- ಚಿತ್ರತಂಡದ ವಿರುದ್ಧ ಬಲಪಂಥೀಯ ಸಂಘಟನೆಗಳ ಪ್ರತಿಭಟನೆ
- ವಿವಾದಾತ್ಮಕ ಸಂಭಾಷಣೆ ತೆಗೆದು ಹಾಕಲು ಒತ್ತಾಯ
ತೆಲುಗಿನ ಸ್ಟಾರ್ ನಟ ಪ್ರಭಾಸ್ ಅಭಿನಯದ, ಓಂ ರಾವತ್ ನಿರ್ದೇಶನದ ಆದಿಪುರುಷ್ ಸಿನಿಮಾಗೆ ವ್ಯಾಪಕವಾಗಿ ವಿರೋಧ ವ್ಯಕ್ತವಾಗುತ್ತಿದೆ. ರಾಮಾಯಣದ ಕತೆಯನ್ನು ಆಧರಿಸಿರುವ ಈ ಚಿತ್ರದಲ್ಲಿ ಹಿಂದೂ ದೇವತೆಗಳಿಗೆ ಅಪಮಾನ ಮಾಡಲಾಗಿದೆ ಎಂದು ಬಲಪಂಥೀಯ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಚಿತ್ರದ ಪ್ರದರ್ಶನವನ್ನು ನಿಷೇಧಿಸುವಂತೆ ಟ್ವಿಟರ್ನಲ್ಲಿ ʼಬ್ಯಾನ್ ಆದಿಪುರುಷ್ ಮೂವಿʼ ಹೆಸರಿನ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಮುಂಬೈ, ಛತ್ತೀಸ್ಘಡದ ವಿಲಾಸ್ಪುರ್ ಸೇರಿದಂತೆ ಹಲವೆಡೆ ಪ್ರತಿಭಟನೆಗಳು ಕೂಡ ನಡೆದಿವೆ.
ʼಆದಿಪುರುಷ್ʼ ಸಿನಿಮಾ ರಾಮಾಯಣವನ್ನು ಆಧರಿಸಿದೆ ಎಂಬ ಕಾರಣಕ್ಕೆ ಬೆಂಬಲಿಸಿದ್ದ ಬಲಪಂಥೀಯ ಸಂಘಟನೆಗಳೇ ಸದ್ಯ ಚಿತ್ರತಂಡದ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸುತ್ತಿವೆ. 28 ಸಾವಿರಕ್ಕೂ ಹೆಚ್ಚು ಟ್ವಿಟರ್ ಬಳೆಕದಾರರು ʼಬ್ಯಾನ್ ಆದಿಪುರುಷ್ ಮೂವಿʼ ಹ್ಯಾಷ್ ಟ್ಯಾಗ್ ಬಳಸಿ, ಚಿತ್ರದಲ್ಲಿನ ಆಕ್ಷೇಪಾರ್ಹ ಸನ್ನಿವೇಶ ಮತ್ತು ಸಂಭಾಷಣೆಗಳನ್ನು ಉಲ್ಲೇಖಿಸಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತಿರುವ ಈ ಚಿತ್ರವನ್ನು ದೇಶವ್ಯಾಪಿಯಾಗಿ ನಿಷೇಧಿಸಿ ಎಂದು ಆಗ್ರಹಿಸುತ್ತಿದ್ದಾರೆ.
ಮುಂಬೈನ ನಾಲಾಸೋಪಾರ ಮಲ್ಟಿಪ್ಲೆಕ್ಸ್ನಲ್ಲಿ ಆದಿಪುರುಷ್ ಸಿನಿಮಾ ಪ್ರದರ್ಶನ ನಡೆಯುತ್ತಿರುವಾಗಲೇ ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ಗುಂಪಾಗಿ ಮಲ್ಟಿಪ್ಲೆಕ್ಸ್ನ ಒಳಗೆ ನುಗ್ಗಿದ್ದಾರೆ. ಸಿನಿಮಾ ಪ್ರದರ್ಶನವನ್ನು ರದ್ದುಗೊಳಿಸುವಂತೆ ಪಟ್ಟು ಹಿಡಿದು ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ಸಿನಿಮಾ ವೀಕ್ಷಿಸುತ್ತಿದ್ದವರ ಮೇಲೂ ಅಸಮಾಧಾನ ವ್ಯಕ್ತಪಡಿಸಿದ್ದು, ಹಿಂದೂ ದೇವತೆಗಳಿಗೆ ಅಪಮಾನ ಮಾಡಿರುವ ಇಂತಹ ಚಿತ್ರವನ್ನು ಬೆಂಬಲಿಸುತ್ತಿರುವ ನಿಮಗೆ ಧಿಕ್ಕಾರ ಎಂದು ಘೋಷಣೆ ಕೂಗಿದ್ದಾರೆ.
ಪ್ರವೀಣ್ ಕುಮಾರ್ ಎಂಬುವವರು ಟ್ವೀಟ್ ಮಾಡಿ ಆದಿಪುರುಷ್ ಸಿನಿಮಾ ನಿಷೇಧಕ್ಕೆ ಆಗ್ರಹಿಸಿದ್ದು, ಈ ಸಿನಿಮಾಗಿಂತ ದಶಕಗಳ ಹಿಂದೆ ರಮಾನಂದ್ ಸಾಗರ್ ಅವರು ನಿರ್ದೇಶಿಸಿದ್ದ ರಾಮಾಯಣ ಧಾರಾವಾಹಿಯೇ ಉತ್ತಮವಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ಚಿತ್ರಕ್ಕೆ ಸಂಭಾಷಣೆ ಬರೆದಿರುವ ಮನೋಜ್ ಮುಂತಾಶಿರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಹೇಂದ್ರ ಗೆಹ್ಲೋಟ್ ಎಂಬುವವರು ಟ್ವೀಟ್ ಮೂಲಕ ʼಆದಿಪುರುಷ್ʼ ಚಿತ್ರದಲ್ಲಿರುವ ಹನುಮಂತನ ಸಂಭಾಷಣೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಕ್ಷೇಪಾರ್ಹ ಸಂಭಾಷಣೆಗಳಿರುವ ಈ ಚಿತ್ರದ ಪ್ರದರ್ಶನಕ್ಕೆ ಸೆನ್ಸಾರ್ ಮಂಡಳಿ ಹೇಗೆ ಒಪ್ಪಿಗೆ ನೀಡಿತು? ಸೆನ್ಸಾರ್ ಮಂಡಳಿಯೂ ಆಮಿಷಕ್ಕೆ ಒಳಗಾಗಿದೆಯೇ ಎಂದು ಅನುಮಾನ ವ್ಯಕ್ತಪಡಿಸಿದ್ದು, ಚಿತ್ರದ ನಿಷೇಧಕ್ಕೆ ಒತ್ತಾಯಿಸಿದ್ದಾರೆ.
ಛತ್ತೀಸ್ಘಡದ ವಿಲಾಸ್ಪುರದಲ್ಲಿ ನೂರಾರು ಮಂದಿ ಬಲಪಂಥೀಯ ಸಂಘಟನೆ ಕಾರ್ಯಕರ್ತರು ʼಆದಿಪುರುಷ್ʼ ಸಿನಿಮಾ ಪ್ರದರ್ಶಿಸುತ್ತಿದ್ದ ʼಪಿವಿಆರ್ʼಗೆ ನುಗ್ಗಿ ಪ್ರದರ್ಶನವನ್ನು ರದ್ದುಗೊಳಿಸುವಂತೆ ಪ್ರತಿಭಟನೆ ನಡೆಸಿದ್ದಾರೆ. ಪ್ರೀತ್ ರಂಜನ್ ಎಂಬುವವರು ಈ ಸಂದರ್ಭದ ವಿಡಿಯೋ ತುಣುಕನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಚಿತ್ರತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆತುರ್ ಶರ್ಮಾ ಎಂಬುವವರು ಟ್ವೀಟ್ ಮಾಡಿ ʼಆದಿಪುರುಷ್ʼ ಚಿತ್ರದ ನಿಷೇಧಕ್ಕೆ ಒತ್ತಾಯಿಸಿದ್ದು, “ʼಆದಿಪುರುಷ್ʼ ಚಿತ್ರದಲ್ಲಿ ರಾಮಾಯಣದ ಘನತೆಯನ್ನೇ ಹಾಳು ಮಾಡಲಾಗಿದೆ” ಎಂದಿದ್ದಾರೆ.