- ಲೈವ್ ವಿಡಿಯೋ ಸಂದೇಶದಲ್ಲಿ ಮಾತನಾಡುವಾಗ ಗಾದೆ ಮಾತು ಉಲ್ಲೇಖಿಸಿ ದಲಿತ ಸಮುದಾಯಕ್ಕೆ ಅವಮಾನ
- ‘ಈ ಮಾತಿಗೆ ಕ್ಷಮೆಯಿರಲಿ’ ಎಂದು ವಿಡಿಯೋ ಡಿಲೀಟ್ ಮಾಡಿದ ಸ್ಯಾಂಡಲ್ವುಡ್ ನಟ
ಸ್ಯಾಂಡಲ್ ವುಡ್ ನಟ, ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಲೈವ್ ವಿಡಿಯೋ ಸಂದೇಶದಲ್ಲಿ ಮಾತನಾಡುವಾಗ ಗಾದೆ ಮಾತೊಂದನ್ನು ಉಲ್ಲೇಖಿಸಿ ದಲಿತ ಸಮುದಾಯಕ್ಕೆ ಅವಮಾನ ಮಾಡಿದ್ದು, ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ವಿಡಿಯೋ ಸಂದೇಶದಲ್ಲಿ ಮಾತನಾಡುತ್ತಿದ್ದ ವೇಳೆ ಉಪೇಂದ್ರ ಅವರು, ‘ಊರು ಅಂದ್ಮೇಲೆ ಹೋಲಗೇರಿ ಇರುತ್ತೆ’ ಎಂದು ಗಾದೆ ಮಾತನ್ನು ಬಳಸಿದ್ದಾರೆ. ಆ ಮೂಲಕ ದಲಿತ ಸಮುದಾಯದ ಜನರಿಗೆ ಅವಮಾನ ಮಾಡಿದ್ದಾರೆ.
ಉಪೇಂದ್ರ ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಉಪೇಂದ್ರ ವಿರುದ್ಧ ದಲಿತ ಸಮುದಾಯ ಸೇರಿದಂತೆ ಸಾಮಾಜಿಕ ಕಾರ್ಯಕರ್ತರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ದೀಪು ಗೌಡ್ರು ಎಂಬವರು ಈ ಕುರಿತು ಪ್ರತಿಕ್ರಿಯಿಸಿ, ‘ಅಲ್ಲ ಈತನ ಯಾವುದೋ ಒಂದು ಪಕ್ಷದ ಸಿದ್ದಾಂತದ ವಿರುದ್ಧ ಒಂದಷ್ಟು ಜನ ವಿರೋಧ ವ್ಯಕ್ತಪಡಿಸಿದರೆ, ಆ ಜನರನ್ನು ‘ಹೊಲೆಗೇರಿ’ಗೆ ಹೊಲಿಸೋದು ಎಷ್ಟರ ಮಟ್ಟಕ್ಕೆ ಸರಿ..? ಹಾಗಾದರೆ ಈ ಮನುಷ್ಯನ ಪ್ರಕಾರ ಹೊಲೆಗೇರಿಯಲ್ಲಿ ಬದುಕುವ ಜನರೆಲ್ಲರು ಕೆಟ್ಟವರಾ? ಇಂತಹ ಕೆಟ್ಟ ಮನಸ್ಥಿತಿಗೆನೇ ನಾವು ಬ್ರಾಹ್ಮಣ್ಯ ಅಂತ ಉಗಿಯೋದು.. ಅಲ್ಲಾ, ಸ್ವಾಮಿ ನಿಮಗೆ ನಿಜವಾಗಿಯೂ ಸಮಾಜದ ಮೇಲೆ ಕಾಳಜಿ ಇದಿದ್ದಿದ್ರೆ ಊರಿನಲ್ಲಿ ಹೊಲೆಗೇರೀನೇ ಇರಬಾರದು ಅನ್ನೋ ಸಮಾನತೆಯ ಸಮಾಜದ ಬಗ್ಗೆ ಯೋಚನೆ ಮಾಡ್ತಾ ಇದ್ರಿ’ ಎಂದು ಬರೆದಿದ್ದಾರೆ.
‘ನಾನು ಸುಮಾರು ಒಂದೂವರೆ ದಶಕದಿಂದೀಚೆಗೆ ನನ್ನ ಸ್ನೇಹಿತರ ಬಳಗದಲ್ಲಿ ಹೇಳುತ್ತಾ ಬಂದಿದ್ದೇನೆ. ಕನ್ನಡದಲ್ಲಿ ಮುದ್ರಣ ಮಾಧ್ಯಮವನ್ನು ಕುಲಗೆಡಿಸಿದ್ದು ರವಿ ಬೆಳಗೆರೆಯಾದರೆ, ಮನರಂಜನಾ ಮಾಧ್ಯಮವನ್ನು ಕುಲಗೆಡಿಸಿದ್ದು ಉಪೇಂದ್ರ. ಆತನನ್ನು ನಟ ಎಂದು ನಾನ್ಯಾವತ್ತೂ ಕನ್ಸಿಡರ್ ಮಾಡೇ ಇಲ್ಲ. ತನ್ನ ತಿಕ್ಕಲುತನಗಳನ್ನೆಲ್ಲಾ ನಟನೆ ಎಂದು ನಂಬಿರುವ ಉಪೇಂದ್ರನಿಗೆ ಭ್ರಾಂತು. ಇಂದು ಹೊಲಗೇರಿ ವಿಚಾರ ಎತ್ಕೊಂಡು ಇನ್ಡೈರೆಕ್ಟಾಗಿ ಮಾನವ ಘನತೆಯನ್ನು ಕಾಲಲ್ಲಿ ತುಳಿದ ಇದೇ ಉಪೇಂದ್ರ ಬಹಳ ಹಿಂದೆಯೇ ತನ್ನ ಯಾವುದೋ ಒಂದು ಸಿನಿಮಾದಲ್ಲಿ ಹೆಣ್ಮಕ್ಕಳ ಕುರಿತಾಗಿ ಅತ್ಯಂತ ತುಚ್ಛವಾಗಿ ನಾಲಿಗೆ ಹರಿಸಿದ್ದ. ಒಂದೊಮ್ಮೆ ಬಾಬಾ ಸಾಹೇಬ್ ಅಂಬೇಡ್ಕರರ ಬಗ್ಗೆಯೂ ನಾಲಿಗೆ ಹರಿ ಬಿಟ್ಟು ಆ ಬಳಿಕ ಕ್ಷಮೆಯಾಚಿಸಿದ್ದ. ಆತನಿಗೆ ಮಾನವ ಘನತೆ ಎಂದರೇನೆಂದೇ ಗೊತ್ತಿಲ್ಲ. ಇನ್ನು ಆತನ ಪೊಲಿಟಿಕಲ್ ಪಾರ್ಟಿ ಪ್ರಜಾಕೀಯ ಇನ್ನೊಂದು ವಿಧದ ಹುಚ್ಚಾಟ. ನಾವು ಆತ ಬಹಿರಂಗವಾಗಿ ಕ್ಷಮೆ ಕೇಳುವಂತೆ ಮಾಡಬೇಕಿದೆ ಮತ್ತು ಆತನನ್ನು ಎಲ್ಲಿಡಬೇಕೋ ಅಲ್ಲೇ ಇಡಬೇಕಿದೆ’ ಎಂದು ಮಂಗಳೂರಿನ ಇಸ್ಮತ್ ಪಜೀರ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
‘ಉಪೇಂದ್ರ ತನ್ನ ಹೊಸ ಚಿತ್ರ ಘೋಷಣೆ ವೇಳೆ ‘ಬುದ್ದಿವಂತರಿಗೆ ಮಾತ್ರ’ ಎಂಬುದಾಗಿ ಟ್ಯಾಗ್ ಲೈನ್ ಹಾಕುತ್ತಾರೆ. ಈ ಪ್ರವೃತ್ತಿ, ಪ್ರೇಕ್ಷಕರಿಗೆ ಜನರಿಗೆ ಮಾಡುವ ಅಪಮಾನ! ಹಿಂದೆ ಅಂಬೇಡ್ಕರ್, ಈಗ ಹೊಲೆಗೇರಿ! ಜನರ ಬುದ್ದಿವಂತಿಕೆ ಟೆಸ್ಟ್ ಮಾಡುವ ಮೊದಲು ಸಾರ್ವಜನಿಕವಾಗಿ ತಮ್ಮ ಬುದ್ದಿವಂತಿಕೆ ಪ್ರದರ್ಶಿಸಲಿ ಎಂಬುದು ನನ್ನ ಸಲಹೆ’ ಎಂದು ದೇವರಾಜ್ ಎನ್ನುವವರು ಆಕ್ರೋಶ ಹೊರಹಾಕಿದ್ದಾರೆ.
ಹಿರಿಯ ಸಾಹಿತಿ, ರಂಗ ಕಲಾವಿದ ಯೋಗೇಶ್ ಮಾಸ್ಟರ್ ಅವರು, ವಿಡಿಯೋವೊಂದರ ಮೂಲಕ ಉಪೇಂದ್ರ ಅವರ ಹೇಳಿಕೆಯನ್ನು ಖಂಡಿಸಿ, ‘ಜಾತಿ ಅನ್ನೋದು ಮಾನಸಿಕ’ ಎಂದು ಹಳೆಯ ಬಟ್ಟೆಯೊಂದನ್ನು ಹಾಕಲು ಯತ್ನಿಸುವ ಮೂಲಕ ವಿವರಿಸಿದ್ದಾರೆ.
ಕರ್ನಾಟಕ ರಾಜ್ಯ ಭೀಮ್ ಆರ್ಮಿ ಅಧ್ಯಕ್ಷರಾದ ರಾಜಗೋಪಾಲ್. ಡಿ ಅವರು ಪ್ರತಿಕ್ರಿಯಿಸಿ, ‘ಉಪೇಂದ್ರ ಅವರೇ, ಊರು ಅಂದರೆ ಹೋಲಗೇರಿ ಇರುತ್ತೆ ಎಂದು ಹೇಳುವುದರ ಮೂಲಕ ನೀವು ದಲಿತರನ್ನು ಅಪಮಾನಿಸುತ್ತಾ ಇದ್ದಿರಿ… ಕೂಡಲೆ ನಿಮ್ಮ ಹೇಳಿಕೆ ವಾಪಸ್ಸು ಪಡೆದುಕೊಳ್ಳಬೇಕು ಮತ್ತೆ ಈ ದಲಿತ ಸಮಾಜಕ್ಕೆ ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ನಿಮ್ಮ ವಿರುದ್ದ ದಲಿತ ಸಂಘಟನೆಗಳಿಂದ ಹೋರಾಟ ಮಾಡಬೇಕಾಗುತ್ತದೆ ಮತ್ತೆ ದೌರ್ಜನ್ಯ ಕಾಯ್ದೆಯಡಿ ನಿಮ್ಮ ಮೇಲೆ ಕೇಸು ದಾಖಲಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದರು.
ತನ್ನ ಹೇಳಿಕೆ ವಿವಾದವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕ್ಷಮಾಪನೆಯನ್ನು ಕೇಳಿರುವ ನಟ ಉಪೇಂದ್ರ, ‘ಬಾಯಿ ತಪ್ಪಿನಿಂದ ಗಾದೆ ಮಾತು ಬಂದಿದೆ. ಇದರಿಂದ ಹಲವರ ಭಾವನೆಗಳು ಧಕ್ಕೆಯಾಗಿರುವುದನ್ನು ಗಮನಿಸಿ ತಕ್ಷಣ ಲೈವ್ ವಿಡಿಯೋವನ್ನು ಡಿಲೀಟ್ ಮಾಡಿದ್ದೇನೆ. ಮಾತಿಗೆ ಕ್ಷಮೆ ಇರಲಿ’ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಸಂಪತ್ ಸುಬ್ಬಯ್ಯ ಎಂಬವರು, ‘ಕ್ಷಮೆ ಕೇಳಿದ ಮಾತ್ರಕ್ಕೆ ನಿನ್ನ ಮೇಲೆ ಕೇಸು ದಾಖಲಾಗುವುದು ನಿಲ್ಲಲ್ಲ. ಕೇಸೂ ದಾಖಲಿಸುತ್ತೇವೆ’ ಎಂದು ತಿಳಿಸಿದ್ದಾರೆ.