ಬೆಂಗಳೂರಿನಲ್ಲಿ ನಿನ್ನೆ(ಅ.31) ಸಂಜೆ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ವತಿಯಿಂದ ನಡೆಯಬೇಕಿದ್ದ ಪ್ಯಾಲೆಸ್ತೀನ್ ವಿಚಾರಗೋಷ್ಠಿ ಕಾರ್ಯಕ್ರಮ ನಡೆಯದಂತೆ ತಡೆ ನೀಡಿದ್ದ ಬೆಂಗಳೂರು ಪೊಲೀಸರು, ಕೊನೆಗೂ ಕಾರ್ಯಕ್ರಮ ನಡೆಸಲು ಅನುಮತಿಸಿದ್ದಾರೆ.
ಗುರುವಾರ ಸಂಜೆ 6:30ಕ್ಕೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ದಾರುಸ್ಸಲಾಂ ಕಟ್ಟಡದ ಬಿಫ್ಟ್ ಆಡಿಟೋರಿಯಂನಲ್ಲಿ ನಡೆಸಲು ಸಂಘಟಕರಿಗೆ ಅನುಮತಿ ನೀಡಿದ್ದಾರೆ.
”ನಿನ್ನೆ ಸಂಜೆ ಮುಂದೂಡಲಾಗಿದ್ದ ‘ಪ್ಯಾಲೆಸ್ತೀನ್ ಸಮಸ್ಯೆ: ಒಂದು ಅವಲೋಕನ’ ವಿಚಾರಗೋಷ್ಠಿಯನ್ನು ನಾಳೆ (ನ.2, ಗುರುವಾರ) ಸಂಜೆ 6:30ಕ್ಕೆ ನಿಗದಿಪಡಿಸಲಾಗಿದ್ದ ಸ್ಥಳದಲ್ಲೇ ನಡೆಸಲು ತೀರ್ಮಾನಿಸಲಾಗಿದೆ” ಎಂದು ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸೋಲಿಡಾರಿಟಿ ಯೂತ್ ಮೂಮೆಂಟ್ ಕರ್ನಾಟಕ ಘಟಕ ತಿಳಿಸಿದೆ.
ಆಗಿದ್ದೇನು?
ಅ.31ರ ಸಂಜೆ 6:30ಕ್ಕೆ ‘ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ’ ಎಂಬ ಯುವಜನರ ಸಂಘಟನೆಯು ಕಾಂಗ್ರೆಸ್ ಕಚೇರಿಯ ಪಕ್ಕದಲ್ಲೇ ಇರುವ ಬಿಫ್ಟ್(BIFT) ಸಭಾಭವನದಲ್ಲಿ “ಪ್ಯಾಲೆಸ್ತೀನ್ ಸಮಸ್ಯೆ- ಒಂದು ಅವಲೋಕನ” ಎಂಬ ವಿಚಾರಗೋಷ್ಠಿ ಆಯೋಜಿಸಿತ್ತು.
ಆದರೆ, ಸಂಜೆ ನಿಗದಿಯಾಗಿದ್ದ ಈ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ ಎಂದು ಬೆಳಗ್ಗೆಯೇ ಸಭಾಂಗಣವಿದ್ದ ಕಟ್ಟಡಕ್ಕೆ ಆಗಮಿಸಿದ ಹೈಗ್ರೌಂಡ್ಸ್ ಠಾಣೆಯ ಪೊಲೀಸರು, ಸಿಬ್ಬಂದಿಯಿಂದ ಕೀ ಕೇಳಿ ಪಡೆದಿದ್ದರು. ಆ ಬಳಿಕ ಸಭಾಂಗಣಕ್ಕೆ ಅವರಾಗಿಯೇ ಬೀಗ ಹಾಕಿದ್ದು, ಕಾರ್ಯಕ್ರಮಕ್ಕೆ ಅನುಮತಿ ಇಲ್ಲ ಎಂದು ತಿಳಿಸಿ ಕೀಯನ್ನು ಇಟ್ಟುಕೊಂಡು ಠಾಣೆಗೆ ತೆರಳಿದ್ದರು.
ಈ ನಡುವೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದ ಕೆಲವು ಗಣ್ಯರಿಗೂ ಕೂಡ ಪೊಲೀಸರು ಫೋನ್ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಪೊಲೀಸರು ಸೂಚನೆ ನೀಡಿದ್ದರು.
ಇದು ಸುದ್ದಿ ಕೂಡ ಆಗಿತ್ತು. ಇಂದು ಬೆಳಗ್ಗೆ ಕೀಯನ್ನು ಸಭಾಂಗಣದ ಉಸ್ತುವಾರಿಗಳಿಗೆ ಮರಳಿಸಿದ್ದು, ಗುರುವಾರ ಸಂಜೆ ಕಾರ್ಯಕ್ರಮ ನಡೆಸಲು ಅನುಮತಿಸಿದ್ದಾರೆ ಎಂದು ತಿಳಿದುಬಂದಿದೆ.
ನಾಳೆ ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾಮಾಜಿಕ ಚಿಂತಕ, ಹಿರಿಯ ವಾಗ್ಮಿ ಶಿವಸುಂದರ್, ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಳಗಾಮಿ, ಹಿರಿಯ ನ್ಯಾಯವಾದಿ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಬಿ.ಟಿ ವೆಂಕಟೇಶ್ ಹಾಗೂ ಸೋಲಿಡಾರಿಟಿ ಯೂತ್ ಮೂವಮೆಂಟ್ ಸಂಘಟನೆಯ ರಾಜ್ಯಾಧ್ಯಕ್ಷ ಲಬೀದ್ ಶಾಫಿ ಭಾಗವಹಿಸಿ, ಮಾತನಾಡಲಿದ್ದಾರೆ.
ಒಳಾಂಗಣ ಕಾರ್ಯಕ್ರಮಕ್ಕೆ ಪೊಲೀಸ್ ಅನುಮತಿ ಬೇಕೇ?
ಸಾಧಾರಣವಾಗಿ ಒಳಾಂಗಣ ಸಭಾಂಗಣದಲ್ಲಿ ನಡೆಯುವ ಸಣ್ಣಪುಟ್ಟ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆಯಿಂದ ಯಾವುದೇ ಅನುಮತಿ ಬೇಕಿಲ್ಲ. ಆದರೆ ಸಾರ್ವಜನಿಕರು ಪಾಲ್ಗೊಳ್ಳುವುದಾದರೆ ಇಂತಿಂಥ ಕಾರ್ಯಕ್ರಮ ನಡೆಯಲಿದೆ ಎಂದು ಸಭಾಂಗಣದ ಉಸ್ತುವಾರಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು.
ಸಾರ್ವಜನಿಕ ಸ್ಥಳಗಳಲ್ಲಿ ನಡೆಸುವ ಪ್ರತಿಭಟನೆಗಳಿಗೆ ಮೈಕ್ ಬಳಸುವುದಾದಲ್ಲಿ ಮಾತ್ರ ಪೊಲೀಸ್ ಇಲಾಖೆಯಿಂದ ಪೂರ್ವಾನುಮತಿ ಪಡೆಯಬೇಕು ಎಂಬ ನಿಯಮವಿದೆ.
ಬೆಂಗಳೂರಿನಲ್ಲಿರುವ ನಿಯಮಗಳೇನು?
ಬೆಂಗಳೂರಿನಲ್ಲಿ ಬೇರೆ ಬೇರೆ ಕಡೆ ನಡೆಯುತ್ತಿದ್ದ ಪ್ರತಿಭಟನೆಗೆ ತಡೆ ನೀಡಿದ್ದ ಕಳೆದ ಬಿಜೆಪಿ ಸರ್ಕಾರ, ಪ್ರತಿಭಟನೆಗಳು ನಡೆಸುವುದಾದರೆ ಫ್ರೀಡಂ ಪಾರ್ಕಿನಲ್ಲಿ(ಸ್ವಾತಂತ್ರ್ಯ ಉದ್ಯಾನವನ) ಮಾತ್ರ ನಡೆಸುವಂತೆ ಆದೇಶಿಸಿತ್ತು.
ನಗರದ ಸ್ವಾತಂತ್ರ್ಯ ಉದ್ಯಾನ(ಫ್ರೀಡಂ ಪಾರ್ಕ್) ಹೊರತುಪಡಿಸಿ ಬೇರಾವುದೇ ಭಾಗದಲ್ಲಿ, ರಾಜಕೀಯ ಅಥವಾ ರಾಜಕೀಯೇತರ ಸಂಘಟನೆಗಳು ಮೆರವಣಿಗೆ, ಪ್ರತಿಭಟನೆ, ಬಹಿರಂಗ ಸಭೆ ನಡೆಸದಂತೆ ನಿರ್ಬಂಧ ವಿಧಿಸಿ ಹೈಕೋರ್ಟ್ ಕೂಡ 2022ರ ಆಗಸ್ಟ್ನಲ್ಲಿ ಆದೇಶ ಹೊರಡಿಸಿತ್ತು.
ಕರ್ನಾಟಕ ಪೊಲೀಸ್ ಕಾಯ್ದೆ-1963ರ ಕಲಂ 103 ಮತ್ತು ಐಪಿಸಿ ಕಲಂ 188ರ ಅಡಿ ಇ–ಗೆಜೆಟೆಡ್ ನಿಯಮಗಳನ್ನು ಜಾರಿಗೊಳಿಸುವ ಹೊಣೆ ಸಂಬಂಧಪಟ್ಟ ಪೊಲೀಸ್ ಇನ್ಸ್ಪೆಕ್ಟರ್ ಮೇಲಿದೆ. ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಇನ್ಸ್ಪೆಕ್ಟರ್ ಕ್ರಮ ಕೈಗೊಳ್ಳಬಹುದು ನ್ಯಾಯಪೀಠವು ಆದೇಶದಲ್ಲಿ ತಿಳಿಸಿತ್ತು. ಇದನ್ನೇ ಪೊಲೀಸ್ ಇಲಾಖೆ ಅನುಸರಿಸುತ್ತಿದೆ.