ಪಿಂಚಣಿ ವಂಚಿತ ಕರ್ನಾಟಕ ರಾಜ್ಯ ಸರ್ಕಾರಿ, ಖಾಸಗಿ (ಪದವಿ ಪೂರ್ವ) ವೃತ್ತಿ ಶಿಕ್ಷಣ (ಜೆ.ಓಸಿ) ಹಾಗೂ ವಿವಿಧ ಇಲಾಖೆಯಿಂದ ವಿಲೀನಗೊಂಡ ನೌಕರರಿಗೆ ಸೇವೆಗೆ ಸೇರಿದ ದಿನಾಂಕ ಪರಿಗಣಿಸಿ ನಿಶ್ಚಿತ ಪಿಂಚಣಿ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.
ಪಿಂಚಣಿ ವಂಚಿತ ಕರ್ನಾಟಕ ರಾಜ್ಯ ಪದವಿ ಪೂರ್ವ (ಜೆ.ಓ.ಸಿ.) ವೃತ್ತಿ ಶಿಕ್ಷಣ ಇಲಾಖೆಯಿಂದ ವಿವಿಧ ಇಲಾಖೆ ವಿಲೀನಗೊಂಡ ನೌಕರರ ಸಂಘದ ಅಧ್ಯಕ್ಷ ಮಲ್ಲಿನಾಥ ಕಳಸ್ಕರ್ ನೇತೃತ್ವದಲ್ಲಿ ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದರು.
“ರಾಜ್ಯದಲ್ಲಿ ಸುಮಾರು 20-25 ವರ್ಷಗಳಿಂದ ವೃತ್ತಿ ಶಿಕ್ಷಣ ಸರಕಾರಿ ಮತ್ತು ಅನುದಾನಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದವರನ್ನು ಸರಕಾರ 2010-11ರಲ್ಲಿ ವಿಶೇಷ ಕಾನೂನು ಜಾರಿ ಮಾಡಿ ಆಯಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ನೌಕರರನ್ನು ಖಾಯಂಗೊಳಿಸಲಾಗಿದೆ. ಆದರೆ ಖಾಯಂಗೊಂಡ ನೌಕರದಾರರಿಗೆ ನಿವೃತ್ತಿ ಹೊಂದಿದ ನಂತರ ಯಾವುದೇ ಸೇವಾ ಭದ್ರತೆ ಸಿಕ್ಕಿರುವುದಿಲ್ಲ. ನಿವೃತ್ತಿಯಾದ ನೌಕರರು ನಿವೃತ್ತಿ ವೇತನದಿಂದ ವಂಚಿತರಾಗಿದ್ದಾರೆ” ಎಂದು ಹೇಳಿದರು.
ನಿವೃತ್ತಿಯಾದ ನೌಕರರಲ್ಲಿ ಹಲವು ಜನ ಮೃತಪಟ್ಟಿದ್ದಾರೆ, ಸೇವೆ ಸಲ್ಲಿಸುವ ಸಂದರ್ಭದಲ್ಲಿಯೂ ಕೂಡಾ ಮೃತಪಟ್ಟಿದ್ದಾರೆ. ಆದರೆ ಇವರಿಗೆ ಸರಕಾರಿ ನೌಕರರಿಗೆ ಸಿಗುವ ಯಾವುದೇ ಸೌಲಭ್ಯಗಳು ಸಿಕ್ಕಿರುವುದಿಲ್ಲ. ನಿವೃತ್ತಿ ಹೊಂದಿದ ಮತ್ತು ಸೇವೆಯಲ್ಲಿ ಮೃತಪಟ್ಟ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಸದರಿ ನೌಕರರಿಗೆ ಸರಕಾರಿ ನೌಕರರಿಗೆ ಸಿಗುವ ಎಲ್ಲಾ ಸವಲತ್ತುಗಳು ಸಿಗಬೇಕು” ಎಂದು ಒತ್ತಾಯಿಸಿದರು.
“ಈಗಾಗಲೇ ನಿವೃತ್ತಿ ಹೊಂದಿದ ನೌಕರರಿಗೆ ನಿವೃತ್ತಿ ವೇತನ ಸೌಲಭ್ಯ ಒದಗಿಸಿಕೊಡಬೇಕು. ಸೇವೆ ಸಲ್ಲಿಸುವ ವೇಳೆ ಮೃತಪಟ್ಟ ಕುಟುಂಬದ ಸದಸ್ಯರಿಗೆ ಅನುಕಂಪ ಆಧಾರದ ಮೇಲೆ ಸರಕಾರಿ ಹುದ್ದೆಗೆ ನೇಮಕ ಮಾಡಿಕೊಳ್ಳಬೇಕು. ಮಾನವಿಯತೆಯ ಆಧಾರದ ಮೇಲೆ ಸದರಿ ನೌಕರರಿಗೆ ಮತ್ತು ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಅನಾಥ ಮಕ್ಕಳ ತಂಗುದಾಣ ವಿರುದ್ಧ ಪ್ರಕರಣ ದಾಖಲು
ಈ ಸಂದರ್ಭದಲ್ಲಿ ಎನ್.ಎಸ್.ಪೂಜಾರಿ, ಜಗನ್ನಾಥ ಮೋದಿ, ಕಾಶಿಂ ಪಟೇಲ್, ಕಾಡಾದಿ ಇದ್ದರು.