45 ದಿನಗಳಿಗಿಂತ ಹೆಚ್ಚು ಅವಧಿಯ ತಾತ್ಕಾಲಿಕ ಗುತ್ತಿಗೆಗಳಿಗೂ ಮೀಸಲಾತಿ ಅನ್ವಯವಾಗುತ್ತದೆ. ಈ ಸಂಬಂಧ ಈಗಾಗಲೇ ಎಲ್ಲ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಆದೇಶ ಹೊರಡಿಸಿದ್ದು, ಜಾರಿಗೊಳಿಸಲು ತಿಳಿಸಿರುವುದಾಗಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿದೆ.
ಸರ್ಕಾರಿ ಗುತ್ತಿಗೆ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೀಸಲಾತಿ ಅನುಷ್ಠಾನದ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ವೇಳೆ ಕೇಂದ್ರ ಸರ್ಕಾರವು ಈ ರೀತಿಯ ಹೇಳಿಕೊಂಡಿದೆ.
45 ದಿನ ಅಥವಾ ಅದಕ್ಕಿಂತ ಹೆಚ್ಚಿನ ಸೇವೆ ಇರುವ ತಾತ್ಕಾಲಿಕ ಗುತ್ತಿಗೆ ಹುದ್ದೆ ಇದ್ದರೆ ಅದಕ್ಕೂ ಮೀಸಲಾತಿ ಕೋಟಾ ಅನ್ವಯವಾಗುತ್ತದೆ ಎಂಬ ನೀತಿಯನ್ನು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರವು ತಿಳಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ಅದು ಸರಿಯಾಗಿ ಅನುಷ್ಠಾನವಾಗುವಂತೆ ಖಚಿತಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದೆ.
केंद्र सरकार की बेहतरीन पहल। SC, ST, OBC की ये माँग 1990 के दशक से चली आ रही थी, जब नरसिम्हा राव सरकार ने उदारीकरण के नाम बड़े पैमाने पर निजीकरण और ठेके पर भर्तियाँ शुरू की थी।
अब करना सिर्फ़ ये कि सरकारी अफ़सरों की गर्दन पकड़कर कोटा लागू करवा लेना है।
अब पॉलिसी बन गई है कि… pic.twitter.com/zXj5qTGSaA
— Dilip Mandal (@Profdilipmandal) October 6, 2023
ಸಾಮಾಜಿಕ ಕಾರ್ಯಕರ್ತ ಇಮ್ರಾನ್ ಅಹ್ಮದ್ ಎಂಬುವವರು ಸುಪ್ರೀಂ ಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ದೂರು ಸಲ್ಲಿಸಿದ್ದರು. ಇವರ ಪರವಾಗಿ ಹಿರಿಯ ವಕೀಲ ಸಂಜಯ್ ಹೆಗ್ಡೆ ವಾದಿಸಿದರಲ್ಲದೇ, ‘ವಿವಿಧ ಸರ್ಕಾರಿ ಇಲಾಖೆಗಳು, ಡೀಮ್ಡ್ ವಿಶ್ವವಿದ್ಯಾಲಯಗಳು ಇತ್ಯಾದಿಗಳಲ್ಲಿನ ಹೊರಗುತ್ತಿಗೆ/ಗುತ್ತಿಗೆ ಹುದ್ದೆಗಳನ್ನು ಮೀಸಲಾತಿ ನೀತಿಯಡಿ ಭರ್ತಿ ಮಾಡುತ್ತಿಲ್ಲ. ಅಲ್ಲದೇ, ಅಧಿಕೃತ ಮಾಹಿತಿಯ ಪ್ರಕಾರ, ಸರ್ಕಾರಿ ವಲಯದಲ್ಲಿ ಗುತ್ತಿಗೆ-ಹೊರಗುತ್ತಿಗೆ (ತಾತ್ಕಾಲಿಕ) ಉದ್ಯೋಗಿಗಳಿಗೆ ಸಂಬಂಧಿಸಿದಂತೆ ವರ್ಗವಾರು ಅಂಕಿ-ಸಂಖ್ಯೆಯೂ ಸರ್ಕಾರದ ಬಳಿ ಇಲ್ಲ’ ಎಂದು ಸುಪ್ರೀಂ ಕೋರ್ಟಿನ ಗಮನಕ್ಕೆ ತಂದಿದ್ದರು.
ಈ ಹಿನ್ನೆಲೆಯಲ್ಲಿ ಈ ಬಗ್ಗೆ ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿರುವ ಕೇಂದ್ರ ಸರ್ಕಾರವು, “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ರಚಿಸಲಾಗಿರುವ ಸಂಸದೀಯ ಸಮಿತಿಯು ಕಳೆದ ವರ್ಷ ಈ ಬಗ್ಗೆ ಪರಿಶೀಲನೆ ನಡೆಸಿದೆ. ಈಗಾಗಲೇ ನೀಡಿದ್ದ ಸರ್ಕಾರಿ ಸೂಚನೆಗಳನ್ನು ಅನುಸರಿಸುತ್ತಿಲ್ಲ ಎಂಬುದನ್ನು ಗಮನಿಸಿದೆ. ಹಾಗಾಗಿ, 45 ದಿನ ಅಥವಾ ಅದಕ್ಕಿಂತ ಹೆಚ್ಚಿನ ಸೇವೆ ಇರುವ ತಾತ್ಕಾಲಿಕ ಗುತ್ತಿಗೆ ಹುದ್ದೆ ಇದ್ದರೆ ಅದಕ್ಕೂ ಮೀಸಲಾತಿ ಕೋಟಾ ಅನ್ವಯವಾಗುತ್ತದೆ ಎಂಬ ನೀತಿಯ ಸೂಚನೆಗಳನ್ನು ಅನುಸರಿಸಲು ನಿರ್ದೇಶಿಸಿದೆ. ಅಲ್ಲದೇ, ಈ ಸಂಬಂಧ ಈಗಾಗಲೇ ಎಲ್ಲ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಆದೇಶ ಹೊರಡಿಸಲಾಗಿದೆ” ಎಂದು ತಿಳಿಸಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್ವಿಎನ್ ಭಟ್ಟಿ ಅವರನ್ನೊಳಗೊಂಡ ಪೀಠವು ಈ ಸಂಬಂಧ ಕಳೆದ ಅಕ್ಟೋಬರ್ 3 ರಂದು ಆದೇಶ ಕೂಡ ಹೊರಡಿಸಿದೆ. ಆದೇಶದಲ್ಲಿ, ‘ಮೀಸಲಾತಿ ಸಂಬಂಧ ಸರ್ಕಾರ ನೀಡಿರುವ ಮಾರ್ಗಸೂಚನೆಯನ್ನು ಸಂಬಂಧಪಟ್ಟವರು ಉಲ್ಲಂಘಿಸಿದ್ದು ಕಂಡುಬಂದರೆ, ಅರ್ಜಿದಾರರು ಅಥವಾ ಬಾಧಿತರು ಕಾನೂನಿನ ಪ್ರಕಾರ ಸೂಕ್ತ ಪರಿಹಾರ ಪಡೆದುಕೊಳ್ಳಲು ಮುಂದಾಗಬಹುದು’ ಎಂದು ತಿಳಿಸಿದೆ.