- ಬಿಪೊರ್ಜಾಯ್ ಚಂಡಮಾರುತ ಹಿನ್ನೆಲೆ ಇದುವರೆಗೆ 76 ರೈಲು ರದ್ದು
- ಗುಜರಾತ್ನಲ್ಲಿ ರೆಡ್ ಅಲರ್ಟ್ ಘೋಷಣೆ, ಎಸ್ಡಿಆರ್ಎಫ್ ನಿಯೋಜನೆ
ಬಿಪೊರ್ಜಾಯ್ ಚಂಡಮಾರುತ ಗುಜರಾತ್ ಕರಾವಳಿಯಿಂದ 200 ಕಿಲೋ ಮೀಟರ್ ದೂರದಲ್ಲಿದೆ. ಇಂದು ಸಂಜೆ ಕರಾವಳಿಗೆ ಅಪ್ಪಳಿಸಲಿದೆ. ಈ ವೇಳೆ ಭಾರೀ ಗಾಳಿ, ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಗುರುವಾರ (ಜೂನ್ 15) ಹೇಳಿದೆ.
ಚಂಡಮಾರುತದ ಪರಿಣಾಮ ಹೆಚ್ಚಾಗಿರುವ ಕಚ್ ಕಡಲತೀರದಿಂದ 10 ಕಿ.ಮೀ ಪ್ರದೇಶಗಳಲ್ಲಿರುವ 120 ಹಳ್ಳಿಗಳ ಸುಮಾರು 74,000 ಜನರನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಚಂಡಮಾರುತ ಅತ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ ಎಂದು ಈಗಾಗಲೇ ಹೇಳಿದ್ದು ಬಿಪೊರ್ಜಾಯ್ ಚಂಡಮಾರುತ ಕಚ್ ಜಿಲ್ಲೆಯ ಜಖ್ ಬಂದರಿನ ಬಳಿ ಭೂಪ್ರದೇಶಕ್ಕೆ ಅಪ್ಪಳಿಸಲಿದೆ. ಗಾಳಿಯ ವೇಗ ಗಂಟೆಗೆ ಗರಿಷ್ಠ 150 ಕಿಲೋ ಮೀಟರ್ ಇರಲಿದೆ ಎಂದು ಐಎಂಡಿ ತಿಳಿಸಿದೆ.
ಚಂಡಮಾರುತ ಕರಾವಳಿಯನ್ನು ಸಮೀಪಿಸುತ್ತಿದ್ದಂತೆ ಮಳೆಯ ತೀವ್ರತೆಯು ಹೆಚ್ಚಾಗುತ್ತದೆ. ಕಚ್, ದೇವಭೂಮಿ ದ್ವಾರಕಾ ಮತ್ತು ಜಾಮನಗರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಸಮುದ್ರದಲ್ಲಿ ಸಂಚಾರ ಹಾಗೂ ಮೀನುಗಾರಿಕೆಗೆ ನಿರ್ಬಂಧ ಹೇರಲಾಗಿದೆ ಎಂದು ಹೇಳಲಾಗಿದೆ.
ಚಂಡಮಾರುತ ಬಂದರಿಗೆ ಅಪ್ಪಳಿಸುವ ಮೊದಲು ಸೌರಾಷ್ಟ್ರ ಮತ್ತು ಕಚ್ ಮತ್ತು ನೆರೆಯ ಪಾಕಿಸ್ತಾನ ದೇಶದ ತೀರಭಾಗಗಳನ್ನು ಮಾಂಡ್ವಿ ಮತ್ತು ಕರಾಚಿ ಮಧ್ಯೆ ದಾಟಿ ಬರಲಿದೆ ಎಂದು ಐಎಂಡಿ ಹೇಳಿದೆ.
ಗೃಹ ಸಚಿವ ಅಮಿತ್ ಶಾ, ಮನ್ಸುಖ್ ಮಾಂಡವಿಯಾ, ರಾಜನಾಥ್ ಸಿಂಗ್ ಸೇರಿದಂತೆ ಹಲವಾರು ಕೇಂದ್ರ ಸಚಿವರು ಪರಿಸ್ಥಿತಿಯ ಅವಲೋಕನ ಮಾಡುತ್ತಿದ್ದಾರೆ.
ಬಿಪೊರ್ಜಾಯ್ ಚಂಡಮಾರುತ ಅಪ್ಪಳಿಸುವ ಹಿನ್ನೆಲೆ ಗುಜರಾತ್ ರಾಜ್ಯದಲ್ಲಿ ಗುರುವಾರ ರೆಡ್ ಅಲರ್ಟ್ ಘೋಷಿಸಲಾಗಿದೆ. ಭದ್ರತೆ ಮತ್ತು ತುರ್ತು ಸಹಾಯಕ್ಕೆ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ಗಳನ್ನು ನಿಯೋಜಿಸಲಾಗಿದೆ.
74 ಸಾವಿರ ಮಂದಿ ಸ್ಥಳಾಂತರ
ಚಂಡಮಾರುತ ಹಿನ್ನೆಲೆ ಗುಜರಾತ್ ಸರ್ಕಾರ ಮುನ್ನೆಚ್ಚರಿಕೆಯಾಗಿ ಕರಾವಳಿಯ ಸಮೀಪ ವಾಸಿಸುವ 74 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿದೆ.
ಎಂಟು ಕರಾವಳಿ ಜಿಲ್ಲೆಗಳಲ್ಲಿ ಒಟ್ಟು 74,345 ಜನರು ತಾತ್ಕಾಲಿಕ ಆಶ್ರಯಕ್ಕೆ ತೆರಳಿದ್ದಾರೆ. ಸುಮಾರು 34,300 ಜನರನ್ನು ಕಚ್ ಜಿಲ್ಲೆಯೊಂದರಲ್ಲೇ ಸ್ಥಳಾಂತರಿಸಲಾಗಿದೆ. ಜಾಮನಗರದಲ್ಲಿ 10,000, ಮೊರ್ಬಿಯಲ್ಲಿ 9,243, ರಾಜ್ಕೋಟ್ನಲ್ಲಿ 6,089 ಮತ್ತು ಗಿರ್ ಸೋಮನಾಥ್ ಜಿಲ್ಲೆಯಲ್ಲಿ 1,605 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಗುಜರಾತ್ ಸರ್ಕಾರದ ಪ್ರಕಟಣೆ ತಿಳಿಸಿದೆ.
ನೌಕಾಪಡೆ ಸನ್ನದ್ಧ: ಭಾರತೀಯ ನೌಕಾಪಡೆಯು ಬಿಪೊರ್ಜಾಯ್ ಚಂಡಮಾರುತ ಪರಿಣಾಮದಿಂದ ಉಂಟಾಗುವ ಅನಾಹುತಗಳನ್ನು ಎದುರಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ.
ಪೋರಬಂದರ್ ಮತ್ತು ಓಖಾದ ಪ್ರತಿ ಸ್ಥಳದಲ್ಲಿ ಐದು ಪರಿಹಾರ ತಂಡಗಳು ನೆಲೆಗೊಂಡಿವೆ. ವಲ್ಸೂರಾದಲ್ಲಿ ಹದಿನೈದು ಪರಿಹಾರ ತಂಡಗಳು ಸಿದ್ಧವಾಗಿವೆ.
ರೈಲ್ವೆ ಸಂಚಾರ ರದ್ದು: ಬಿಪೊರ್ಜಾಯ್ ಚಂಡಮಾರುತ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ ರೈಲುಗಳ ಕಾರ್ಯಾಚರಣೆಯನ್ನು ರದ್ದುಗೊಳಿಸಲು ಅಥವಾ ಕಡಿಮೆ ಮಾಡಲು ಪಶ್ಚಿಮ ರೈಲ್ವೆ ನಿರ್ಧರಿಸಿದೆ.
ಈ ಸುದ್ದಿ ಓದಿದ್ದೀರಾ? 16ನೇ ಹಣಕಾಸು ಆಯೋಗ : ಹೊಣೆಗಾರಿಕೆ ಮತ್ತು ಉತ್ತರದಾಯಿತ್ವ
ಚಂಡಮಾರುತ ಗುಜರಾತ್ ಕರಾವಳಿಯನ್ನು ಸಮೀಪಿಸುತ್ತಿದ್ದಂತೆ ಪ್ರಯಾಣಿಕರ ಸುರಕ್ಷತೆ ಮತ್ತು ರೈಲು ಕಾರ್ಯಾಚರಣೆಯ ದೃಷ್ಟಿಯಿಂದ 7 ರೈಲುಗಳನ್ನು ರದ್ದುಗೊಳಿಸಲಾಗಿದೆ.
ಬಿಪೊರ್ಜಾಯ್ ಚಂಡಮಾರುತ ಹಿನ್ನೆಲೆ ಇದುವರೆಗೆ 76 ರೈಲುಗಳನ್ನು ರದ್ದುಗೊಳಿಸಲಾಗಿದೆ, 36 ಅಲ್ಪಾವಧಿಯ ಮತ್ತು 31 ಅಲ್ಪಾವಧಿಯ ರೈಲುಗಳನ್ನು ಬಿಡುಗಡೆ ಮಾಡಲಾಗಿದೆ.