- ರಾಜಸ್ಥಾನದಲ್ಲಿ ಪುಲ್ವಾಮಾ ದಾಳಿ ಕುರಿತ ಪ್ರಶ್ನೆಗಳಿಗೆ ಮಲಿಕ್ ಉತ್ತರ
- ಖಾಸಗಿ ವಾಹಿನಿ ಕಾರ್ಯಕ್ರಮದಲ್ಲಿ ಮಲಿಕ್ ಟೀಕಿಸಿದ್ದ ಅಮಿತ್ ಶಾ
ಪ್ರಧಾನಮಂತ್ರಿ ಹುದ್ದೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗಂಭೀರ ಅಭ್ಯರ್ಥಿಯಾಗಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.
ರಾಜಸ್ಥಾನದ ಸಿಕಾರ್ನಲ್ಲಿ ಕಾರ್ಯಕ್ರಮವೊಂದರ ನಂತರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.
ಅಮಿತ್ ಶಾ ಅವರು ಪುಲ್ವಾಮಾ ದಾಳಿಗೆ ಸಂಬಂಧಿಸಿ ಮಾಡಿರುವ ಆರೋಪಕ್ಕೆ ಸತ್ಯಪಾಲ್ ಮಲಿಕ್ ಅವರು ಪ್ರತಿಕ್ರಿಯಿಸಿ, “ಪ್ರಧಾನಿ ಹುದ್ದೆಗೆ ರಾಜನಾಥ್ ಸಿಂಗ್ ಗಂಭೀರ ಅಭ್ಯರ್ಥಿಯಾಗಿದ್ದಾರೆ. ಅವರ ಹಣೆಬರಹದಲ್ಲಿ ಇದ್ದರೆ ಅವರು ಒಂದು ದಿನ ಪ್ರಧಾನಿ ಆಗಿಯೇ ಆಗುತ್ತಾರೆ” ಎಂದು ತಿಳಿಸಿದರು.
ಪುಲ್ವಾಮಾ ದಾಳಿ ಬಗ್ಗೆ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿ, “ರಾಜ್ಯಪಾಲ ಹುದ್ದೆ ತೊರೆದ ಬಳಿಕ ನಾನು ಪುಲ್ವಾಮಾ ದಾಳಿ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಹೇಳುವುದು ತಪ್ಪು. ಆ ದಿನವೇ ನಾನು ದಾಳಿ ಬಗ್ಗೆ ಹೇಳಿದ್ದೇನೆ” ಎಂದು ಅಮಿತ್ ಶಾಗೆ ಮಲಿಕ್ ತಿರುಗೇಟು ನೀಡಿದ್ದಾರೆ.
“2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ 40 ಮಂದಿ ಯೋಧರು ಹುತಾತ್ಮರಾಗಿದ್ದರು. ಗುಪ್ತಚರ ವೈಫಲ್ಯ ಹಾಗೂ ಯೋಧರ ಸಂಚಾರಕ್ಕೆ ಹೆಲಿಕಾಪ್ಟರ್ ಒದಗಿಸಲು ಕೇಂದ್ರ ಸರ್ಕಾರ ನಿರಾಕರಿಸಿತ್ತು. ಈ ಬಗ್ಗೆ ಮಾತನಾಡಬಾರದು ಎಂದು ನನಗೆ ಪ್ರಧಾನಿ ಮೋದಿ ಹಾಗೂ ಭದ್ರತಾ ಸಲಹೆಗಾರ ಅಜಿತ್ ಧೋಬಾಲ್ ನಿರ್ದೇಶಿಸಿದ್ದರು” ಎಂದು ಮಲಿಕ್ ದೂರಿದ್ದರು.
ಪುಲ್ವಾಮಾ ಘಟನೆ ನಡೆದ ಸಂದರ್ಭದಲ್ಲಿ ಮಲಿಕ್ ಅವರು ಜಮ್ಮು-ಕಾಶ್ಮೀರದ ರಾಜ್ಯಪಾಲರಾಗಿದ್ದರು.
ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಭವಿಷ್ಯವೇನು? ಎಂಬ ಪ್ರಶ್ನೆಗೆ, ”ನಾನು ಅವರಿಗೆ ಶುಭ ಹಾರೈಸುತ್ತೇನೆ. ಆದರೆ ರಾಜಕೀಯ ಮತ್ತು ಚುನಾವಣೆಯಲ್ಲಿ ಏನಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಪ್ರಸ್ತುತ ಪರಿಸ್ಥಿತಿ ಅವರಿಗೆ ಕಷ್ಟಕರವಾಗಿದೆ. ಅವರು ಬೇರೆ ಏನಾದರೂ ಪ್ರಯತ್ನಗಳನ್ನು ಮಾಡಬಹುದು” ಎಂದು ಮಲಿಕ್ ಹೇಳಿದರು.
ಗೌತಮ್ ಅದಾನಿ ಪ್ರಕರಣದಲ್ಲಿ ಪ್ರಧಾನಿ ಮೋದಿಯವರ ಮೌನ ಅವರಿಗೆ ಹಾನಿಯುಂಟು ಮಾಡಲಿದೆ. ಇದರ ಜತೆಗೆ ಪುಲ್ವಾಮಾ ದಾಳಿಯ ಬಗ್ಗೆಯೂ ಪ್ರಧಾನಿ ಮೋದಿ ಮಾತನಾಡಬೇಕು ಎಂದು ಮಲಿಕ್ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಪ್ರಜಾಪ್ರಭುತ್ವ, ಸಂವಿಧಾನದ ಉಳಿವಿಗೆ ವಿಪಕ್ಷಗಳ ಮೈತ್ರಿಗೆ ಬೆಂಬಲ; ಅಖಿಲೇಶ್ ಯಾದವ್
ಈ ವರ್ಷಾಂತ್ಯದಲ್ಲಿ ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ, ಬಿಜೆಪಿಯು ವಸುಂಧರಾ ರಾಜೇ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿದರೆ, ಬಿಜೆಪಿಯ ಗೆಲುವಿನ ಸಾಧ್ಯತೆಗಳು ಹೆಚ್ಚಾಗುತ್ತವೆ ಎಂದು ಮಲಿಕ್ ಹೇಳಿದ್ದಾರೆ.
“ಮುಚ್ಚಿ ಹಾಕುವಂತಹದ್ದು ಬಿಜೆಪಿ ಏನೂ ಮಾಡಿಲ್ಲ. ಯಾರಾದರೂ ನಮ್ಮ ಜತೆ ಸಂಬಂಧ ಕಡಿದುಕೊಂಡ ಬಳಿಕ ಆರೋಪ ಮಾಡುತ್ತಿದ್ದರೆ, ಜನ ಹಾಗೂ ಮಾಧ್ಯಮ ಅದರ ಬಗ್ಗೆ ಯೋಚಿಸಬೇಕು” ಎಂದು ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಅಮಿತ್ ಶಾ ಹೇಳಿದ್ದರು.
ಪುಲ್ವಾಮ ದಾಳಿ ನಡೆದಾಗ ಮತ್ತು 370ನೇ ವಿಧಿಯನ್ನು ತೆರವುಗೊಳಿಸಿದ ಸಂದರ್ಭದಲ್ಲಿ ಮಲಿಕ್ ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿದ್ದರು. ನಂತರ ಗೋವಾದ ರಾಜ್ಯಪಾಲರಾಗಿದ್ದ ಅವರು, ಆನಂತರ 2022ರವರೆಗೆ ಮೇಘಾಲಯದ ರಾಜ್ಯಪಾಲರಾಗಿದ್ದರು.