ಅನ್ಯಾಯ ತಡೆಯುವಂತೆ ಮನವಿ ಮಾಡಿದರೆ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಹೋರಾಟವನ್ನೇ ತಡೆಗಟ್ಟಲು ಮುಂದಾಗಿದೆ. ಶಿರಹಟ್ಟಿಯಲ್ಲಿ 144 ಸೆಕ್ಷನ್ ಜಾರಿ ಮಾಡಿರುವ ಪೊಲೀಸ್ ಇಲಾಖೆ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕೊಲೆ ಮಾಡಿದೆ ಎಂದು ಫಕೀರೇಶ್ವರ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆರೋಪಿಸಿದ್ದಾರೆ.
ತೋಂಟದಾರ್ಯ ಮಠವನ್ನು ಭಾವೈಕ್ಯತೆ ಮಠ ಮಾಡುವ ವಿಚಾರಕ್ಕೆ ಆಕ್ಷೇಪಿಸಿ ಫಕೀರೇಶ್ವರ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “ಮಠದ ಸುತ್ತ ಪೊಲೀಸ್ ಸರ್ಪಗಾವಲು ಇಟ್ಟಿದ್ದು, ಭಕ್ತರನ್ನು ಮಠಕ್ಕೆ ಬಿಡುತ್ತಿಲ್ಲ. ರಾತ್ರೋರಾತ್ರಿ ನೋಟಿಸ್ ನೀಡಲಾಗಿದೆ. ಗದಗದಲ್ಲಿ ಹೋರಾಟ ಮಾಡಲು ನಿರ್ಧರಿಸಿದ್ದೆವು. ಆದರೆ, ಅಲ್ಲಿ 144 ಸೆಕ್ಷನ್ ಜಾರಿ ಮಾಡದೆ, ಶಿರಹಟ್ಟಿಯಲ್ಲಿ ಜಾರಿ ಮಾಡಿದ್ದಾರೆ. ಇದು ಅಕ್ಷಮ್ಯ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ತೋಂಟದಾರ್ಯ ಮಠ ವಿರಕ್ತ ಮಠವೇ ಹೊರತು ಭಾವೈಕ್ಯತೆ ಮಠವಲ್ಲ. ವಿರಕ್ತ ಮಠವನ್ನು ಭಾವೈಕ್ಯತೆ ಮಠ ಮಾಡುವುದು ಭಾವೈಕ್ಯತೆ ಹೊಂದಿರುವ ಮಠಕ್ಕೆ ಮಾಡುವ ಘೋರ ಅನ್ಯಾಯ. ಇಂತಹ ಜಾತಿವಾದಿ ಸ್ವಾಮಿಗಳಿಗೆ ಮಣೆ ಹಾಕಬಾರದು. ಸದ್ಯ ನಮ್ಮ ಮೇಲೆ ಆಗುತ್ತಿರುವ ಅನ್ಯಾಯವನ್ನು ಮಾಧ್ಯಮಗಳ ಮೂಲಕ ಸರ್ಕಾರದ ಗಮನಕ್ಕೆ ತರುತ್ತಿದ್ದೇವೆ. ಭಾವೈಕ್ಯತೆ ಹೋರಾಟ ಮುಂದುವರೆಸುತ್ತೇವೆ” ಎಂದು ಹೇಳಿದ್ದಾರೆ.