ಯಾವುದೇ ಕ್ಷೇತ್ರದಲ್ಲಿ ಸಂಶೋಧನೆ ನಡೆದರೂ ಅದೊಂದು ಬೌದ್ಧಿಕ ಪ್ರಕ್ರಿಯೆಯಾಗಿದೆ. ಸಂಶೋಧನಾ ಅಧ್ಯಯನಗಳು ಲೋಕದ ಸಂಗತಿಗಳ ಕುರಿತು ಸೈದ್ಧಾಂತಿಕ, ತಾತ್ವಿಕ ಮತ್ತು ಪ್ರಾಯೋಗಿಕ ಮುಖಾಮುಖಿಯಾಗಿವೆ. ಮಾನವಿಕ ವಲಯದ ಸಂಶೋಧನಾ ವೈಧಾನಿಕತೆಯು ಒಂದು ತಾತ್ವಿಕ ನಿಲುವುವಾಗಿದೆ ಎಂದು ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಹೇಳಿದರು.
ಬೀದರ್ ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಐಕ್ಯೂಎಸಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ‘ಸಂಶೋಧನಾ ವೈಧಾನಿಕತೆ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, “ಸಂಶೋಧನೆಯಲ್ಲಿ ಬಳಸುವ ತಾತ್ವಿಕ ಪರಿಕರ, ದೃಷ್ಟಿಕೋನ ಸಂಶೋಧಕನ ಬದುಕಿನ ಕ್ರಮವೂ ಆಗಿರುತ್ತದೆ.
ಒಂದು ಕಾಲದಲ್ಲಿ ಹುಟ್ಟಿದ ಸಿದ್ಧಾಂತಗಳು, ವಾದಗಳು ಕೃತಿಯನ್ನು ರೂಪಿಸುತ್ತವೆ. ಸಂಶೋಧನೆಗಳಿಗೆ ನೋಟಕ್ರಮವೂ ಆಗುತ್ತವೆ” ಎಂದರು.
“ಮಾರ್ಕ್ಸವಾದ, ಆಧುನಿಕೋತ್ತರ ವಾದ, ಸ್ತ್ರೀವಾದ, ಗಾಂಧಿವಾದ, ಅಂಬೇಡ್ಕರ್ ವಾದ, ಲೋಹಿಯಾ ಚಿಂತನೆಗಳು ಇಂಥ ಎಲ್ಲ ತಾತ್ವಿಕತೆಯ ನೋಟಗಳಲ್ಲಿ ಸಮಾಜ, ಸಂಸ್ಕೃತಿಯ ಸಂಶೋಧನೆಗಳಲ್ಲಿ ವೈಧಾನಿಕತೆಯ ಪರಿಕರವಾಗಿ ಬಳಸಲಾಗುತ್ತದೆ. ಕೃತಿಯೊಂದರ ಆಳ ಹಾಗೂ ನಿಕಟ ಓದು ಕೃತಿಯ ಮಿತಿ ಹಾಗೂ ಶಕ್ತಿ ಜೊತೆಗೆ ಕೃತಿಯ ಹಲವು ಆಯಾಮಗಳು ತಿಳಿಸುತ್ತದೆ. ಸಿನೆಮಾ, ಧಾರಾವಾಹಿ, ಮಾಧ್ಯಮ, ಜಾಹೀರಾತುಗಳು ಸಾಂಸ್ಕೃತಿಕ ಅಧ್ಯಯನಕ್ಕೆ ಪಠ್ಯಗಳಾಗಿವೆ” ಎಂದು ಹೇಳಿದರು.
“ಪ್ರಾಮಾಣಿಕ ಸಂಶೋಧಕನ ಶ್ರಮ ಮತ್ತು ಅಧ್ಯಯನದ ಫಲಿತ ಎಂದಿಗೂ ಸಮಾಜಮುಖಿಯಾಗಿರುತ್ತವೆ. ಒಂದು ಗಂಭೀರವಾದ ಅಧ್ಯಯನವು ಶಕ್ತಿ ರಾಜಕಾರಣ, ಅನುಕಂಪ ರಾಜಕಾರಣ, ಲಿಂಗ ರಾಜಕಾರಣದ ಬಹು ಆಯಾಮಗಳನ್ನು ಕಾಣಿಸುತ್ತದೆ. ಶ್ರೇಷ್ಠ ಬರಹಗಾರ ತಾನೂ ಮಾಡಿದ ಸಂಶೋಧನೆಯಾಗಲಿ, ಬರೆದ ಲೇಖನವಾಗಲಿ, ಬದುಕುವ ಕ್ರಮದಲ್ಲಾಗಲಿ ತಾನು ಒಪ್ಪಿದ ತಾತ್ವಿಕತೆ, ಅಥವಾ ದೃಷ್ಟಿಕೋನವೇ ಬದುಕಿನ ಮತ್ತು ಅವನ ಅಧ್ಯಯನದ ವೈಧಾನಿಕತೆಯಾಗಿರುತ್ತದೆ. ಸಂಗ್ರಹ, ಸಂಪಾದನೆ, ವಿಶ್ಲೇಷಣೆ, ವಿವರಣೆಗಳು ದಾಟಿ ಈ ಕಾಲಘಟ್ಟದಲ್ಲಿ ಸಾಹಿತ್ಯ ಸಂಶೋಧನೆ ಸಾಂಸ್ಕೃತಿಕ ಸಂಶೋಧನೆಯಾಗಿದೆ” ಎಂದರು.
ಐಕ್ಯೂಎಸಿ ಸಂಯೋಜಕ ಡಾ. ಶ್ರೀಕಾಂತ ಪಾಟೀಲ ಅವರು ಮಾತನಾಡಿ, “ಹುಡುಕಾಟ ಮನುಷ್ಯನ ಮೂಲ ಜಾಯಮಾನ. ಆ ಹುಡುಕುವ ಪ್ರಕ್ರಿಯೆಗೆ ಜ್ಞಾನ ಶಿಸ್ತು ಬೆರೆಸಿದರೆ ಸಂಶೋಧನೆಯಾಗುತ್ತದೆ. ಸಂಶೋಧನೆಗಳಿಂದ ನಮ್ಮ ಸಮಾಜ ಮತ್ತು ದೇಶದ ಪ್ರಗತಿಯಾಗುತ್ತದೆ. ಯುವಕರು ಹೆಚ್ಚಿನ ಪ್ರಮಾಣದಲ್ಲಿ ಸಂಶೋಧನಾ ಕ್ಷೇತ್ರದಲ್ಲಿ ತೊಡಗಬೇಕು.ಅದು ಅವರ ಅಧ್ಯಯನದಲ್ಲಿ, ಬದುಕಿನಲ್ಲಿ ಒಂದು ಶಿಸ್ತು ಮೂಡಿಸುತ್ತದೆ” ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜು ಪ್ರಾಚಾರ್ಯ ಪ್ರೊ. ಮನೋಜಕುಮಾರ ಮಾತನಾಡಿ, “ಒಂದು ದೇಶದ ಗತಿಶೀಲತೆಯಲ್ಲಿ ಸಂಶೋಧನೆಗಳ ಪಾತ್ರ ದೊಡ್ಡದು. ಸಂಶೋಧನೆಗಾಗಿ ನಮ್ಮ ಸುತ್ತಲು ಹಲವು ಆಕರಗಳಿವೆ. ಹೆಚ್ಚಿನ ಸಂಗತಿಗಳನ್ನು ಸಂಶೋಧನಾ ವ್ಯಾಪ್ತಿಗೆ ತರಬೇಕು. ಈ ತರಹದ ವಿಚಾರ ಸಂಕಿರಣದಿಂದ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಬೆಳೆಯಲು ಸಾಧ್ಯ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಶೂದ್ರ ಸ್ವಾಮಿ ಕೇಸರಿ ಸ್ವಾಮಿಯಾಗುವುದು ತಪ್ಪೇ?
ಕಾಲೇಜಿನ ಉಪನ್ಯಾಸಕರಾದ ಡಾ. ವಿದ್ಯಾ ಪಾಟೀಲ, ಡಾ. ಮನೋಹರ ಹಾಗೂ ಬಸವಕಲ್ಯಾಣದ ಡಾ. ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ, ಪತ್ರಕರ್ತ ಮಾರುತಿ ಸೋನಾರ್ ಸೇರಿದಂತೆ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ಡಾ. ಉಮಾಕಾಂತ ನಿರೂಪಿಸಿದರು. ಪ್ರೊ. ವಿಜಯಲಕ್ಷ್ಮಿ ಸ್ವಾಗತಿಸಿದರು. ಪ್ರೊ ಶ್ರೀನಿವಾಸ ರೆಡ್ಡಿ ವಂದಿಸಿದರು.