- ‘ಬಿಜೆಪಿಯ ತಂಡಗಳು ಮತ್ತೊಮ್ಮೆ ಆಪರೇಶನ್ ಕಮಲಕ್ಕೆ ಮುಂದಾಗಿವೆ’
- ‘ಸಂತೋಷ್ ಆಡಿರುವ ಮಾತುಗಳ ಆಡಿಯೋ, ವಿಡಿಯೋ ನನ್ನ ಬಳಿಯಿದೆ’
ಹಿಂದೆ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವಲ್ಲಿ ಯಶ ಕಂಡಿದ್ದ ಬಿಜೆಪಿಯ ತಂಡಗಳು ಮತ್ತೊಮ್ಮೆ ಆಪರೇಶನ್ ಕಮಲಕ್ಕೆ ಮುಂದಾಗಿವೆ. ಕಾಂಗ್ರೆಸ್ನ ನಾಲ್ಕು ಶಾಸಕರಿಗೆ 50 ಕೋಟಿ ರೂ. ಹಣದ ಜೊತೆಗೆ ಮಂತ್ರಿ ಸ್ಥಾನದ ಆಮಿಷ ಒಡ್ಡುತ್ತಿದ್ದಾರೆ ಎಂದು ಮಂಡ್ಯ ಕ್ಷೇತ್ರದ ಶಾಸಕ ರವಿ ಗಣಿಗ ಆರೋಪಿಸಿದ್ದಾರೆ.
ದಾವಣಗೆರೆಯಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಹಿಂದೆ ಬಿ ಎಸ್ ಯಡಿಯೂರಪ್ಪನವರ ಆಪ್ತ ಕಾರ್ಯದರ್ಶಿಯಾಗಿದ್ದ ಎನ್ ಆರ್ ಸಂತೋಷ್ ಒಂದು ತಂಡದ ನೇತೃತ್ವ ವಹಿಸಿ ಕಾಂಗ್ರೆಸ್ನ ನಾಲ್ವರು ಶಾಸಕರನ್ನು ಹೋಟೆಲ್ ಒಂದರಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾನೆ” ಎಂದು ರವಿ ದೂರಿದ್ದಾರೆ.
“ಜೆಡಿಎಸ್ ಸೇರಿ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಇವನಿಗೆ ಬುದ್ಧಿ ಬಂದಿಲ್ಲ. ಕಾಂಗ್ರೆಸ್ ಶಾಸಕರಿಗೆ ರೂ. 50 ಕೋಟಿ ಹಾಗೂ ಮಂತ್ರಿ ಸ್ಥಾನ ನೀಡುವ ಆಮಿಷವನ್ನು ಸಂತೋಷ್ ಒಡ್ಡಿದ್ದಾನೆ. ಶಾಸಕರನ್ನು ವಿಮಾನಗಳಲ್ಲಿ ದೆಹಲಿಗೆ ಕಳಿಸುವ ಮತ್ತು ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸುವ ವ್ಯವಸ್ಥೆ ಮಾಡಲಾಗುವುದು” ಎಂದು ಹೇಳಿದ್ದಾನೆ.
ಈ ಸುದ್ದಿ ಓದಿದ್ದೀರಾ? ಹುಲಿ ಉಗುರಿಗಾಗಿ ಹಿಂದೂಗಳ ಟಾರ್ಗೆಟ್, ನವಿಲುಗರಿ ಬಳಸುವ ಮೌಲ್ವಿಗಳ ಮೇಲೇಕೆ ಕ್ರಮವಿಲ್ಲ: ಬೆಲ್ಲದ್
“ಸಂತೋಷ್ ಆಡಿರುವ ಮಾತುಗಳ ಆಡಿಯೋ ಮತ್ತು ವಿಡಿಯೋ ಕ್ಲಿಪ್ಪಿಂಗ್ಗಳು ತಮ್ಮಲ್ಲಿದ್ದು ಅವುಗಳನ್ನು ಸೂಕ್ತ ಸಮಯದಲ್ಲಿ ಬಹಿರಂಗ ಪಡಿಸುವೆ. ಯಾರಾರು ಓಡಾಡುತ್ತಿದ್ದಾರೋ ಅವರ ವಿಡಿಯೋ ನಮ್ಮ ಬಳಿ ಇದೆ. ಕೆಲವೇ ದಿನಗಳಲ್ಲಿ ಆ ವಿಡಿಯೋ ಬಿಡುಗಡೆ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.