ದೇಶದ ಖ್ಯಾತ ಸುದ್ದಿ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ(ಪಿಟಿಐ)ದ ಅಧ್ಯಕ್ಷರಾಗಿ ‘ಪ್ರಜಾವಾಣಿ’ ಕನ್ನಡ ದಿನಪತ್ರಿಕೆಯ ನಿರ್ದೇಶಕ ಕೆ.ಎನ್.ಶಾಂತಕುಮಾರ್ ಆಯ್ಕೆಯಾಗಿದ್ದಾರೆ.
ನವದೆಹಲಿಯ ಸುದ್ದಿ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ನಡೆದ ವಾರ್ಷಿಕ ಸಾಮಾನ್ಯ ಸಭೆಯ ನಂತರ ಪಿಟಿಐಯ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಒಂದು ವರ್ಷದ ಅವಧಿಗೆ ಶಾಂತಕುಮಾರ್ ಅವರ ಆಯ್ಕೆ ನಡೆಯಿತು.
ಹಿಂದೂಸ್ತಾನ್ ಟೈಮ್ಸ್ನ ಸಿಇಒ ಪ್ರವೀಣ್ ಸೋಮೇಶ್ವರ್ ಅವರನ್ನು ಮಂಡಳಿಯು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಸತತ ಎರಡು ಅವಧಿಗೆ ಅಧ್ಯಕ್ಷರಾಗಿ ಅವೀಕ್ ಸರ್ಕಾರ್ ಅವರು ಸೇವೆ ಸಲ್ಲಿಸಿದ್ದರು.
ಕೆ.ಎನ್.ಶಾಂತಕುಮಾರ್ ಅವರು, ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳ ಮಾತೃಸಂಸ್ಥೆಯಾದ ‘ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್’ನ (ಟಿಪಿಎಂಎಲ್) ಆಡಳಿತ ಮಂಡಳಿಯ ನಿರ್ದೇಶಕರಾಗಿದ್ದಾರೆ. ಮಯೂರ ಮಾಸಿಕಕ್ಕೆ ಈಗಲೂ ಸಂಪಾದಕರಾಗಿ ಕೆ.ಎನ್.ಶಾಂತಕುಮಾರ್ ಅವರೇ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು ಎಂಟು ಒಲಿಂಪಿಕ್ಸ್ಗೆ ಫೋಟೋಗ್ರಾಫರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
STORY | K.N. Shanth Kumar of The Printers (Mysore) Pvt. Ltd was on Friday elected Chairman of the Press Trust of India's Board of Directors for a one-year term.
— Press Trust of India (@PTI_News) September 29, 2023
Shanth Kumar's election took place at a meeting of PTI's Board of Directors following their Annual General Meeting at… pic.twitter.com/uhpe4xv8LI
ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ(ಪಿಟಿಐ) ದೇಶದ ಅತಿದೊಡ್ಡ ಮತ್ತು ಹಳೆಯ ಖಾಸಗಿ ಸುದ್ದಿ ಸಂಸ್ಥೆಯಾಗಿದೆ. ಇದನ್ನು 1947ರಲ್ಲಿ ಸ್ವಾತಂತ್ರ್ಯ ಸಿಕ್ಕ ಎರಡು ವಾರಗಳ ನಂತರ ಇದನ್ನು ಪ್ರಾರಂಭಿಸಲಾಗಿತ್ತು.
ಪಿಟಿಐ ಅಧ್ಯಕ್ಷರಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಶಾಂತಕುಮಾರ್, ‘ಸುದ್ದಿಯ ಜತೆಗೆ ಇತ್ತೀಚೆಗೆ ವಿಡಿಯೊ ಸುದ್ದಿಗಳನ್ನು ನೀಡಲು ಆರಂಭಿಸುವ ಮೂಲಕ ಕುತೂಹಲಕರ ಸಂಕ್ರಮಣ ಕಾಲದಲ್ಲಿರುವ ಸುದ್ದಿ ಸಂಸ್ಥೆ ಪಿಟಿಐನ ಅಧ್ಯಕ್ಷನಾಗಿ ನೇಮಕಗೊಂಡಿರುವುದು ಅತ್ಯಂತ ಸಂತಸ ತಂದಿದೆ’ ಎಂದಿದ್ದಾರೆ.
ಶಾಂತಕುಮಾರ್ ಅವರು ‘ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್’ನ (ಟಿಪಿಎಂಎಲ್) ಆಡಳಿತ ಮಂಡಳಿಯಲ್ಲಿ 1983ರಿಂದ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಎಬಿಸಿಯ ಅಧ್ಯಕ್ಷರಾಗಿ, 20 ವರ್ಷಗಳಿಗೂ ಹೆಚ್ಚು ಕಾಲದಿಂದ ಐಎನ್ಎಸ್ನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮತ್ತು ಪಿಟಿಐನ ಈ ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಪಿಟಿಐನ ಅಧ್ಯಕ್ಷರಾಗುವ ಪೂರ್ವದಲ್ಲಿ ಅವರು ಇದೇ ಸುದ್ದಿ ಸಂಸ್ಥೆಯ ಉಪಾಧ್ಯಕ್ಷರಾಗಿದ್ದರು.
ಶಾಂತಕುಮಾರ್ ಅವರ ಆಯ್ಕೆ ಕುರಿತು ಪ್ರತಿಕ್ರಿಯಿಸಿರುವ ಪಿಟಿಐನ ಸಿಇಒ ಹಾಗೂ ಸಂಪಾದಕ ವಿಜಯ್ ಜೋಶಿ, ‘ಶಾಂತಕುಮಾರ್ ಅವರಂತಹ ದಕ್ಷತೆಯುಳ್ಳವರು ಸುದ್ದಿ ಸಂಸ್ಥೆಯ ಚುಕ್ಕಾಣಿ ಹಿಡಿದಿರುವುದು ಪಿಟಿಐನ ಅದೃಷ್ಟವೇ ಸರಿ. ವೃತ್ತಪತ್ರಿಕೆಗಳ ವ್ಯವಹಾರದಲ್ಲಿ ಅವರಿಗಿರುವ ಅನುಭವ ಹಾಗೂ ನವಯುಗದ ಡಿಜಿಟಲ್ ಸುದ್ದಿಗಳ ಕುರಿತ ತಿಳಿವಳಿಕೆಯು ಸುದ್ದಿ ಸಂಸ್ಥೆಗೆ ಹೆಚ್ಚಿನ ಪ್ರಯೋಜನವನ್ನು ತಂದುಕೊಡಲಿದೆ” ಎಂದು ತಿಳಿಸಿದ್ದಾರೆ.