ ನಡೆದ ರೈಲು ದುರಂತಕ್ಕೆ ಕೋಮುವಾದದ ಬಣ್ಣ ಬಳಿಯಲು ಯತ್ನಿಸಿದ ಬಲಪಂಥೀಯರಿಗೆ ಒಡಿಶಾ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸುಳ್ಳು ಸುದ್ದಿ ಹರಡಲು ಯತ್ನಸಿದವರ ಮೇಲೆ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಒಡಿಶಾ ಪೊಲೀಸರು, “ಬಾಲಾಸೋರ್ನಲ್ಲಿ ನಡೆದ ರೈಲು ದುರಂತಕ್ಕೆ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೋಮುವಾದದ ಬಣ್ಣ ಬಳಿಯುತ್ತಿದ್ದಾರೆ. ಈ ಬೆಳವಣಿಗೆ ದುರದೃಷ್ಟಕರ. ಅಪಘಾತ ಸಂಭವಿಸಿದ್ದು ಹೇಗೆ ಎಂಬುದನ್ನು ಪತ್ತೆ ಹಚ್ಚಲು ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂಬಂಧಪಟ್ಟವರು ಈ ರೀತಿಯ ಸುಳ್ಳು ಮತ್ತು ದುರುದ್ದೇಶಪೂರಿತ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದನ್ನು ನಿಲ್ಲಿಸಬೇಕು. ಕೋಮು ಸೌಹಾರ್ದತೆಯನ್ನು ಹದಗೆಡಿಸಲು ಯತ್ನಿಸಿದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ರೈಲು ಅಪಘಾತ ಸಂಭವಿಸಿದ ಸ್ಥಳದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ, ಆ ಫೋಟೋದಲ್ಲಿ ಕಾಣಸಿಗುವ ಕಟ್ಟಡವೊಂದನ್ನು ಮಸೀದಿ ಎಂದು ಬಿಂಬಿಸಿದ್ದ ಬಲಪಂಥೀಯರು ಮತ್ತು ಬಿಜೆಪಿ ಬೆಂಬಲಿಗರು, “ಅಪಘಾತ ಸಂಭವಿಸಿರುವುದು ಶುಕ್ರವಾರ, ರೈಲ್ವೆ ಹಳಿಯ ಪಕ್ಕದಲ್ಲಿ ಮಸೀದಿ ಇದೆ. ಇದೇ ಮಸಿದಿಯಲ್ಲಿ ಅಪಘಾತಕ್ಕೆ ಅಗತ್ಯ ಪ್ರಯೋಗಗಳು ನಡೆದಿವೆ. ಘಟನೆಗೆ ಮುಸ್ಲಿಮರೇ ಕಾರಣ” ಎಂದು ಆರೋಪಿಸಿದ್ದರು.
ಆದರೆ, ಈ ಸುಳ್ಳು ಸುದ್ದಿಯ ಹಿಂದೆ ಬಿದ್ದಿದ್ದ ಸತ್ಯ ಶೋಧನಾ ಸಂಸ್ಥೆ ʼಆಲ್ಟ್ ನ್ಯೂಸ್ʼ ವೈರಲ್ ಫೋಟೋದಲ್ಲಿರುವ ಕಟ್ಟಡದ ಅಸಲಿಯತ್ತನ್ನು ಬಹಿರಂಗ ಪಡಿಸಿತ್ತು. ಘಟನಾ ಸ್ಥಳದಿಂದ ಕೂಗಳತೆ ದೂರದಲ್ಲಿರುವ ಈ ಬಹುಚರ್ಚಿತ ಕಟ್ಟಡ ಮಸೀದಿ ಅಲ್ಲ, ಬದಲಿಗೆ ನಿರ್ಮಾಣ ಹಂತದಲ್ಲಿರುವ ಇಸ್ಕಾನ್ ಮಂದಿರ ಎಂಬುದನ್ನು ಫೋಟೋ ಮತ್ತು ವಿಡಿಯೋಗಳ ಮೂಲಕ ಸ್ಪಷ್ಟಪಡಿಸಿತ್ತು.
ಇದರ ಬೆನ್ನಲ್ಲೇ ತನಿಖೆಯ ಪ್ರಾಥಮಿಕ ವರದಿಯನ್ನು ಉಲ್ಲೇಖಿಸಿ ಮಾತನಾಡಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ” ʼಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ʼ ಮತ್ತು ʼಪಾಯಿಂಟ್ ಮಷಿನ್ʼಗಳಲ್ಲಿನ ಬದಲಾವಣೆಯಿಂದ ಅಪಘಾತ ಸಂಭವಿಸಿದೆ” ಎಂದು ಮಾಹಿತಿ ನೀಡಿದ್ದಾರೆ.