ʼಕೇಡಿʼ ಚಿತ್ರದಲ್ಲಿ ಖಳನ ಪಾತ್ರದಲ್ಲಿ ನಟಿಸುತ್ತಿರುವ ಸಂಜಯ್ ದತ್
ಶೂಟಿಂಗ್ ವೇಳೆ ಸಿಡಿಮದ್ದು ಸ್ಫೋಟದಿಂದ ಗಾಯಗೊಂಡಿದ್ದ ನಟ
ʼಕೇಡಿʼ ಸಿನಿಮಾದ ಶೂಟಿಂಗ್ ವೇಳೆ ಸಿಡಿಮದ್ದು ಸ್ಫೋಟಗೊಂಡು ಬಾಲಿವುಡ್ನ ಖ್ಯಾತ ನಟ ಸಂಜಯ್ ದತ್ ಗಾಯಗೊಂಡಿದ್ದಾರೆ ಎಂಬ ಸುದ್ದಿ ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಬಗ್ಗೆ ಚಿತ್ರದ ನಿರ್ದೇಶಕ ಪ್ರೇಮ್ ಮತ್ತು ಸಂಜಯ್ ದತ್ ಸ್ಪಷ್ಟನೆ ನೀಡಿದ್ದಾರೆ. ಆದರೆ, ಇವರಿಬ್ಬರ ಸ್ಪಷ್ಟನೆ ಅಭಿಮಾನಿಗಳಲ್ಲಿ ಮತ್ತಷ್ಟು ಗೊಂದಲವನ್ನು ಸೃಷ್ಟಿಸಿದೆ.
ಸಂಜಯ್ ದತ್ ಜೊತೆಗಿನ ಹಳೆಯ ಫೋಟೋವನ್ನು ಹಂಚಿಕೊಂಡು ಟ್ವೀಟ್ ಮಾಡಿರುವ ಪ್ರೇಮ್, “ಮಾಧ್ಯಮಗಳಲ್ಲಿ ವರದಿಯಾದಂತೆ ಚಿತ್ರೀಕರಣದ ಸ್ಥಳದಲ್ಲಿ ಸಿಡಿಮದ್ದು ಸ್ಫೋಟಗೊಂಡಿಲ್ಲ. ಆದರೆ, ಸಣ್ಣ ಅವಘಡ ಸಂಭವಿಸಿದ್ದು ಸತ್ಯ. ಸಂಜಯ್ ದತ್ ಅವರು ಆರೋಗ್ಯವಾಗಿದ್ದಾರೆ. ಶೂಟಿಂಗ್ ಮತ್ತೆ ಪ್ರಾರಂಭಗೊಂಡಿದೆ” ಎಂದಿದ್ದಾರೆ.
ಸಂಜಯ್ ದತ್ ಕೂಡ ಈ ಬಗ್ಗೆ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿದ್ದು,”ಶೂಟಿಂಗ್ ಸಂದರ್ಭದಲ್ಲಿ ನಾನು ಗಾಯಗೊಂಡಿದ್ದೇನೆ ಎಂದು ವದಂತಿ ಹಬ್ಬಿದೆ. ದೇವರ ದಯೆಯಿಂದ ನಾನು ಆರೋಗ್ಯವಾಗಿದ್ದೇನೆ. ಸದ್ಯ ಕೇಡಿ ಸಿನಿಮಾ ಶೂಟಿಂಗ್ನಲ್ಲಿ ತೊಡಗಿಕೊಂಡಿದ್ದೇನೆ. ನನ್ನ ಪಾತ್ರದ ಚಿತ್ರೀಕರಣವನ್ನು ಚಿತ್ರತಂಡ ಬಹಳ ಜಾಗರೂಕತೆಯಿಂದ ಮಾಡುತ್ತಿದೆ. ಆತಂಕ ಪಡುವ ಅಗತ್ಯವಿಲ್ಲ” ಎಂದಿದ್ದಾರೆ.
ಪ್ರೇಮ್ ಅವಘಡ ಸಂಭವಿಸಿದ್ದು ಸತ್ಯ ಎಂದು ಟ್ವೀಟ್ ಮಾಡಿದ್ದರೆ, ಸಂಜಯ್ ದತ್, ಆ ರೀತಿಯ ಯಾವುದೇ ಘಟನೆಯೇ ನಡೆದಿಲ್ಲ ಎಂದಿದ್ದಾರೆ. ಸ್ಪಷ್ಟನೆ ನೀಡಲು ಪ್ರೇಮ್ ಬಳಸಿರುವ ಪೋಟೋ ಈಗಿನದ್ದಲ್ಲ, ಈ ಹಿಂದೆ ಸಂಜಯ್ ದತ್ ಅವರನ್ನು ಮುಂಬೈನಲ್ಲಿ ಭೇಟಿಯಾಗಿದ್ದ ಸಂದರ್ಭದ್ದಾಗಿದೆ. ಹೀಗಾಗಿ ಅವಘಡದ ಕುರಿತು ಚಿತ್ರತಂಡ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ ಎಂದು ನೆಟ್ಟಿಗರು ಅಭಿಪ್ರಾಯ ಪಡುತ್ತಿದ್ದಾರೆ.
ಧ್ರುವ ಸರ್ಜಾ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರದ ಶೂಟಿಂಗ್ ಬೆಂಗಳೂರಿನ ಮಾಗಡಿ ರಸ್ತೆಯ ಬಳಿ ಹಾಕಲಾಗಿರುವ ಬೃಹತ್ ಸೆಟ್ನಲ್ಲಿ ನಡೆಯುತ್ತಿದೆ. ಇದೇ ಸೆಟ್ನಲ್ಲಿ ಆ್ಯಕ್ಷನ್ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದಾಗ ಸಿಡಿಮದ್ದು ಸ್ಫೋಟಗೊಂಡು ಸಂಜಯ್ ದತ್ ಮುಖ ಮತ್ತು ಮೊಣಕೈ ಭಾಗಕ್ಕೆ ಪೆಟ್ಟಾಗಿದೆ ಎನ್ನಲಾಗಿತ್ತು.