ಚರಂಡಿ ನೈರ್ಮಲ್ಯ, ಸ್ವಚ್ಛತೆ ಹಾಗೂ ನೀರು ಸರಬರಾಜು ಉಪಕರಣ ಖರೀದಿ ಹೆಸರಲ್ಲಿ ಸುಮಾರು 80 ಲಕ್ಷ ರೂಪಾಯಿ ದುರುಪಯೋಗವಾಗಿದೆ. ಗ್ರಾಮ ಪಂಚಾಯತಿ ಪಿಡಿಒ ಈ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರ್ಟಿಐ ಕಾರ್ಯಕರ್ತ ಸಿ. ಮಹದೇವಯ್ಯ ಆರೋಪಿಸಿದ್ದಾರೆ.
ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. ಮಾಗಡಿ ತಾಲೂಕಿನ ಅಜ್ಜನಹಳ್ಳಿ ಗ್ರಾಮ ಪಂಚಾಯತಿ ಪಿಡಿಒ ಗಂಗಯ್ಯ ವಿರುದ್ಧ ಹಣ ದುರ್ಬಳಕೆ ಆರೋಪ ಮಾಡಿದ್ದಾರೆ.
“ಅಜ್ಜನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಚರಂಡಿಗಳನ್ನು ಪಂಚಾಯತಿ ನೌಕರರೇ ಸ್ವಚ್ಛತೆ ಮಾಡಿದ್ದಾರೆ. ಆದರೂ, ಗುತ್ತಿಗೆದಾರರಿಂದ ಸ್ವಚ್ಛತೆ ಮಾಡಿಸಲಾಗಿದೆ ಎಂದು ನಕಲಿ ಬಿಲ್ ತಯಾರಿಸಿದ್ದಾರೆ. ಅನಕ್ಷರಸ್ಥ ಅದ್ಯಕ್ಷರಿಂದ ಬಿಲ್ಗೆ ಸಹಿ ಪಡೆದು ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ” ಎಂದು ಆರೋಪಿಸಿದ್ದಾರೆ.
“ಚರಂಡಿ ಸ್ವಚ್ಛತೆ ಕಾಮಗಾರಿಗಳನ್ನು ಮಾಡಿಸಿರುವುದಾಗಿ ವೆಂಕಟೇಶ್ ಮೂರ್ತಿ ಮತ್ತು ಸುರೇಶ್ ಟಿ.ಜಿ ಎಂಬ ಗುತ್ತಿಗೆದಾರರ ಹೆಸರಿನಲ್ಲಿ ನಕಲಿ ಬಿಲ್ಗಳನ್ನು ಪಿಡಿಒ ತಯಾರಿಸಿದ್ದಾರೆ. ಕಿರಿಯ ಅಭಿಯಂತರರು ಮನರೇಗಾ ಯೋಜನೆಯಡಿ ಮಾಡಿಸಿರುವ ಅಭಿವೃದ್ದಿ ಕಾಮಗಾರಿಗಳಿಗೆ ಎಂ.ಬಿ ಪುಸ್ತಕದಲ್ಲಿ ಬಿಲ್ ಬರೆದಿದ್ದಾರೆ. ಆದರೆ, ದಿನಾಂಕ ಬರೆದಿಲ್ಲ. ಹಣ ಡ್ರಾ ಮಾಡಿದ ಚೆಕ್ ನೀಡಿದ ದಿನಾಂಕ ನಮೂದಿಸಿಲ್ಲ” ಎಂದು ದೂರಿದ್ದಾರೆ.
“ಪಿಡಿಒ ಗಂಗಯ್ಯ ಇದೇ ವರ್ಷ ಡಿಸೆಂಬರ್ನಲ್ಲಿ ನಿವೃತ್ತಿ ಹೊಂದಲಿದ್ದಾರೆ. ಆದರೆ, ಅವರು ಈಗಲೇ ರಜೆ ಮೇಲೆ ತೆರಳಿದ್ದಾರೆ. ಹಣ ದುರ್ಬಳಕೆಯ ಕುರಿತು ತಾಲೂಕು ಪಂಚಾಯಿತಿ ಇಒ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅವರ ಗಮನಕ್ಕೆ ತಂದಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಪಿಡಿಒ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
ತಮ್ಮ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಪಿಡಿಒ ಗಂಗಯ್ಯ, “ಪಂಚಾಯತಿ ವ್ಯಾಪ್ತಿಯಲ್ಲಿ ಚರಂಡಿ ಸ್ವಚ್ಚತಾ ಕಾಮಗಾರಿಗಳನ್ನು ಪಂಚಾಯತ್ ರಾಜ್ ಅಧಿನಿಯಮದಂತೆ ನಡೆಸಲಾಗಿದೆ. ಕಾಮಗಾರಿಗಳಲ್ಲಿ ಯಾವುದೇ ಅವ್ಯವಹಾರ ನಡೆಸಿಲ್ಲ. ಮಹದೇವಯ್ಯ ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಯಾವುದೇ ರೀತಿಯ ತನಿಖೆಗೂ ನಾನು ಸಿದ್ದನಿದ್ದೇನೆ” ಎಂದು ಗಂಗಯ್ಯ ತಿಳಿಸಿದ್ದಾರೆ.