- 2018ರಲ್ಲಿ ಸರ್ಕಾರ ರಚನೆಯ ನಂತರ ಗೆಹ್ಲೋಟ್, ಪೈಲಟ್ ನಡುವೆ ಮುನಿಸು
- ತಂದೆ ರಾಜೇಶ್ ಪೈಲಟ್ ಅವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪೈಲಟ್ ಮಾತು
ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ತಮ್ಮ ತಂದೆ ರಾಜೇಶ್ ಪೈಲಟ್ ಅವರ ಪುಣ್ಯತಿಥಿಯ ಅಂಗವಾಗಿ ರಾಜಸ್ಥಾನದ ಜೈಪುರದ ದೌಸಾದಲ್ಲಿ ಭಾನುವಾರ (ಜೂನ್ 11) ಏರ್ಪಡಿಸಿದ್ದ ಸಮಾವೇಶದಲ್ಲಿ ಹೊಸ ಪಕ್ಷ ಸ್ಥಾಪನೆಯ ಬಗ್ಗೆ ಉಂಟಾಗಿದ್ದ ಕುತೂಹಲಕ್ಕೆ ತೆರೆ ಎಳೆದರು.
ಸಮಾವೇಶ ಆರಂಭಕ್ಕೂ ಮುನ್ನ ತಮ್ಮ ತಂದೆ ರಾಜೇಶ್ ಪೈಲಟ್ ಅವರಿಗೆ ಸಚಿನ್ ಗೌರವ ಸಲ್ಲಿಸಿದರು.
ಕಾಂಗ್ರೆಸ್ನ ಕಾರ್ಯಕರ್ತರು ಗೌರವ ನಮನ ಸಲ್ಲಿಸಿದ ನಂತರ ರಾಜಸ್ಥಾನದ ಉಪಮುಖ್ಯಮಂತ್ರಿಯೂ ಆದ ಸಚಿನ್ ಪೈಲಟ್ ಅವರು ರಾಜೇಶ್ ಪೈಲಟ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದರು.
ಸಮಾವೇಶದಲ್ಲಿ ಮಾತನಾಡಿದ ಅವರು ಹೊಸ ಪಕ್ಷ ಸ್ಥಾಪನೆಯ ಬಗ್ಗೆ ಇದ್ದ ಊಹಾಪೋಹಗಳಿಗೆ ತೆರೆ ಎಳೆದರು.
ರಾಜಸ್ಥಾನ ಅಥವಾ ದೇಶದಲ್ಲಿ ಭಷ್ಟಾಚಾರಯುಕ್ತ ರಾಜಕೀಯಕ್ಕೆ ಅವಕಾಶವಿಲ್ಲ ಎಂದ ಸಚಿನ್, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಕಾರ್ಯಗಳ ಕುರಿತು ಮಾತನಾಡಿದರು.
ಸಚಿನ್ ಪೈಲಟ್ ಅವರು ಕಾರ್ಯಕ್ರಮದಲ್ಲಿ ಯಾವುದೇ ಪಕ್ಷ ಸ್ಥಾಪನೆಯ ಬಗ್ಗೆ ಮಾತನಾಡಲಿಲ್ಲ.
ಇದೇ ವೇಳೆ ಸಚಿನ್ ಅವರು ಅಶೋಕ್ ಗೆಹ್ಲೋಟ್ ಅವರ ಸರ್ಕಾರದ ಲೋಪಗಳ ಕುರಿತು ಮಾತನಾಡಿದರು.
“ಭಾರತ ಮತ್ತು ರಾಜಸ್ಥಾನದ ರಾಜಕೀಯದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ಇರಬಾರದು. ಇದರಿಂದ ಯುವ ಜನತೆ ಅಸಮಾಧಾನಗೊಂಡರೆ ದೇಶ ಎಂದಿಗೂ ಅಭಿವೃದ್ಧಿಯಾಗುವುದಿಲ್ಲ” ಎಂದು ಸಚಿನ್ ಅವರು ಅಶೋಕ್ ಗೆಹ್ಲೋಟ್ ಅವರ ಆಡಳಿತವನ್ನು ಪರೋಕ್ಷವಾಗಿ ಟೀಕಿಸಿದರು.
“ನಾನು 365 ದಿನವೂ ಬಿಜೆಪಿಯ ಮಾಜಿ ಮುಖ್ಯಮಂತ್ರಿ ವಸುಂಧರ ರಾಜೆ ಅವರನ್ನು ವಿರೋಧಿಸುತ್ತೇನೆ. ಆದರೆ ಅವರ ವಿರುದ್ಧ ಎಂದಿಗೂ ಅವಹೇಳನಕಾರಿ ಪದಗಳನ್ನು ಬಳಸುವುದಿಲ್ಲ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಎಂದಿಗೂ ಅವಮಾನಿಸಿಲ್ಲ” ಎಂದು ಸಚಿನ್ ಹೇಳಿದರು.
“ನಮ್ಮ ಆಡಳಿತದಲ್ಲಿ ಏನಾದರೂ ಲೋಪವಿದ್ದರೆ ಇತರರನ್ನು ದೂಷಿಸದೆ ಅದನ್ನು ಸರಿಪಡಿಸಿಕೊಳ್ಳಬೇಕು. ಇತರರನ್ನು ಅವಮಾನಿಸಲು ನಾನು ನನ್ನ ಬೇಡಿಕೆಗಳನ್ನು ಮುಂದಿಟ್ಟಿಲ್ಲ. ರಾಜಕೀಯದಲ್ಲಿ ನಿಮ್ಮ ಅಭಿಪ್ರಾಯಗಳನ್ನು ಮಂಡಿಸುವುದು ಬಹಳ ಮುಖ್ಯವಾಗಿದೆ” ಎಂದು ಸಚಿನ್ ಅವರು ಗೆಹ್ಲೋಟ್ ಸರ್ಕಾರದ ವಿರುದ್ಧದ ಮುನಿಸನ್ನು ಪರೋಕ್ಷವಾಗಿ ಹೊರಹಾಕಿದರು.
ಈ ಸುದ್ದಿ ಓದಿದ್ದೀರಾ? 2022ರ ವಿಶ್ವ ಡಿಜಿಟಲ್ ಪಾವತಿ ವಹಿವಾಟಿನಲ್ಲಿ ಭಾರತಕ್ಕೆ ಮೊದಲ ಸ್ಥಾನ | ಕೇಂದ್ರದ ದತ್ತಾಂಶ
ಸಚಿನ್ ಪೈಲಟ್ ಹಾಗೂ ಅಶೋಕ್ ಗೆಹ್ಲೋಟ್ ಅವರ ಜೊತೆ ಕಳೆದ ವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಚರ್ಚೆ ನಡೆಸಿದ್ದರು.
2018ರಲ್ಲಿ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದಾಗಿನಿಂದ ಸಚಿನ್ ಹಾಗೂ ಅಶೋಕ್ ಗೆಹ್ಲೋಟ್ ನಡುವೆ ಅಧಿಕಾರ ಹಂಚಿಕೆಯ ಬಿಕ್ಕಟ್ಟು ಉಂಟಾಗಿದೆ.