ರಾಯಚೂರು ನಗರದ ಎಪಿಎಂಸಿಯಲ್ಲಿ ಅಧ್ಯಕ್ಷರು, ನಿರ್ದೇಶಕರು ಹಾಗೂ ಕಾರ್ಯದರ್ಶಿ, ಸಹ ಕಾರ್ಯದರ್ಶಿ ಒಟ್ಟಾಗಿ ಎಪಿಎಂಸಿ ಆಸ್ತಿಯನ್ನು ಲೀಸ್ ಕಂ ಸೇಲ್ ಮೇಲೆ ಮಾರಾಟ ಮಾಡಿದ್ದಾರೆ. ಕೋಟ್ಯಂತರ ರೂ. ಅಕ್ರಮ ಎಸಗಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ವಿರೂಪಾಕ್ಷಿ ಒತ್ತಾಯಿಸಿದ್ದಾರೆ.
ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರೈತರು ಎಪಿಎಂಸಿಗೆ ಮಾರಾಟಕ್ಕೆ ಬರುವ ಬೆಳೆ ಟೆಂಡರ್ ಆಗದೇ ಹೋದಲ್ಲಿ ಸಂಗ್ರಹಿಸಲು ನಾಲ್ಕು ಗೋದಾಮುಗಳನ್ನು ನಿರ್ಮಿಸಲಾಗಿತ್ತು. ಐದು ಕೋಟಿ ರೂ. ಮೌಲ್ಯದ ಆಸ್ತಿಯನ್ನು ಕಡಿಮೆ ದರಕ್ಕೆ ಮಾರಾಟ ಮಾಡಿ ಅವ್ಯವಹಾರ ಎಸಗಲಾಗಿದೆ. ಶೈಲೇಶ್ವರ್ ಕಾಟನ್ ಟ್ರೇಡರ್ಸ್ ಎಂಬುವವರಿಗೆ 2022ರಲ್ಲಿ 34 ಲಕ್ಷ ರೂ.ಗಳಿಗೆ ಲೀಸ್ ಕಂ ಸೇಲ್ ಮಾಡಲಾಗಿದೆ.
ರೇಣುಕಾ ಟ್ರೇಡರ್ಸ್ ಎಂಬುವವರಿಗೆ ಅದೇ ವರ್ಷದಲ್ಲಿ 500ಮೆಟ್ರಿಕ್ ಟನ್ ದಾಸ್ತಾನು ಸಾಮರ್ಥ್ಯದ ಗೋದಾಮನ್ನು 50ಲಕ್ಷ ರೂ.ಗಳಿಗೆ ಮಾರಾಟ ಮಾಡಲಾಗಿದ. ಶ್ರೀನಾಥ ಇಂಡಸ್ಟ್ರೀಸ್ ಹಾಗೂ ಲಕ್ಷ್ಮೀ ವೆಂಕಟೇಶ್ವರ ಟ್ರೇಡರ್ ಎಂಬುವವರಿಗೆ ಟೆಂಡರ್ ಹಾಲ್ನ್ನು ಸಹ ಮಾರಾಟ ಮಾಡಲಾಗಿದೆ. ಎಪಿಎಂಸಿ ಕಾಯ್ದೆಗಳ ಅನ್ವಯ ಸ್ವತ್ತಿನ ವ್ಯವಹಾರದ ಆಸ್ತಿಯನ್ನು ಮಾರಾಟ ಮಾಡಲು ಕಾಯ್ದೆಯಲ್ಲಿ ಅವಕಾಶವಿಲ್ಲ. ಅಂಗಡಿ ಕಂ. ಗೋದಾಮು ಮಾರಾಟ ಮಾಡಲು ಮಾತ್ರ ಅವಕಾಶವಿದೆ.
ಆದರೆ, ಗೋದಾಮುಗಳನ್ನು ಮಾರಾಟಮಾಡಿ ವಂಚಿಸಲಾಗಿದೆ. ಅಚ್ಯುತರೆಡ್ಡಿ ಅಧ್ಯಕ್ಷರಾಗಿದ್ದಾಗ ಮಾರಾಟ ಮಾಡಲಾಗಿದೆ. ಎಪಿಎಂಸಿ ಕಾರ್ಯದರ್ಶಿಯಾಗಿರುವ ಕೃಷ್ಣ ಅವರೇ ಅಕ್ರಮಕ್ಕೆ ಕಾರಣವಾಗಿದ್ದಾರೆ ಎಂದು ಆರೋಪಿಸಿದರು. ಮಾರಾಟ ಮಾಡುವಾಗ 17ಷರತ್ತುಗಗಳನ್ನು ವಿಧಿಸಿ ಮಾರಾಟ ಮಾಡಲಾಗಿದೆ. ವಾಣಿಜ್ಯ ಉದ್ದೇಶಕ್ಕೆ ಬಳಸಬಾರದು, ವಾಸ ಸೇರಿ ಬೇರೆಯದಕ್ಕೆ ಬಳಸದಂತೆ ಷರತ್ತು ವಿಧಿಸಿರುವನ್ನು ಉಲ್ಲಂಘಿಸಲಾಗಿದೆ. ಕೂಡಲೇ ಎಪಿಎಂಸಿಆಡಳಿತ ಗೋದಾಮುಗಳನ್ನು ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿ ಎಪಿಎಂಸಿ ಸಚಿವರಿಗೆ ದೂರು ನೀಡಿರುವುದಾಗಿ ಹೇಳಿದರು.
ಇನ್ನೂ 88ನಿವೇಶನಗಳನ್ನು ಸಹ ಲೀಸ್ ಕಂ ಸೇಲ್ ಮಾಡಲಾಗಿದೆ. ಪತ್ರಿಕೆಗಳಲ್ಲಿ ಅರ್ಜಿ ಕರೆದು ಅರ್ಜಿಗಳನ್ನು ಅಹ್ವಾನಿಸಲಾಗಿತ್ತು. ಬಂದಿರುವ ಅರ್ಜಿದಾರರೊಂದಿಗ ಒಳ ಒಪ್ಪಂದ ಮಾಡಿಕೊಂಡು ಪ್ರತೀ ಚದುರು ಅಡಿಗೆ 80 ರೂ. ನಿಗಧಿಗೊಳಿಸಿರುವ ದರವನ್ನು 40ರೂ.ಗೆ ಇಳಿಸಿ 21ಕೋಟಿ 31ಲಕ್ಷ ಹಣ ಸಂಗ್ರಹಿಸಲಾಗಿದೆ. ಆದರೆ, ಸರಿ ಸುಮಾರು 21ಕೋಟಿ ರೂ. ಅಕ್ರಮ ನಡೆದಿದೆ. 10ವೇರ್ ಹೌಸ್, 28ಇತರೆ ನಿವೇಶನಗಳಿಗೆ ಕಡಿಮೆ ದರದಲ್ಲಿ ಸರ್ಕಾರಕ್ಕೆ ವಂಚಿಸಲಾಗಿದೆ. ಕೂಡಲೇ ಅಕ್ರಮದ ತನಿಖೆ ನಡೆಸದೇ ಹೋದಲ್ಲಿ ರೈತರೊಂದಿಗೆ ಹೋಗಿ ಗೋದಾಮುಗಳನ್ನು ತೆರವುಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ವಕೀಲ ಎನ್. ಶಿವಶಂಕರ, ನರಸಿಂಹ ನಾಯಕ, ನರಸಪ್ಪ ಆಶಾಪುರು, ಹಂಪಯ್ಯ, ನಾಗರಾಜಗೌಡ, ಆಶೋಕರೆಡ್ಡಿ ಉಪಸ್ಥಿತರಿದ್ದರು.