ಕವಿತೆಗೂ ಸಮಾಜವನ್ನು ತಿದ್ದುವ ಶಕ್ತಿ ಇದೆ. ಪತ್ರಕರ್ತರು ಸಾಹಿತ್ಯ ಕ್ಷೇತ್ರದಲ್ಲಿ ಮುಂದುವರಿಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ವಿಧಾನಸಭೆ ಮಾಜಿ ಸಭಾಧ್ಯಕ್ಷ ಕೆ.ಜಿ ಬೋಪಯ್ಯ ಹೇಳಿದ್ದಾರೆ.
ಗೋಣಿಕೊಪ್ಪದ ಕಾವೇರಿ ಕಾಲೇಜಿನಲ್ಲಿ ಕೊಡಗು ಪ್ರೆಸ್ಕ್ಲಬ್ ಮತ್ತು ಪತ್ರಕರ್ತರ ಸಂಘ ಯೋಜಿಸಿದ್ದ, ಪತ್ರಕರ್ತ ಕೆ.ಬಿ ಜಗದೀಶ್ ಜೋಡುಬೀಟಿ ಅವರ ‘ಅಪ್ಪನ ಗೋರಿಯಲ್ಲಿ ಕನಸುಗಳ ಬಿಕ್ಕಳಿಕೆ’ ಕವನ ಸಂಕಲನ ಜನಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಪುಸ್ತಕಗಳು ಸಮಾಜದ ಆಗು-ಹೋಗುಗಳನ್ನು ಬಿಂಬಿಸುವ ಕಾರ್ಯ ಮಾಡುತ್ತವೆ. ಕವನಗಳು ಕೂಡ ಸಮಾಜವನ್ನು ತಿದ್ದುವಷ್ಟು ಶಕ್ತಿ ಹೊಂದಿರುತ್ತದೆ. ಪತ್ರಕರ್ತರು ಸಾಹಿತ್ಯ ಕ್ಷೇತ್ರದಲ್ಲಿ ಮುಂದುವರಿಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರ ಕಾರ್ಯ ಮೆಚ್ಚುವಂತದ್ದಾಗಿದೆ” ಎಂದು ಅವರು ಹೇಳಿದ್ದಾರೆ.
ಕವಿ ಟಿ ಸತೀಶ್ ಜವರೇಗೌಡ ಮಾತನಾಡಿ, “ಕನ್ನಡ ಸಾಹಿತ್ಯ ಪರಂಪರೆ ಗಟ್ಟಿಯಾಗಿ ತಳವೂರಲು ಕಾವ್ಯಗಳ ಪಾತ್ರ ದೊಡ್ಡದು. ಚುಟುಕು, ಹನಿಗವನಗಳ ಮೂಲಕ ಕಾವ್ಯ ಸಾಹಿತ್ಯಗಳು ಹುಟ್ಟಿಕೊಳ್ಳುವುದರಿಂದ ಮಹಾ ಕಾವ್ಯಗಳು ಸಾಹಿತ್ಯ ಪರಂಪರೆ ರಕ್ಷಣೆಯ ಭಾಗವಾಗಿದೆ. ಕಾವ್ಯ ಪರಂಪರೆ ಬತ್ತಲು ಅವಕಾಶ ನೀಡುತ್ತಿಲ್ಲ. ಇದರಿಂದಾಗಿ ಪ್ರತೀ ವರ್ಷ ಬಿಡುಗಡೆಯಾಗುವ ಸುಮಾರು 3 ಸಾವಿರ ಪುಸ್ತಕಗಳಲ್ಲಿ ಕಾವ್ಯಗಳೇ ಸಿಂಹಪಾಲು ಹೊಂದಿದೆ. ಕಾವ್ಯ ಪ್ರಕಾಶನಗಳು ಕೂಡ ಜನಪ್ರಿಯಗೊಳ್ಳುತ್ತಿದೆ” ಎಂದರು.
ಪ್ರೆಸ್ಕ್ಲಬ್ ಬೆಳ್ಳಿಮಹೋತ್ಸವ ಆಚರಣಾ ಸಮಿತಿ ಸದಸ್ಯ ಜಿ. ರಾಜೇಂದ್ರ ಮಾತನಾಡಿ, “ಧನಾತ್ಮಕ ಭಾವನೆಗಳು ಕವನಗಳ ರೂಪದಲ್ಲಿ ಮೂಡಿಬರುವುದರಿಂದ ಸಮಾಜಕ್ಕೆ ಸಾಕಷ್ಟು ಬೆಳವಣಿಗೆಗೆ ಅವಕಾಶ ನೀಡಿದಂತಾಗುತ್ತದೆ. ಅನುಭವ ಹಂಚಿಕೊಳ್ಳಬೇಕೆಂಬ ಅಭಿಪ್ರಾಯಗಳಿದ್ದಾಗ ಉತ್ತಮ ಕವನಗಳು ಮೂಡಿಬರಲಿದೆ. ಪ್ರಕೃತಿಗೆ ಪೂರಕ ಕವನಗಳು ಸಾಮಾಜಿಕ ಕಳಕಳಿಯಾಗಿ ರೂಪುಗೊಳ್ಳಬೇಕು” ಎಂದರು.
ಸಾಹಿತಿ ಸೋಮೆಯಂಡ ಕೌಸಲ್ಯ ಸತೀಶ್ ಪುಸ್ತಕದ ಕುರಿತು ಮಾತನಾಡಿದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ, ಕೊಡಗು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಕಾವೇರಿ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಕುಲ್ಲಚಂಡ ಬೋಪಣ್ಣ, ಕವಿ ಜಗದೀಶ್ ಜೋಡುಬೀಟಿ ಇದ್ದರು.
ಕಲಾವಿದೆ ಪುತ್ತಾಮನೆ ವಿದ್ಯಾ ಜಗದೀಶ್ ಪ್ರಾರ್ಥಿಸಿದರು. ಕಿಶೋರ್ ರೈ ಕತ್ತಲೆಕಾಡು ನಿರೂಪಿಸಿದರು. ಚನ್ನನಾಯಕ್, ಮಂಡೇಡ ಅಶೋಕ್, ದರ್ಶನ್ ದೇವಯ್ಯ ಅತಿಥಿಗಳ ಪರಿಚಯ ಮಾಡಿದರು. ಸಿಂಗಿ ಸತೀಶ್ ವಂದಿಸಿದರು.