ಮನೆಯಲ್ಲಿ ಮದುವೆಗೆ ಒಪ್ಪದ ಕಾರಣಕ್ಕೆ ಪ್ರೇಮಿಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ಬೀದರ್ ತಾಲೂಕಿನ ತಾಲೂಕಿನ ಸಿರ್ಸಿ(ಎ) ಗ್ರಾಮದಲ್ಲಿ ನಡೆದಿದೆ.
ಧನರಾಜ್ ರಾಮಣ್ಣ ಬಂಡೆಕರ್ (22) ಹಾಗೂ ಭಾಗ್ಯಶ್ರೀ (18) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು.
ಒಂದೇ ಗ್ರಾಮದವರಾದ ಇಬ್ಬರು ಕಳೆದ ಕೆಲವು ತಿಂಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಯುವಕ ಬೀದರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದನು. ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ವಾಸವಿದ್ದು ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.
ಶುಕ್ರವಾರ ಸಾಯಂಕಾಲ ಯುವತಿಯನ್ನು ಹಾಸ್ಟೆಲ್ ನಿಂದ ಕರೆದುಕೊಂಡು ಬಂದ ಯುವಕ ಗ್ರಾಮದ ಹೊರವಲಯದ ಔರಾದ್(ಎಸ್) ರಸ್ತೆಯಲ್ಲಿರುವ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನ್ಯ ಸಮುದಾಯಕ್ಕೆ ಸೇರಿದವರಾಗಿದ್ದ ಕಾರಣಕ್ಕೆ ಮನೆಯಲ್ಲಿ ಮದುವೆಗೆ ಒಪ್ಪದ ಹಿನ್ನಲೆಯಲ್ಲಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಬಗದಲ್ ಪೊಲೀಸ್ ಠಾಣೆ ಪಿಎಸ್ಐ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬಗದಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.