ಬೆಂಗಳೂರಿನ ದೊಡ್ಡನೆಕ್ಕುಂದಿಯಲ್ಲಿ ರಾಜಕಾಲುವೆ ಒತ್ತುವರಿ ಮಾಡಿ ಅಕ್ರಮವಾಗಿ ಈಜುಕೊಳ ನಿರ್ಮಾಣ ಮಾಡಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಬುಲ್ಡೋಜರ್ ಮೂಲಕ ತೆರವು ಕಾರ್ಯಾಚರಣೆ ಮಾಡುತ್ತಿದ್ದಾರೆ.
ಸೋಮವಾರ ಬೆಳಿಗ್ಗೆಯಿಂದ ರಾಜಧಾನಿ ಬೆಂಗಳೂರಿನ ದೊಡ್ಡನೆಕ್ಕುಂದಿಯ ಫರ್ನ್ಸಿಟಿ ಲೇಔಟ್ನಲ್ಲಿ ಒತ್ತುವರಿ ತೆರವು ಕಾರ್ಯ ನಡೆಯುತ್ತಿದೆ. ಬಿಬಿಎಂಪಿ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ಮಾರ್ಕ್ ಮಾಡಿದ್ದ ರಾಜಕಾಲುವೆ ಒತ್ತುವರಿ ಸ್ಥಳಕ್ಕೆ ಬುಲ್ಡೋಜರ್ ಸಮೇತ ತೆರಳಿ, ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಫರ್ನ್ಸಿಟಿ ಲೇಔಟ್ನಲ್ಲಿ ನಿವಾಸಿಗಳು ಅಕ್ರಮವಾಗಿ ರಾಜಕಾಲುವೆ ಒತ್ತುವರಿ ಮಾಡಿ ಈಜುಕೊಳ ಹಾಗೂ ಕ್ಲಬ್ ನಿರ್ಮಾಣ ಮಾಡಿಕೊಂಡಿದ್ದು, ಜೆಸಿಬಿ ಹಿಟಾಚಿಗಳಿಂದ ಈಜುಕೊಳ ಹಾಗೂ ಐಷಾರಾಮಿ ಕ್ಲಬ್ನ ಗೋಡೆ ತೆರವು ಮಾಡಲಾಗುತ್ತಿದೆ. ಒತ್ತುವರಿ ತೆರವು ವೇಳೆ ನಿವಾಸಿಗಳು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಕ್ಕಿ ಕೊರತೆ ನೀಗಿಸಲು ಪಂಜಾಬ್ ರಾಜ್ಯ ಸಿದ್ಧವಿದೆ: ಆಪ್ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ
ಇನ್ನೂ ಒತ್ತುವರಿ ತೆರವು ವೇಳೆ ಬಿಬಿಎಂಪಿ ಅಧಿಕಾರಿಗಳಿಗೆ ಬಿಜೆಪಿ ನಾಯಕ ನಂದೀಶ್ ರೆಡ್ಡಿ ತೆರವು ಮಾಡದಂತೆ ತಡೆದಿದ್ದು, ಏರು ಧ್ವನಿಯಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ರಾಜಕಾಲುವೆ ಒತ್ತುವರಿ ತೆರವು ವಿಚಾರದಲ್ಲಿ ಪಕ್ಷಪಾತ ಮಾಡುತ್ತಿದ್ದೀರಿ ಎಂದು ಜೆಸಿಬಿ ಮೇಲೆ ಹತ್ತಿ ಬೀಗ ಕಿತ್ತುಕೊಂಡಿದ್ದಾರೆ. ಜೆಸಿಬಿ ಮುಂದೆ ಅಡ್ಡ ಕೂರುತ್ತೇನೆ. ತೆರವು ಮಾಡಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.