“ಕುಮಾರಸ್ವಾಮಿ ಅವರು ಯಾವ ರೇಟು, ಎಂತಹ ರೇಟು ಎಂದು ಹೇಳಬೇಕು. ಕುಮಾರಣ್ಣ, ರೇಟ್ ಫಿಕ್ಸ್ ಮಾಡುವ ಚಾಳಿ ನಿನಗೆ ಇರಬೇಕು. ಅದನ್ನು ಬೇರೆಯವರ ಮೇಲೆ ಹಾಕುತ್ತಿದ್ದೀರಾ. ನಾವು ರಾಜ್ಯದ ಮಹಿಳೆಯರು ಬದುಕು ಕಟ್ಟಿಕೊಳ್ಳಲು ಗ್ಯಾರಂಟಿ ನೀಡಿದ್ದೇವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.
“ಮಹಿಳೆಯರಿಗೆ ಡಿ.ಕೆ.ಶಿವಕುಮಾರ್ ರೇಟ್ ಫಿಕ್ಸ್ ಮಾಡುತ್ತಾರೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ಜನರ ಜೇಬು ಪಿಕ್ ಪಾಕೇಟ್ ಮಾಡುತ್ತಿದೆ” ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಅವರ ಆರೋಪಕ್ಕೆ ಡಿಸಿಎಂ ತಿರುಗೇಟು ನೀಡಿದ್ದಾರೆ.
ಏಕವಚನದಲ್ಲೇ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಡಿಸಿಎಂ, “ಅವನಿಗೆ ಪಿಕ್ ಪಾಕೆಟ್ ಮಾಡಿ ರೂಢಿ ಅಲ್ಲವೇ? ಹೆದರಿಸಿ, ಬೆದರಿಸಿ ಬ್ಲಾಕ್ ಮೇಲ್ ಮಾಡುವುದು, ಹಿಟ್ ಅಂಡ್ ರನ್ ಮಾಡುವುದು ಅವನ ಕೆಲಸ. ಮಹಿಳೆಯರು ತಿರುಗಿ ಬಿದ್ದಿರುವ ಕಾರಣ ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ, ನನ್ನನ್ನು ಟೀಕಿಸುತ್ತಿದ್ದಾನೆ. ಹೆದರಿಕೊಂಡು ಪಕ್ಕದ ಜಿಲ್ಲೆಗೆ ಹೋಗಿರುವ ಮಿಸ್ಟರ್ ಕುಮಾರಸ್ವಾಮಿ, ನೀನು ಯಾವುದೇ ಕಾರಣಕ್ಕೂ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದಿಲ್ಲ” ಎಂದರು.
“ದೇವೇಗೌಡರನ್ನು ಪ್ರಧಾನಿ ಸ್ಥಾನದಲ್ಲಿ ಕೂರಿಸಿದ್ದೇ ಕಾಂಗ್ರೆಸ್. ಅವರ ಎಲ್ಲ ಆರೋಪಗಳಿಗೆ ಉತ್ತರಿಸುತ್ತೇನೆ. ಅವರಿಗೆ ಸದನಕ್ಕೆ ಬರಲು ಹೇಳಿ” ಎಂದು ಡಿ.ಕೆ. ಶಿವಕುಮಾರ್ ಸವಾಲೆಸೆದಿದ್ದಾರೆ.
“ಯಾವುದೇ ಆರೋಪಕ್ಕೂ ದಾಖಲೆ ಇರಬೇಕಲ್ಲವೇ? ಹೀಗಾಗಿ ನನ್ನ ಆಸ್ತಿ, ಅವರ ಆಸ್ತಿ ಬಗ್ಗೆ ಸದನದಲ್ಲಿ ಚರ್ಚಿಸಲು ನಾನು ಆಹ್ವಾನ ನೀಡಿದ್ದೆ. ಆತ ಸದನಕ್ಕೇ ಬರಲಿಲ್ಲ. ಅವರ ಕುಟುಂಬದ ಎಲ್ಲ ಸದಸ್ಯರ ಆಸ್ತಿ ಬೆಂಗಳೂರು ಸುತ್ತಮುತ್ತ ಎಷ್ಟಿತ್ತು ಎಂದು ನಾನು ದಾಖಲೆಗಳನ್ನು ತರುತ್ತೇನೆ. ನಾನು ಕಲ್ಲು ಹೊಡೆದಿದ್ದೇನೆಯೇ, ಲೂಟಿ ಮಾಡಿದ್ದೇನೆಯೇ ಎಂಬುದು ಸದನದಲ್ಲಿ ತೀರ್ಮಾನವಾಗಲಿ. ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡುವುದರಲ್ಲಿ ಪ್ರಸಿದ್ಧಿ” ಎಂದರು.
ದುಡ್ಡುಕೊಟ್ಟು ಹೆಣ್ಣುಮಕ್ಕಳನ್ನು ಪ್ರತಿಭಟನೆಗೆ ಕರೆದುಕೊಂಡು ಬರಲಾಗಿದೆ ಎನ್ನುವ ಆರೋಪದ ಬಗ್ಗೆ ಕೇಳಿದಾಗ, “ಮಹಿಳೆಯರಿಗೆ ಒಳ್ಳೆಯದಾಗಲಿ ಎಂದು ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದೇವೆ. ನಮ್ಮ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದರೆ ಏನರ್ಥ? ಇದು ರಾಜ್ಯದ ಮಹಿಳೆಯರ ಸ್ವಾಭಿಮಾನದ ಪ್ರಶ್ನೆ. ಕುಮಾರಸ್ವಾಮಿ ಅವರ ಹೇಳಿಕೆ ರಾಜ್ಯಕ್ಕೆ ಕಪ್ಪುಚುಕ್ಕೆ. ಈ ಹೇಳಿಕೆಯ ವಿರುದ್ಧ ಪಕ್ಷ ಬೇಧ ಮರೆತು ಎಲ್ಲ ಮಹಿಳಾ ಸಂಘಟನೆಗಳು ಹೋರಾಟ ಮಾಡಬೇಕು. ಹಗುರವಾಗಿ ಮಾತನಾಡುವುದರ ಬಗ್ಗೆ ಪ್ರತಿರೋಧ ಒಡ್ಡಬೇಕು. ಎನ್ ಡಿಎ ಮೈತ್ರಿಗೆ ಬುದ್ಧಿ ಕಲಿಸಬೇಕು” ಎಂದರು.
“ಕುಮಾರಸ್ವಾಮಿ ಅವರ ಕ್ಷಮಾಪಣೆ, ವಿಷಾದ ಯಾವುದೂ ಬೇಕಾಗಿಲ್ಲ. ಕೊಲೆ ಮಾಡಿ, ಹಲ್ಲೆ ನಡೆಸಿ ಕ್ಷಮಾಪಣೆ ಕೇಳಿದರೆ ಆಗುತ್ತದೆಯೇ? ಬಿಜೆಪಿ ಮತ್ತು ಜೆಡಿಎಸ್ ಮಹಿಳಾ ಕಾರ್ಯಕರ್ತರಿಗೆ ಗ್ಯಾರಂಟಿ ಯೋಜನೆ ಲಾಭ ತಿರಸ್ಕರಿಸಲು ಕರೆ ನೀಡಲಿ. ಅವರಿಂದ ಕೇವಲ ಐದು ಜನರ ಕೈಯಲ್ಲಿ ಗ್ಯಾರಂಟಿಗಳನ್ನು ಹಿಂಪಡೆಯುವಂತೆ ಮಾಡಿಸಲು ಆಗಲ್ಲ” ಎಂದರು.