ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನೂರಾರು ನಿರಾಶ್ರಿತರು ಬದುಕಲು ಸೂರಿಲ್ಲದೆ, ಸ್ವಂತ ಮನೆಯಿಲ್ಲದೆ ನಾನಾ ಸಮಸ್ಯೆಗಳೊಂದಿಗೆ ಕಷ್ಟದ ಜೀವನ ದೂಡುತ್ತಿದ್ದಾರೆ. ಸರ್ಕಾರ ತಮಗೆ ನಿವೇಶನ ನೀಡಿದರೆ, ಬದುಕು ಕಟ್ಟಿಕೊಂಡು, ಜೀವನ ನಡೆಸುತ್ತೇವೆಂದು ಎದುರು ನೋಡುತ್ತಿದ್ದಾರೆ. ಜಿಲ್ಲೆಯ ಆಲ್ದೂರು ಹೋಬಳಿಯ ಬೆಳಗೊಡು ಗ್ರಾಮದಲ್ಲಿ ವಾಸಿಸುತ್ತಿರುವ ನಿರಾಶ್ರಿತರ ಬದುಕು ಅಸ್ತವ್ಯಸ್ತವಾಗಿದ್ದು, ಹೇಳತೀರಲಾಗಿದೆ.
ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಸುಮಾರು 45ಕ್ಕಿಂತ ಹೆಚ್ಚು ಕುಟುಂಬಗಳು ಹಲವಾರು ದಶಕಗಳಿಂದ ವಾಸುತ್ತಿವೆ. ಆ ಕುಟುಂಬಗಳಿಗೆ ಇದೂವರೆಗೆ ಯಾವುದೇ ಮೂಲಭೂತ ಸೌಲಭ್ಯಗಳು ದೊರೆತಿಲ್ಲ. ಗ್ರಾಮದ ಸರ್ವೆ ನಂ.197ರಲ್ಲಿರುವ ಕಂದಾಯ ಭೂಮಿಯಲ್ಲಿ ತಮಗೆ ನಿವೇಶನ ನೀಡಬೇಕೆಂದು 1990ರಿಂದಲೂ ಈ ಕುಟಂಬಗಳು ಅರ್ಜಿ ಸಲ್ಲಿಸುತ್ತಿವೆ. ಆದರೆ, ಅವರ ಅಳಲಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.
1993-94ರಲ್ಲಿ ಈ ನಿರಾಶ್ರಿತರಿಗೆ ಮನೆ, ಭೂಮಿ ಒದಗಿಸಲು 5 ಎಕ್ಕರೆ ಜಾಗವನ್ನು ಕೊಡಬೇಕೆಂದು ಅಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿತ್ತು. ಆದರೂ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ಧೋರಣೆಯಿಂದಾಗಿ ಅವರಿಗೆ ನಿವೇಶನದ ಹಕ್ಕುಪತ್ರ ದೊರೆತಿಲ್ಲ. ಕೆಲವರಿಗೆ ಮಾತ್ರ ಹಕ್ಕುಪತ್ರ ನೀಡಿದ್ದಾರೆ.
ಗ್ರಾಮಕ್ಕೆ ಸರಿಯಾದ ರಸ್ತೆಯೂ ಇಲ್ಲ. ಸುಮಾರು 7-8 ಕಿ.ಮೀ ದೂರದಲ್ಲಿರುವ ಪಟ್ಟಣಕ್ಕೆ ಇಲ್ಲಿನ ಮಕ್ಕಳು ಹೋಗಬೇಕು. ಅದರೆ, ರಸ್ತೆ ಸರಿಯಿಲ್ಲದ ಕಾರಣ, ಸಾರಿಗೆ ವ್ಯವಸ್ಥೆಯೂ ಇಲ್ಲ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.
ಮಳೆಗಾಲದಲ್ಲಿ ಗುಡಿಸಲುಗಳು ಜಲಾವೃತವಾಗುತ್ತವೆ. ಮಣ್ಣು ಕುಸಿತದಿಂದ ಮನೆಗಳೂ ಕುಸಿದೋಗಿವೆ. ಜೀವನ ಸಾಗಿಸುವುದೇ ಕಷ್ಟಕರವಾಗಿದೆ ಎಂದು ಗ್ರಾಮದ ನಿವಾಸಿ ಸಂದೀಪ್ ಹೇಳಿದ್ದಾರೆ.
ಈದಿನ.ಕಾಮ್ ಜೊತೆ ಮಾಡಿತನಾಡಿದ ಅವರು, “ಸೌದೆ ತರಲು ಕಾಡಿಗೆ ಹೋಗಬೇಕು. ಹಳ್ಳ, ಹೊಂಡಗಳನ್ನು ದಾಟಿ ಹೋಗಬೇಕು. ತಂದ ಸೌದೆಯಲ್ಲೆ ಅಡುಗೆ ಮಾಡಿಕೊಂಡು ತಿನ್ನಬೇಕು. ನಮಗೆ ಮನೆ ಇಲ್ಲ. ಜಾಗ ಇಲ್ಲ. ಬೀದಿ ಪಾಲಾಗಿದ್ದೇವೆ. ಚುನಾವಣೆ ಇದ್ದಾಗ ಮಾತ್ರ ಜನಪ್ರತಿನಿಧಿಗಳು ಬರ್ತಾರೆ, ಆಶ್ವಾಸನೆ ಕೊಟ್ಟು ಹೋಗುತ್ತಾರೆ. ಚುನಾವಣೆ ಮುಗಿದ ಬಳಿಕ, ನಮ್ಮೆಡೆಗೆ ಯಾರೂ ತಿರುಗಿನೋಡುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸರಿಯಾದ ಬಸ್ ಸೌಲಭ್ಯವಿಲ್ಲದೆ ಗ್ರಾಮದ ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಸರಿಯಾದ ಸಮಯಕ್ಕೆ ಪರೀಕ್ಷೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಪರೀಕ್ಷೆ ಬರೆಯಲಾಗದೆ ನಮ್ಮ ಭವಿಷ್ಯ ಹಾಳಾಗಿದೆ. ಅದೆಷ್ಟೊ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ” ಎಂದು ಗ್ರಾಮದ ಪೂರ್ಣೆಶ್ ತಿಳಿಸಿದ್ದಾರೆ.
“ಪಟ್ಟಣಕ್ಕೆ ಹೋಗಬೇಕೆಂದರೆ ಮೂರ್ನಾಲ್ಕು ಕಿ.ಮೀ ಕಾಡಿನ ಅಂಚಿನಲ್ಲಿ ನಡೆದುಕೊಂಡು ಹೋಗಬೇಕು. ಕಾಡಾನೆ, ಹಂದಿ, ಕಾಡುಕೋಣ, ಚಿರತೆ, ಹುಲಿಗಳ ದಾಳಿಯ ಆತಂಕದಲ್ಲೇ ನಡೆದಾಡಬೇಕು. ಪುಟ್ಟ ಮಕ್ಕಳು ಜೀವ ಭಯದಲ್ಲೇ ಶಾಲೆಗೆ ಹೋಗುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
“ವಯಸ್ಸಾದ ವೃದ್ಧರು ಆಸ್ಪತ್ರೆಗೆ ಹೋಗಲು ಯಾವುದೇ ವಾಹನ ಬರುವುದಿಲ್ಲ. ರಸ್ತೆ ಸರಿಯಿಲ್ಲವೆಂದು ಗ್ರಾಮದತ್ತ ವಾಹನಗಳು ಸುಳಿಯುವುದಿಲ್ಲ. ಆಸ್ಪತ್ರೆಗೆ ಗಾಡಿ ತರಿಸಿದ್ರೆ ಎಸ್ಟೇಟ್ ಮಾಲೀಕರು ಬಿಡುತ್ತಿಲ್ಲ. ಕಳೆದ ವರ್ಷ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ದೊರೆಯಿತು. ಆದರೆ, ವಿದ್ಯುತ್ ಸೇವೆಗೆ ಎಸ್ಟೇಟ್ ಮಾಲೀಕರು ಬಿಟ್ಟಿಲ್ಲ. ಈಗ ಕತ್ತಲಲ್ಲೇ ಬದುಕುತ್ತಿದ್ದೇವೆ. ಆದಷ್ಟು ಬೇಗ ಸರ್ಕಾರದ ಆದೇಶದಂತೆ ಜಾಗ ಮಂಜೂರು ಮಾಡಿ, ಹಕ್ಕುಪತ್ರ ಕೊಡಬೇಕು. ಮೂಲಸೌಕರ್ಯ ಒದಗಿಸಬೇಕು” ಎಂದು ಗ್ರಾಮದ ಮುದ್ದಣ್ಣ ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣ: ಸಿಬಿಐ ಕೋರ್ಟ್ ನಿರ್ದೋಷಿ ಎಂದಿದ್ದ ಸಂತೋಷ್ ರಾವ್ಗೆ ಹೈಕೋರ್ಟ್ ನೋಟಿಸ್
“ಹಿಂದೆ ಆಶ್ರಯ ನಿವೇಶನಕ್ಕೆಂದು ಕಾಯ್ದಿರಿಸಿದ ಜಾಗವನ್ನು ಸಾವಿರಾರು ಎಕರೆ ಜಮೀನು ಹೊಂದಿರುವ ಎಸ್ಟೇಟ್ ಭೂಮಾಲೀಕ ಸ್ವರೂಪ ಅರವಿಂದ ಎಂಬವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಆ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ಆ ಭೂಮಿ ತನ್ನದೆಂದು ಹೇಳುತ್ತಿದ್ದಾರೆ. ಪ್ರಶ್ನಿಸಿದರ ವಿರುದ್ಧ ಜಾತಿ ದೌರ್ಜನ್ಯದ ಪ್ರಕರಣ ದಾಖಲಿಸಿ ಅಮಾಯಕರಿಗೆ ತೊಂದರೆ ಕೊಡುತ್ತಿದ್ದಾರೆ” ಎಂದು ದೂರಿದ್ದಾರೆ.
“ಇತ್ತೀಚಿಗೆ ನಿವೇಶನಕ್ಕಾಗಿ ಸರ್ವೆ ನಂ.491ರಲ್ಲಿ ಭೂಮಿ ಗುರುತಿಸಲಾಗಿದೆ. ಆದರೆ, ಆ ಭೂಮಿ ಮನೆ ಕಟ್ಟಲು ಯೋಗ್ಯವಾಗಿಲ್ಲ. ಹೀಗಾಗಿ, ಅದನ್ನು ರದ್ದುಗೊಳಿಸಿ, ಭೂಮಾಲೀಕರು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಾಗವನ್ನು ಹಿಂಪಡೆದು ಆ ಭೂಮಿಯಲ್ಲಿ ನಿವೇಶನ ಹಂಚಿಕೆ ಮಾಡಬೇಕು” ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.