ರಾಜ್‌ಕುಮಾರ್ ಹಿರಾನಿ: ನಗಿಸುತ್ತಲೇ ಅಳಿಸುವ ಮಾಂತ್ರಿಕ ಸ್ಪರ್ಶದ ನಿರ್ದೇಶಕ

Date:

ಸಿನಿಮಾ ಎಂದರೆ ಕಥೆ ಹೇಳುವುದು, ಕಥೆ ಹೇಳುವುದು ಎಂದರೆ ರಂಜಿಸುವುದು, ಹಾಗೆಯೇ ವಾಸ್ತವವನ್ನು ತೋರಿಸುವುದು ಎನ್ನುವುದು ರಾಜ್‌ಕುಮಾರ್ ಹಿರಾನಿ ನಂಬಿಕೆ. ತನ್ನ ಮಾಂತ್ರಿಕ ಸ್ಪರ್ಶದಿಂದ ಸಿನಿಮಾವನ್ನು ರಂಜನೀಯ ಹಾಗೂ ಅರ್ಥಪೂರ್ಣಗೊಳಿಸುವ ಕಲೆ ಸಿದ್ಧಿಸಿಕೊಂಡಿರುವ ಅಪರೂಪದ ನಿರ್ದೇಶಕ ಹಿರಾನಿ. ಅವರ ಯಾವ ಚಿತ್ರವೂ ಜನರನ್ನು ರಂಜಿಸುವಲ್ಲಿ ವಿಫಲವಾಗಿದ್ದೇ ಇಲ್ಲ.

ಡಂಕಿ’ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಕೆಲವರು ಇದೊಂದು ಮಾಸ್ಟರ್ ಪೀಸ್ ಎಂದರೆ, ಮತ್ತೆ ಕೆಲವರು ಸಾಧಾರಣ ಚಿತ್ರ ಎನ್ನುತ್ತಿದ್ದಾರೆ. ಇಷ್ಟರ ನಡುವೆ ಬಹುತೇಕರು ಸಿನಿಮಾ ಗೆಲ್ಲುವುದಂತೂ ಖಚಿತ ಎಂದು ಭವಿಷ್ಯ ನುಡಿದಿದ್ದಾರೆ. ಅದನ್ನು ಹೇಳಲು ವಿಶೇಷ ಪ್ರತಿಭೆಯೇನೂ ಬೇಕಾಗಿಲ್ಲ. ಯಾಕೆಂದರೆ, ಅದು ಈ ಚಿತ್ರದ ನಿರ್ದೇಶಕ ರಾಜ್‌ಕುಮಾರ್ ಹಿರಾನಿಯ ಹಿರಿಮೆ. ಆತ ಎಂದೂ ಸೋತದ್ದೇ ಇಲ್ಲ.

ರಾಜ್‌ಕುಮಾರ್ ಹಿರಾನಿ, ಮೂರು ಫೈಟ್, ನಾಲ್ಕು ಹಾಡು ಹಾಕಿ ಹೇಗೋ ಒಂದು ಯಶಸ್ವೀ ಸಿನಿಮಾ ಮಾಡುವ ಬಾಲಿವುಡ್‌ನ ಇತರೆ ನಿರ್ದೇಶಕರಂತಲ್ಲ. ಹಿಂದಿ ಚಿತ್ರರಂಗವಷ್ಟೇ ಏಕೆ, ಇಡೀ ಭಾರತದ ಯಾವ ಚಿತ್ರರಂಗದಲ್ಲೂ ಇಂಥ ಮತ್ತೊಬ್ಬ ನಿರ್ದೇಶಕನಿಲ್ಲ. ಮೂರ್ನಾಲ್ಕು ವರ್ಷಕ್ಕೊಂದು ಸಿನಿಮಾ ಮಾಡುವ ಹಿರಾನಿ, ಪ್ರತಿಯೊಂದು ಚಿತ್ರವನ್ನು ಅತ್ಯಂತ ಶ್ರದ್ಧೆ ಮತ್ತು ಕಸುಬುದಾರಿಕೆಯಿಂದ ಒಂದು ಕಲಾಕೃತಿ ರೂಪಿಸುವಂತೆಯೇ ರೂಪಿಸುತ್ತಾರೆ. ಅವರ ʼಮುನ್ನಾಭಾಯ್ ಎಂಬಿಬಿಎಸ್‌ʼ (2003), ʼಲಗೇ ರಹೋ ಮುನ್ನಾಭಾಯ್ʼ (2006), ʼತ್ರೀ ಈಡಿಯಟ್ಸ್‌ʼ (2009), ʼಪಿಕೆʼ (2014) ಮತ್ತು ʼಸಂಜುʼ (2018) ಚಿತ್ರಗಳು ಇದಕ್ಕೆ ನಿದರ್ಶನ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹಿರಾನಿ, ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದವರು. ಅವರು ನಿರ್ದೇಶಕರಾಗಲು ಕಾರಣ ಅವರ ಅಪ್ಪ ಸುರೇಶ್ ಹಿರಾನಿ. ದೇಶ ವಿಭಜನೆಯ ಕಾಲದಲ್ಲಿ ಪಾಕಿಸ್ತಾನದಿಂದ ಅವರ ಕುಟುಂಬ ಮಹಾರಾಷ್ಟ್ರದ ನಾಗಪುರಕ್ಕೆ ವಲಸೆ ಬಂದಾಗ ಅವರ ಅಪ್ಪನಿಗಿನ್ನೂ 14 ವರ್ಷ ವಯಸ್ಸು. ಕೇವಲ ಎರಡು ಟೈಪಿಂಗ್ ಮಷೀನ್ ಇಟ್ಟುಕೊಂಡು ಒಂದು ತರಬೇತಿ ಕೇಂದ್ರ ಆರಂಭಿಸಿದ ಅವರು ನಂತರ ಅದನ್ನು ಚೆನ್ನಾಗಿ ಬೆಳೆಸಿದರು. ತಂದೆಗೆ ಮಗ ಚಾರ್ಟೆಡ್ ಅಕೌಂಟೆಂಟ್ ಆಗಬೇಕು ಎನ್ನುವ ಆಸೆಯಿತ್ತು. ಆದರೆ, ರಾಜ್‌ಕುಮಾರ್ ಹಿರಾನಿ ಇಂಜಿನಿಯರ್ ಆಗಬೇಕು ಎಂದುಕೊಂಡಿದ್ದರು. ಪಿಯುಸಿನಲ್ಲಿ ಉತ್ತಮ ಅಂಕಗಳು ಬರದೇ ಕಾಮರ್ಸ್ ಪದವಿಗೆ ಪ್ರವೇಶ ಪಡೆದರು. ʼತ್ರೀ ಈಡಿಯಟ್ಸ್ʼ ಸಿನಿಮಾದಲ್ಲಿ ಮಾಧವನ್ ತಮ್ಮ ಅಪ್ಪನ ಬಳಿ ಹೋಗಿ ನಾನು ಇಂಜಿನಿಯರ್ ಆಗುವುದಿಲ್ಲ ಎನ್ನುವುದು ಹಿರಾನಿ ಬದುಕಿನಲ್ಲಿ ನಡೆದ ಒಂದು ಘಟನೆ. ಕಾಮರ್ಸ್ ಸೇರಿದರೂ ಹಿರಾನಿ ಸರಿಯಾಗಿ ಕಾಲೇಜಿಗೆ ಹೋಗದೆ, ಸ್ನೇಹಿತರೊಂದಿಗೆ ʼಆವಾಜ್ʼ ಎನ್ನುವ ರಂಗತಂಡ ಕಟ್ಟಿ ನಾಟಕ ಬರವಣಿಗೆ, ನಟನೆ, ನಿರ್ದೇಶನದಲ್ಲಿ ತೊಡಗಿದರು.

ಹಿರಾನಿ

ಮಗನಿಗೆ ಯಾವುದಿಷ್ಟವೋ ಅದನ್ನೇ ಮಾಡಲಿ ಎನ್ನುವವರು ಸುರೇಶ್ ಹಿರಾನಿ. ಅವರ ಸಿಂಧಿ ಸಮುದಾಯದಲ್ಲಿ ಸಿನಿಮಾ ಸೇರುವವರ ಬಗ್ಗೆ ಒಳ್ಳೆಯ ಭಾವನೆ ಏನೂ ಇರಲಿಲ್ಲ. ಆದರೂ ನೆಂಟರಿಷ್ಟರ ಕುಹಕಗಳನ್ನು ತಾಳಿಕೊಂಡೇ ಸುರೇಶ್ ಹಿರಾನಿ, ಮಗನಿಗೆ ನಟನೆ ಕಲಿ ಎಂದು ಒಂದಿಷ್ಟು ದುಡ್ಡು ಕೊಟ್ಟು ಮುಂಬೈಗೆ ಕಳಿಸಿದರು. ಸಣ್ಣ ಪಟ್ಟಣದ ಹುಡುಗ ಹಿರಾನಿಗೆ ಮುಂಬೈ ಮಹಾನಗರಕ್ಕೆ ಹೊಂದಿಕೊಳ್ಳುವುದು ಕಷ್ಟವೆನಿಸಿ ಮೂರೇ ದಿನಕ್ಕೆ ವಾಪಸ್ಸಾದರು. ಆಗಲೂ ಅವರ ಅಪ್ಪ ಮಗನ ಬಗ್ಗೆ ಕೋಪ ಮಾಡಿಕೊಳ್ಳಲಿಲ್ಲ. ಮಗನನ್ನು ಈ ಬಾರಿ ಅವರು ಪೂನಾ ಫಿಲಂ ಇನ್ಸ್‌ಟಿಟ್ಯೂಟ್‌ಗೆ ಕಳಿಸಿದರು. ಅಲ್ಲಿ ಅಷ್ಟೊತ್ತಿಗೆ ನಟನೆಯ ಕೋರ್ಸ್ ಅನ್ನು ನಿಲ್ಲಿಸಿಬಿಟ್ಟಿದ್ದರು. ನಿರ್ದೇಶನದ ಕೋರ್ಸ್ ಸೇರೋಣ ಎಂದರೆ, ಅದಕ್ಕೆ ಪೈಪೋಟಿ ಜಾಸ್ತಿ ಇತ್ತು. ಹೀಗಾಗಿ ರಾಜ್‌ಕುಮಾರ್ ಹಿರಾನಿ ಸಂಕಲನದ ಕೋರ್ಸ್ ಸೇರಿದರು. ಮುಂದೆ, ಸಿನಿಮಾ ನಿರ್ದೇಶನ ಮಾಡಲು ಅವರಿಗೆ ಸಂಕಲನ ಕಲಿತದ್ದು ವರದಾನವೇ ಆಯಿತು.

ಮಗ ಕೋರ್ಸ್ ಮುಗಿಸಿ ಮುಂಬೈಗೆ ಹೋಗುವ ಹೊತ್ತಿಗೆ ಮಗನಿಗೆ ಮುಂಬೈನಲ್ಲಿ ಒಂದು ಮನೆ ಕೊಂಡುಕೊಡಬೇಕು ಎನ್ನುವ ಆಸೆ ಅವರಿಗೆ ತಂದೆಗೆ ಇತ್ತು. ಆದರೆ, 2000ದ ಇಸವಿಯ ಹೊತ್ತಿಗೆ ಕಂಪ್ಯೂಟರ್ ಬಂದಿದ್ದರಿಂದ ಟೈಪ್ ರೈಟರ್‌ಗಳಿಗೆ ಬೇಡಿಕೆ ಕುಸಿದು ಅವರ ಆರ್ಥಿಕ ಸ್ಥಿತಿ ಹದಗೆಟ್ಟಿತು. ಹಣಕಾಸಿನ ಕೊರತೆಯಿಂದಾಗಿ ಅದು ಸಾಧ್ಯವಾಗಲಿಲ್ಲ.

ರಾಜ್‌ಕುಮಾರ್ ಹಿರಾನಿ ಪೂನಾ ಫಿಲಂ ಇನ್ಸ್‌ಟಿಟ್ಯೂಟ್‌ನಲ್ಲಿ ಸಂಕಲನದ ಕೋರ್ಸ್ ಮುಗಿಸಿದ ನಂತರ ಮುಂಬೈಗೆ ತೆರಳಿ ಕೆಲ ಕಾಲ ಜಾಹೀರಾತು ಚಿತ್ರಗಳಿಗೆ ಕೆಲಸ ಮಾಡಿಕೊಂಡಿದ್ದರು. ಹೀಗಿದ್ದ ಅವರ ಬದುಕು ತಿರುವು ಪಡೆದದ್ದು ವಿಧು ವಿನೋಧ್ ಚೋಪ್ರಾ ಅವರಿಂದ. 2000 ಇಸವಿಯಲ್ಲಿ ಸಂಕಲನಕಾರರಾಗಿ ಹಿರಾನಿ ಅವರು ವಿಧು ವಿನೋದ್ ಚೋಪ್ರಾ ಅವರ ʼಮಿಷನ್ ಕಾಶ್ಮೀರ್ʼ ಸಿನಿಮಾ ತಂಡ ಸೇರಿದರು. ಮುಂದೆ ಅದೇ ವಿಧು ವಿನೋದ್ ಚೋಪ್ರಾ ಹಿರಾನಿಗೆ ಅವರ ಮೊದಲ ಚಿತ್ರ ನಿರ್ದೇಶಿಸುವ ಅವಕಾಶ ನೀಡಿದರು.

ʼಮುನ್ನಾಭಾಯ್ ಎಂಬಿಬಿಎಸ್ʼ ಹಿರಾನಿಯ ಮೊದಲ ಚಿತ್ರ. ಅವರು ನಾಗಪುರದಲ್ಲಿ ನಾಟಕಗಳನ್ನು ಮಾಡುತ್ತಿದ್ದಾಗ ಅನೇಕ ವೈದ್ಯಕೀಯ ವಿದ್ಯಾರ್ಥಿಗಳು ಪರಿಚಯವಾಗಿದ್ದರು. ಅದನ್ನೇ ಆಧಾರವಾಗಿಟ್ಟುಕೊಂಡು ಕಥೆ ಬರೆದಿದ್ದರು ಹಿರಾನಿ. ಈ ಚಿತ್ರದ ಮೂಲಕ ವೈದ್ಯಕೀಯ ಲೋಕದ ಅಮಾನವೀಯತೆಯನ್ನು ಅನಾವರಣಗೊಳಿಸಿದ್ದರು. ಅವರ ಪ್ರತಿಯೊಂದು ಚಿತ್ರದಲ್ಲೂ ಯಾವುದಾದರೊಂದು ಒಂದು ಸಂದೇಶ ಇರುತ್ತದೆ. ಆದರೆ, ಆ ಸಂದೇಶ ಕಥೆಯ ಒಂದು ಆನುಷಂಗಿಕ ಭಾಗವಾಗಿ ಮಾತ್ರವೇ ಇರುತ್ತದೆ. ʼತ್ರೀ ಈಡಿಯಟ್ಸ್‌ʼನಲ್ಲಿ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದ ಹಿರಾನಿ, ʼಪಿಕೆʼಯಲ್ಲಿ ದೇವರು, ಧರ್ಮ, ನಂಬಿಕೆಗಳನ್ನು ನಿಕಷಕ್ಕೊಡ್ಡಿದ್ದರು. ಅದರಿಂದ ಅನೇಕ ವಿವಾದಗಳಿಗೂ ಒಳಗಾಗಿ, ಜೀವ ಬೆದರಿಕೆಯನ್ನು ಎದುರಿಸಿದರು.

ಡಂಕಿ

ಸಿನಿಮಾ ಎಂದರೆ ಕಥೆ ಹೇಳುವುದು, ಕಥೆ ಹೇಳುವುದು ಎಂದರೆ ರಂಜಿಸುವುದು, ಹಾಗೆಯೇ ವಾಸ್ತವವನ್ನು ತೋರಿಸುವುದು ಎನ್ನುವುದು ಹಿರಾನಿಯ ನಂಬಿಕೆ. ತನ್ನ ಮಾಂತ್ರಿಕ ಸ್ಪರ್ಶದಿಂದ ಸಿನಿಮಾವನ್ನು ರಂಜನೀಯ ಹಾಗೂ ಅರ್ಥಪೂರ್ಣಗೊಳಿಸುವ ಕಲೆ ಸಿದ್ಧಿಸಿಕೊಂಡಿರುವ ಅಪರೂಪದ ನಿರ್ದೇಶಕ ರಾಜ್‌ಕುಮಾರ್ ಹಿರಾನಿ. ಅವರ ಯಾವ ಚಿತ್ರವೂ ಜನರನ್ನು ರಂಜಿಸುವಲ್ಲಿ ವಿಫಲವಾಗಿದ್ದೇ ಇಲ್ಲ. ಕಥೆ, ಚಿತ್ರಕಥೆಗೆ ಅವರು ಹೆಚ್ಚು ಒತ್ತು ಕೊಡುವುದು ಅದಕ್ಕೆ ಕಾರಣ. ಜೊತೆಗೆ ಕಥೆಗೆ ತಕ್ಕ ನಟ, ನಟಿಯರನ್ನು ಆಯ್ಕೆ ಮಾಡಿಕೊಂಡು ತಿಂಗಳಾನುಗಟ್ಟಲೇ ರಿಹರ್ಸಲ್‌ಗಳನ್ನು ಮಾಡುತ್ತಾರೆ, ಮೇಕಪ್ ಟ್ರಯಲ್ಸ್ ಮಾಡುತ್ತಾರೆ. ಚಿತ್ರ ನಿರ್ಮಾಣದ ಪ್ರತಿ ಹಂತವನ್ನೂ ಅತ್ಯಂತ ಜತನದಿಂದ ಮಾಡುವುದರಿಂದಾಗಿಯೇ ಅವರೊಬ್ಬ ಅತ್ಯಂತ ಯಶಸ್ವೀ ನಿರ್ದೇಶಕರಾಗಿರುವುದು.

ಈ ಸುದ್ದಿ ಓದಿದ್ದೀರಾ: ದೇಶದ ಮೊದಲ ದಲಿತ ಪ್ರಧಾನಿಯಾಗಿ ಇತಿಹಾಸ ಸೃಷ್ಟಿಸುವರೇ ಮಲ್ಲಿಕಾರ್ಜುನ ಖರ್ಗೆ?

ಮುಂಬೈನಲ್ಲೊಂದು ಸ್ವಂತ ಮನೆ ಮಾಡಿ, ಅಲ್ಲಿಗೆ ಒಮ್ಮೆ ತನ್ನ ತಂದೆಯನ್ನು ಕರೆದುಕೊಂಡು ಹೋಗಬೇಕೆನ್ನುವುದು ಹಿರಾನಿಯ ಆಸೆಯಾಗಿತ್ತು. ಆದರೆ, ಅವರು ಸ್ವಂತ ಮನೆ ಮಾಡುವ ಹೊತ್ತಿಗೆ ಸುರೇಶ್ ಹಿರಾನಿ ತೀರಿಕೊಂಡಿದ್ದರು. ಹೀಗಾಗಿ ಅವರ ಆಸೆ ಈಡೇರಲೇ ಇಲ್ಲ. ಹಿರಾನಿ ಹೆಂಡತಿ ಮನ್‌ಜೀತ್ ಇಂಡಿಯನ್ ಏರ್‌ಲೈನ್ಸ್‌ನಲ್ಲಿ ಪೈಲಟ್ ಆಗಿದ್ದವರು. ಗಾಂಧಿ ಮತ್ತು ಚಾರ್ಲಿ ಚಾಪ್ಲಿನ್ ಅವರ ಅಭಿಮಾನಿಯಾದ ಹಿರಾನಿಯ ʼಡಂಕಿʼ ಸಿನಿಮಾ ಈಗ ಅವರ ಪರಂಪರೆಯನ್ನು ಮುಂದುವರೆಸುತ್ತಾ, ಜನರನ್ನು ಸೆಳೆಯುತ್ತಿದೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ; ರಾಜ್ಯಗಳ ಪರಿಸ್ಥಿತಿಗೆ ಅನುಗುಣವಾಗಿ ಮೋದಿ ಮತಬೇಟೆ

ಭ್ರಷ್ಟಾಚಾರದ ಬೇಟೆಯಾಡುತ್ತೇನೆ, ಕಪ್ಪುಹಣ ಮರಳಿ ತರುತ್ತೇನೆ ಎಂದು ಪಣ ತೊಟ್ಟಿದ್ದ ಮೋದಿ...

ಮಾದರಿ ನೀತಿ ಸಂಹಿತೆ ಉಲ್ಲಂಘನೆ: ಮೋದಿ, ರಾಹುಲ್ ಗಾಂಧಿಗೆ ಚುನಾವಣಾ ಆಯೋಗದಿಂದ ನೋಟಿಸ್

ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್...

‘ಮೋದಿ ಕಿ ಗ್ಯಾರಂಟಿ’ ಕುರುಹು ಇಲ್ಲದೆ ಕಣ್ಮರೆಯಾದಾಗ ಬಿಜೆಪಿ ಸುಳ್ಳಿನ ಬೆನ್ನತ್ತಿದೆ: ಚಿದಂಬರಂ

'ಮೋದಿ ಕಿ ಗ್ಯಾರಂಟಿ' ಈಗ ಕುರುಹು ಇಲ್ಲದೆ ಕಣ್ಮರೆಯಾಗಿದ್ದು, ಇದರಿಂದಾಗಿ ಆತಂಕಕ್ಕೆ...

ಮೋದಿ ಭಾಷಣ | ರಾಮಮಂದಿರದ ಉಲ್ಲೇಖ, ಸಿಖ್ಖರ ಓಲೈಕೆ; ನೀತಿ ಸಂಹಿತೆ ಉಲ್ಲಂಘನೆಯಲ್ಲ ಎಂದ ಚು. ಆಯೋಗ

ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ರ್‍ಯಾಲಿಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ...