ಮುಖ್ಯಮಂತ್ರಿ ಬೊಮ್ಮಾಯಿ ಜೊತೆಗೆ ಮೂಕಾಂಬಿಕೆ ದರ್ಶನ ಪಡೆದ ರಿಷಬ್
ರಿಷಬ್ ಶೆಟ್ಟಿ ಭೇಟಿಯಾಗಿದ್ದು ಆಕಸ್ಮಿಕ ಎಂದ ಬಸವರಾಜ ಬೊಮ್ಮಾಯಿ
ನಟ, ನಿರ್ದೇಶಕ ರಿಷಬ್ ಶೆಟ್ಟಿ ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕುಟುಂಬಸ್ಥರ ಜೊತೆಗೆ ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದಿದ್ದಾರೆ. ರಿಷಬ್, ಮುಖ್ಯಮಂತ್ರಿಗಳ ಜೊತೆ ಕಾಣಿಸಿಕೊಳ್ಳುತ್ತಲೇ ಸುದೀಪ್ ರೀತಿಯಲ್ಲಿ ಅವರು ಕೂಡ ಬಿಜೆಪಿ ಪರ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆಯೇ ಎಂಬ ಚರ್ಚೆ ಶುರುವಾಗಿತ್ತು. ಈ ಬಗ್ಗೆ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯಿಸಿದ್ದು, ರಿಷಬ್ ಬಿಜೆಪಿ ಸಿದ್ಧಾಂತಕ್ಕೆ ಹತ್ತಿರ ಇರುವ ವ್ಯಕ್ತಿ ಎಂದಿದ್ದಾರೆ.
ಮೂಕಾಂಬಿಕೆಯ ದರ್ಶನ ಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ ರಿಷಬ್ ಶೆಟ್ಟಿ ಬಿಜೆಪಿ ಪರ ಚುನಾವಣಾ ಪ್ರಚಾರ ಮಾಡಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. “ರಿಷಬ್ ಅವರು ಕೊಲ್ಲೂರಿಗೆ ಬಂದಿರುವ ಬಗ್ಗೆ ನನಗೆ ಗೊತ್ತಿರಲಿಲ್ಲ. ಅವರು ಮೊದಲಿಂದಲೂ ನನಗೆ ಒಳ್ಳೆಯ ಸ್ನೇಹಿತರು. ನಮ್ಮ ಸಿದ್ಧಾಂತಕ್ಕೆ ಹತ್ತಿರ ಇರುವವರು. ಚುನಾವಣಾ ಪ್ರಚಾರದ ಬಗ್ಗೆ ಅವರೊಂದಿಗೆ ಚರ್ಚೆ ನಡೆದಿಲ್ಲ. ಸದ್ಯದ ಮಟ್ಟಿಗೆ ಅವರನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ಯಾವುದೇ ಯೋಚನೆ ಇಲ್ಲ” ಎಂದಿದ್ದಾರೆ.
ಸ್ಯಾಂಡಲ್ವುಡ್ನ ಖ್ಯಾತ ನಟ ಸುದೀಪ್ ಇತ್ತೀಚೆಗಷ್ಟೇ ತಾವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿಯ ಪರ ಚುನಾವಣಾ ಪ್ರಚಾರ ಮಾಡುವುದಾಗಿ ಘೋಷಿಸಿದ್ದರು. ರಿಷಬ್ ಶೆಟ್ಟಿ ಕೂಡ ಆಗಾಗ ತಾವು ಬಿಜೆಪಿ ಪರ ಎಂಬುದನ್ನು ಸಾಬೀತು ಪಡಿಸುತ್ತಲೇ ಬಂದಿದ್ದಾರೆ. ಬಸವರಾಜ ಬೊಮ್ಮಾಯಿ ಮತ್ತು ರಿಷಬ್ ಶೆಟ್ಟಿ ಅವರ ಆಕಸ್ಮಿಕ ಭೇಟಿ ರಾಜಕೀಯ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ.