ಅಂತರರಾಷ್ಟ್ರೀಯ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಅವರು ಗುಂಡೇಟಿನಿಂದ ದಾಳಿಗೊಳಗಾಗಿರುವ ಆಜಾದ್ ಸಮಾಜ್ ಪಾರ್ಟಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರನ್ನು ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲಾ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪುನಿಯಾ, “ಚಂದ್ರಶೇಖರ್ ಆಜಾದ್ ಯಾವುದೇ ಒಂದು ಸಮಾಜದ ನಾಯಕನಲ್ಲ. ಅವರು ಇಡೀ ಸಮಾಜದ ನಾಯಕ. ಅದು ರೈತ ಚಳವಳಿಯಾಗಲಿ ಅಥವಾ ಕುಸ್ತಿಪಟುಗಳ ಹೋರಾಟವೇ ಆಗಿರಲಿ, ಅವರು ಸತ್ಯಕ್ಕಾಗಿ ಹೋರಾಡುವ ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ನಿಂತಿದ್ದಾರೆ. ಭೀಮ್ ಆರ್ಮಿ ಮುಖ್ಯಸ್ಥರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ತಿಳಿದಾಗ ನಾವು ಭೇಟಿಯಾಗಲು ಇಲ್ಲಿಗೆ ಬಂದಿದ್ದೇವೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಣಿಪುರ | ಸಂತ್ರಸ್ತ ಪರಿಹಾರ ಶಿಬಿರದಲ್ಲಿ ಮಕ್ಕಳೊಂದಿಗೆ ಆಹಾರ ಸೇವಿಸಿದ ರಾಹುಲ್ ಗಾಂಧಿ
“ಇದು ನಾಚಿಕೆಗೇಡಿನ ಸಂಗತಿ. ಇಂದು ಸತ್ಯಕ್ಕಾಗಿ ಹೋರಾಡುವವರ ಮೇಲೆ ಮಾತ್ರ ದಾಳಿ ಮಾಡಲಾಗುತ್ತಿದೆ. ಪೊಲೀಸರು ಕೂಡಲೇ ದಾಳಿಕೋರರನ್ನು ಬಂಧಿಸಬೇಕು” ಎಂದು ಪುನಿಯಾ ಆಗ್ರಹಿಸಿದ್ದಾರೆ.
ಬುಧವಾರ ಸಂಜೆ(ಜೂನ್ 28) ಸಹರಾನ್ಪುರ ಜಿಲ್ಲೆಯ ದಿಯೋಬಂದ್ನಲ್ಲಿ ಅಪರಿಚಿತ ದುಷ್ಕರ್ಮಿಗಳು ಕಾರಿನ ಮೇಲೆ ಗುಂಡು ಹಾರಿಸಿದ್ದು ಈ ದಾಳಿಯಲ್ಲಿ ಚಂದ್ರಶೇಖರ್ ಆಜಾದ್ ಅವರ ಸೊಂಟಕ್ಕೆ ಗುಂಡು ತಗುಲಿದ್ದು, ಚಿಕಿತ್ಸೆಗಾಗಿ ಸಹರಾನ್ಪುರದ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.
ಆಜಾದ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಎಸ್ಯುವಿಯಲ್ಲಿ ಹಿಂತಿರುಗುತ್ತಿದ್ದಾಗ ದೇವಬಂದ್ನ ಗಾಂಧಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.