- ಗುಜರಾತ್ ಜುನಾಗಢದ ಮಸೀದಿ ತೆರವು ನೋಟಿಸ್ ನಂತರ ಘಟನೆ
- ಅತಿಕ್ರಮಣ ಸಂಬಂಧ ನಡೆದ ಹಿಂಸಾಚಾರ ಘಟನೆಯಲ್ಲಿ 174 ಜನರ ಬಂಧನ
ಗುಜರಾತ್ ರಾಜ್ಯದ ಜುನಾಗಢದಲ್ಲಿ ಅತಿಕ್ರಮಣ ವಿರೋಧಿ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಜನರು ಮತ್ತು ಪೊಲೀಸರ ನಡುವೆ ಶನಿವಾರ (ಜೂನ್ 17) ಘರ್ಷಣೆ ನಡೆದಿದೆ. ಪರಿಣಾಮ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ.
ಜುನಾಗಢದ ಮಜೆವಾಡಿ ಮಸೀದಿ ಬಳಿ ಘಟನೆ ನಡೆದಿದೆ. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಅಶ್ರುವಾಯು ಸಿಡಿಸಿದರು. ಜನರನ್ನು ನಿಯಂತ್ರಿಸಲು ಲಾಠಿ ಚಾರ್ಜ್ ನಡೆಸಲಾಯಿತು.
ಜುನಾಗಢ ಮಹಾನಗರ ಪಾಲಿಕೆಯು ತೆರವು ಕಾರ್ಯಾಚರಣೆಗೆ ಸಂಬಂಧಿಸಿ ಸ್ಥಳೀಯ ಮಸೀದಿಗೆ ನೋಟಿಸ್ ನೀಡಿದ ನಂತರ ಶುಕ್ರವಾರ ರಾತ್ರಿ ಪ್ರತಿಭಟನೆ ಭುಗಿಲೆದ್ದಿತು.
ಮಸೀದಿ ಸ್ಥಾಪನೆಯಾಗಿರುವ ಬಗ್ಗೆ ಐದು ದಿನಗಳಲ್ಲಿ ದಾಖಲೆಗಳನ್ನು ಸಲ್ಲಿಸುವಂತೆ ನೋಟಿಸ್ನಲ್ಲಿ ಹೇಳಲಾಗಿತ್ತು. ಐದು ದಿನಗಳ ಅವಧಿ ಪೂರ್ಣಗೊಂಡರೂ ಮಸೀದಿಯಿಂದ ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆ ಗುಜರಾತ್ ಜುನಾಗಢದ ಪಾಲಿಕೆ ಈ ಕ್ರಮ ಕೈಗೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಜುನಾಗಢ ಮಹಾನಗರ ಪಾಲಿಕೆ ತಂಡವು ಶುಕ್ರವಾರ ಸಂಜೆ ಮಸೀದಿ ತೆರವಿಗೆ ನೋಟಿಸ್ ನೀಡಲು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಸುಮಾರು 500 ರಿಂದ 600 ಜನರು ವಿರೋಧ ವ್ಯಕ್ತಪಡಿಸಿದ್ದರು. ರಾತ್ರಿ 10.15ರ ಸುಮಾರಿಗೆ ಪರಿಸ್ಥಿತಿ ಉಲ್ಬಣಗೊಂಡಿತು ಎಂದು ಗುಜರಾತ್ ಜುನಾಗಢ ಪೊಲೀಸ್ ವರಿಷ್ಠಾಧಿಕಾರಿ ರವಿತೇಜ ವಾಸಮಶೆಟ್ಟಿ ಹೇಳಿದ್ದಾರೆ.
ಉದ್ರಿಕ್ತರ ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಹಲವಾರು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಯಿತು ಎಂದು ವರದಿಯಾಗಿದೆ. ಗುಜರಾತ್ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಿದರು.
ಈ ಸುದ್ದಿ ಓದಿದ್ದೀರಾ? ‘ಯುರೋಪಿಯನ್ ಎಸ್ಸೇ ಪ್ರೈಜ್’ ಪ್ರಶಸ್ತಿಗೆ ಭಾಜನರಾದ ಅರುಂಧತಿ ರಾಯ್
“ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಸಂಬಂಧ ಒಟ್ಟು 174 ಮಂದಿಯನ್ನು ಬಂಧಿಸಲಾಗಿದೆ. ಕಲ್ಲು ತೂರಾಟದಿಂದ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಇದು ದೃಢಪಡಲಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ರವಿತೇಜ ಹೇಳಿದರು.
ಗುಜರಾತ್ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆ ಶಾಂತಿ ಕಾಪಾಡಲು ಸ್ಥಳದಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ವರದಿಯಾಗಿದೆ.