ಅಪರಾಧಗಳ ಬಗ್ಗೆ ಸಾಕ್ಷಿಯಾದರು ಸರಿಯಾದ ಮತ್ತು ನಿಖರವಾದ ಸಾಕ್ಷಿ ಒದಗಿಸಿದರೆ, ಅಪರಾಧಿಗಳಿಗೆ ಶಿಕ್ಷೆಯಾಗುವು ಖಚಿತ ಎಂದು ಕಲಬುರ್ಗಿ ಜಿಲ್ಲಾ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಹೇಳಿದ್ದಾರೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ದಲಿತ ದಿನಾಚರಣೆ ಅಂಗವಾಗಿ 112 ಸಹಾಯವಾಣಿಯ ಕರಪತ್ರ ಹಾಗೂ ಬೀಟ್ ಸಿಬ್ಬಂದಿಗಳ ಮಾಹಿತಿಯ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಚಿತ್ತಾಪುರ ಸಿಪಿಐ ಚಂದ್ರಶೇಖರ ತಿಗಡಿ, ಶಹಾಬಾದ ಸಿಪಿಐ ನಟರಾಜ ಲಾಡೆ ,ಮಾಡಬೂಳ ಪಿಎಸ್ಐ ಚೇತನ್ ಪೂಜಾರ ಕ್ರೈಂ ಪಿಎಸ್ಐ ಶೀಲಾದೇವಿ ಪೋಸ್ಟರ್ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್ಪಿ ಅಡ್ಡೂರು ಶ್ರೀನಿವಾಸಲು, “ಇತ್ತೀಚೆಗೆ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ ನೂರು ದೂರುಗಳ ಪೈಕಿ ಸರಿಯಾದ ಸಾಕ್ಷಿ ಇಲ್ಲದೆ, ಕೇವಲ ಬೆರಳೆಣಿಕೆಯಷ್ಟು ಆರೋಪಿಗಳಿಗೆ ಮಾತ್ರ ಶಿಕ್ಷೆಯಾಗುತ್ತಿದೆ” ಎಂದರು.
“ಪಿರ್ಯಾದುದಾರರು ಘಟನೆಯ ಬಗ್ಗೆ ನಿಖರವಾದ ಮಾಹಿತಿ ನೀಡದೆ, ಯಾವುದೋ ಕಾರಣಕ್ಕಾಗಿ ಇಲ್ಲಸಲ್ಲದ ವಿಷಯಗಳನ್ನು ಸೇರಿಸಿ ದೂರು ದಾಖಲಿಸುತ್ತಿರುವುದು ಸರಿಯಲ್ಲ. ಘಟನೆಯ ಬಗ್ಗೆ ಪ್ರತ್ಯಕ್ಷದರ್ಶಿಗಳು ಹಾಗೂ ನಿಖರ ಮಾಹಿತಿಯೊಂದಿಗೆ ದೂರು ಸಲ್ಲಿಸಿದಾಗ ಮಾತ್ರ ಪ್ರಕರಣವನ್ನು ಭೇದಿಸಲು ಸಾಧ್ಯವಾಗುತ್ತದೆ. ಅದರಲ್ಲಿಯೂ ಜಾತಿನಿಂದನೆ ದೌರ್ಜನ್ಯದ ವಿಷಯದಲ್ಲಿ ಹೆಚ್ಚಾಗಿ ಇಂತಹ ವಿಷಯಗಳು ಕಾಣಸಿಗುತ್ತಿವೆ. ಸಾರ್ವಜನಿಕರು ಮತ್ತು ಪ್ರತ್ಯಕ್ಷದರ್ಶಿಗಳು ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುನೀಲ್ ದೊಡ್ಮನಿ, ಮಲ್ಲಪ್ಪ ಹೊಸ್ಮನಿ, ಗುಂಡು ಮತ್ತಿಮೂಡ,ಆನಂದ ಮಸ್ಕಿ,ನಾಗರಾಜ ಸಜ್ಜನ್ ಇಂಗನಕಲ್ ಸೇರಿದಂತೆ ಮುಖಂಡರು, ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ಕಲ್ಲಪ್ಪ ಎಸ್ಐ,ಲಕ್ಷ್ಮಣ ಎಸ್ಐ,ಕಮಲಾಕರ್,ಪ್ರಶಾಂತ ಹೇರೂರ್,ವೀರಶೆಟ್ಟಿ,ಸಂಗಣ್ಣ,ಶಾಂತಮಲ್ಲು ಸೇರಿದಂತೆ ಅನೇಕರು ಇದ್ದರು.