- ಮಸೂದೆ ಬಗ್ಗೆ ಬಜೆಟ್ ಭಾಷಣದಲ್ಲಿ ಹೇಳಿದ್ದ ರಾಜಸ್ಥಾನ ಮುಖ್ಯಮಂತ್ರಿ ಗೆಹ್ಲೋಟ್
- ಅರೆಕಾಲಿಕ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ಸ್ಥಾಪನೆ ಪ್ರಸ್ತಾಪಿಸುವ ಮಸೂದೆ
ರಾಜಸ್ಥಾನ ವಿಧಾನಸಭೆಯಲ್ಲಿ ಸೋಮವಾರ (ಜುಲೈ 24) ಅರೆಕಾಲಿಕ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ವಿಸ್ತರಿಸುವ ಮಸೂದೆಯನ್ನು ಅಂಗೀಕರಿಸಲಾಗಿದೆ.
ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಾಯಕರೊಂದಿಗೆ ಯಾವುದೇ ಚರ್ಚೆಯಿಲ್ಲದೆ ಮಸೂದೆ ಅಂಗೀಕಾರಗೊಂಡಿದೆ.
ವಜಾಗೊಂಡ ಸಚಿವ ರಾಜೇಂದ್ರ ಗುಧಾ ಜತೆ ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ಧರಿವಾಲ್ ಮತ್ತು ಇತರ ಕಾಂಗ್ರೆಸ್ ಶಾಸಕರೊಂದಿಗೆ ತೀವ್ರ ಗದ್ದಲ ಉಂಟಾಯಿತು. ಇದರಿಂದ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಬಳಿಕ ಸದನ ಆರಂಭವಾದ ನಂತರವೂ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಸಾಂಕೇತಿಕವಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸರ್ಕಾರದ ಅಕ್ರಮಗಳ ಬಗ್ಗೆ ಮಾಹಿತಿಯುಳ್ಳ ಕೆಂಪು ಡೈರಿ ವಿಚಾರವಾಗಿ ಪ್ರತಿಭಟನೆ ನಡೆಸಿದರು.
ಬಿಜೆಪಿ ಶಾಸಕರು ಸಭಾಧ್ಯಕ್ಷ ಸಿ.ಪಿ.ಜೋಶಿ ಅವರ ಮುಂದೆ ಸಾಂಕೇತಿಕ ಕೆಂಪು ಡೈರಿಯನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಪ್ರತಿಪಕ್ಷಗಳ ಗದ್ದಲದ ನಡುವೆಯೇ ಸದನದ ಕಲಾಪ ಮುಂದುವರಿಯಿತು. ಪ್ರತಿಪಕ್ಷಗಳ ಘೋಷಣೆ ಮಧ್ಯೆ ಸಭಾಧ್ಯಕ್ಷ ಜೋಶಿ ಮತ್ತು ಆಡಳಿತ ಪಕ್ಷ ಅರೆಕಾಲಿಕ ಕಾರ್ಮಿಕರ ಮಸೂದೆ ಸೇರಿದಂತೆ ನಾಲ್ಕು ಮಸೂದೆಗಳ ಅಂಗೀಕಾರಕ್ಕೆ ಮುಂದಾದರು.
ರಾಜಸ್ಥಾನ ಅರೆಕಾಲಿಕ ಕಾರ್ಮಿಕರಿಗೆ ಸಂಬಂಧಿಸಿದ ಮಸೂದೆಯು (ನೋಂದಣಿ ಮತ್ತು ಕಲ್ಯಾಣ) ಈ ಕಾರ್ಮಿಕರು ಹೊಂದಿರುವ ಹಕ್ಕುಗಳನ್ನು ವಿಸ್ತರಿಸುತ್ತದೆ. ರಾಜ್ಯ ಸರ್ಕಾರದಡಿ ನೋಂದಣಿಯಾಗುವ ಈ ಕಾರ್ಮಿಕರು ಸಾಮಾನ್ಯ ಮತ್ತು ನಿರ್ದಿಷ್ಟ ಸಾಮಾಜಿಕ ಭದ್ರತೆ ಯೋಜನೆಗಳ ಫಲಾನುಭವಿಗಳಾಗುತ್ತಾರೆ.
ಅರೆಕಾಲಿಕ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ಸ್ಥಾಪಿಸುವುದನ್ನು ಮಸೂದೆ ಹೇಳುತ್ತದೆ. ಈ ಅರೆಕಾಲಿಕ ಕಾರ್ಮಿಕರ ಕಲ್ಯಾಣ ಮಂಡಳಿಗೆ ಪದಾಧಿಕಾರಿಗಳನ್ನು ಹೊರತುಪಡಿಸಿ ಅರೆಕಾಲಿಕ ಕಾರ್ಮಿಕರು ಮತ್ತು ಸಂಗ್ರಾಹಕರಿಂದ ತಲಾ ಒಬ್ಬರು ಪ್ರತಿನಿಧಿಗಳನ್ನು ರಾಜ್ಯ ಸರ್ಕಾರ ನೇಮಿಸುತ್ತದೆ.
ಈ ಸುದ್ದಿ ಓದಿದ್ದೀರಾ? ನ್ಯಾಯಾಲಯದ ಕೊಠಡಿಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಅಳವಡಿಸಿ: ತಮಿಳುನಾಡು ಕಾಂಗ್ರೆಸ್ ಒತ್ತಾಯ
ರಾಜಸ್ಥಾನ ರಾಜ್ಯದಲ್ಲಿ ಎಲ್ಲ ಅರೆಕಾಲಿಕ ಕಾರ್ಮಿಕರು ಮತ್ತು ಸಂಗ್ರಾಹಕರ ನೋಂದಣಿಯ ಬಗ್ಗೆ ಮಸೂದೆ ಪ್ರಸ್ತಾಪಿಸುತ್ತದೆ. ಇದರಿಂದ ಸರ್ಕಾರ ರಾಜ್ಯದಲ್ಲಿನ ಎಲ್ಲ ಅರೆಕಾಲಿಕ ಕಾರ್ಮಿಕರ ಬಗ್ಗೆ ಮಾಹಿತಿಯನ್ನು ಹೊಂದಲು ಮತ್ತು ಪ್ರತಿ ಕಾರ್ಮಿಕರಿಗೆ ವಿಭಿನ್ನ ಗುರುತಿನ ಸಂಖ್ಯೆ ನೀಡಲು ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಈ ವರ್ಷದ ಆರಂಭದಲ್ಲಿ ಮಾಡಿದ್ದ ಬಜೆಟ್ ಕುರಿತ ಭಾಷಣದಲ್ಲಿ ಅರೆಕಾಲಿಕ ಕಾರ್ಮಿಕರ ಬಗೆಗಿನ ಮಸೂದೆ ಬಗ್ಗೆ ಪ್ರಕಟಿಸಿದ್ದರು.