ಕೋಮು ಗಲಭೆ ಹಿನ್ನೆಲೆಯಲ್ಲಿ ಹರಿಯಾಣದ ನುಹ್ನಲ್ಲಿ ನಡೆಯುತ್ತಿದ್ದ ಕಟ್ಟಡ ಧ್ವಂಸ ಕಾರ್ಯವನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಆದೇಶದ ಮೇರೆಗೆ ಇಂದು (ಆಗಸ್ಟ್ 7) ಸ್ಥಗಿತಗೊಳಿಸಲಾಗಿದೆ.
ನುಹ್ನಲ್ಲಿನ ಬುಲ್ಡೋಜರ್ ಕ್ರಮದ ವಿಚಾರಣೆಯನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡ ನ್ಯಾಯಮೂರ್ತಿ ಜಿ ಎಸ್ ಸಂಧವಾಲಿಯಾ ಮತ್ತು ನ್ಯಾಯಮೂರ್ತಿ ಹರ್ಪ್ರೀತ್ ಕೌರ್ ಜೀವನ್ ಅವರ ವಿಭಾಗೀಯ ಪೀಠವು ಕ್ರಮವನ್ನು ಸ್ಥಗಿತಗೊಳಿಸುವಂತೆ ಆದೇಶಿಸಿತು. ಅಲ್ಲದೆ ಹರಿಯಾಣ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ಉತ್ತರವನ್ನು ಕೇಳಿದೆ.
ಹೈಕೋರ್ಟ್ ತೀರ್ಪಿನ ನಂತರ ಬುಲ್ಡೋಜರ್ ಕ್ರಮವನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿ ಧೀರೇಂದ್ರ ಖಡ್ಗಟಾ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಹರಿಯಾಣದಲ್ಲಿ ಕೋಮು ಗಲಭೆಯಲ್ಲಿ 6 ಮಂದಿ ಸಾವಿಗೀಡಾದ ಒಂದು ವಾರದ ನಂತರ ನ್ಯಾಯಾಲಯವು ಸ್ವಯಂ ಪ್ರೇರಿತವಾಗಿ ಈ ವಿಷಯವನ್ನು ಕೈಗೆತ್ತಿಕೊಂಡಿದೆ.
ಬುಲ್ಡೋಜರ್ ಕ್ರಮ ತೆಗೆದುಕೊಂಡಿರುವ ಜಿಲ್ಲಾಡಳಿತ ಕಳೆದ ನಾಲ್ಕು ದಿನಗಳಲ್ಲಿ 350 ಗುಡಿಸಲುಗಳು ಮತ್ತು 50 ಕಟ್ಟಡಗಳನ್ನು ಧ್ವಂಸಗೊಳಿಸಿದೆ.
ಈ ಸುದ್ದಿ ಓದಿದ್ದೀರಾ? 2 ಕೋಟಿ ರೂ. ನೀಡುವಂತೆ ಆಸ್ಕರ್ ಪ್ರಶಸ್ತಿ ವಿಜೇತ ನಿರ್ಮಾಪಕರಿಗೆ ಮಾವುತ ದಂಪತಿಯಿಂದ ನೋಟಿಸ್
ವಿಪಕ್ಷಗಳ ಆಕ್ರೋಶ
ಧ್ವಂಸ ಕಾರ್ಯಾಚರಣೆಯು ಟೀಕೆಗೆ ಒಳಗಾಗಿತ್ತು. ಇದು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಹೈದರಾಬಾದ್ ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಧ್ವಂಸ ಕಾರ್ಯಾಚರಣೆಯ ಬಗ್ಗೆ ಹರಿಯಾಣದ ಮನೋಹರ್ ಲಾಲ್ ಖಟ್ಟರ್ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ.
ಶಿಕ್ಷೆಯನ್ನು ನೀಡಲು ಸರಿಯಾದ ಪ್ರಕ್ರಿಯೆಯನ್ನು ಅನುಸರಿಸದೆ ಒಂದು ಸಮುದಾಯದ ಕಟ್ಟಡಗಳನ್ನು ಕೆಡವಲಾಗುತ್ತಿದೆ. ಖಟ್ಟರ್ ಸರ್ಕಾರವು ನ್ಯಾಯಾಲಯದ ಹಕ್ಕುಗಳನ್ನು ಕಸಿದುಕೊಂಡಿದ್ದು, ಸೈದ್ಧಾಂತಿಕವಾಗಿ ಬಿಜೆಪಿ ಹಾಗೂ ಸಂಘ ಪರಿವಾರಕ್ಕೆ ಹತ್ತಿರವಾಗಿರುವವರಿಗೆ ನ್ಯಾಯ ನೀಡುತ್ತಿದೆ ಎಂದು ಓವೈಸಿ ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಕೋಮುಗಲಭೆ ಪೀಡಿತ ಪ್ರದೇಶಗಳಲ್ಲಿ ಉದ್ವಿಗ್ನತೆ ಮುಂದುವರಿದಿದ್ದು,ಈ ಪ್ರದೇಶಗಳಲ್ಲಿ ಕರ್ಫ್ಯೂ ಹೇರಲಾಗಿದೆ. ಅರೆಸೇನಾ ಪಡೆಗಳು ಭದ್ರತೆ ಒದಗಿಸಿವೆ. ಇಂದು ಬೆಳಗ್ಗೆ ನಾಲ್ಕು ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಲಾಗಿತ್ತು. ಪ್ರದೇಶದಲ್ಲಿ ಇಂಟರ್ನೆಟ್ ನಿಷೇಧವು ಜಾರಿಯಲ್ಲಿದೆ.
ಘಟನೆಗೆ ಸಂಬಂಧಿಸಿದಂತೆ 150 ಕ್ಕೂ ಹೆಚ್ಚು ಜನರನ್ನು ಬಂಧಿಸಿ 56 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ನುಹ್ ಪೊಲೀಸರು ತಿಳಿಸಿದ್ದಾರೆ.