ಇದು ಬಡವರ ಹಾಗೂ ಸಂವಿಧಾನದ ಉಳಿವಿಗಾಗಿ ನಡೆಯುತ್ತಿರುವ ಹೋರಾಟದ ಚುನಾವಣೆ ಎಂದು ಕಾರ್ಮಿಕ ಸಚಿವ ಸಂತೋಷ ಜಿ. ಲಾಡ್ ಹೇಳಿದರು.
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ವಿಠ್ಠಲ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. “ನಾವು ಬಿಜೆಪಿ ಹಿಂದು ಅಲ್ಲ, ನಾವು ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರ ಹಿಂದುಗಳು. ಅವರಿಗೆ ಮುಸ್ಲಿಂ ವಿರೋಧಿ ಭಾಷಣಕ್ಕಾಗಿ ಶಿವಾಜಿ ಬೇಕು. ಮರಾಠರು ನಿಜವಾದ ಶೂರರು. ಬಿಜೆಪಿಗರ ಕೈಗೊಂಬೆಗಳಲ್ಲ. ಬರೀ ಮತ ಬ್ಯಾಂಕ್ ಆಗಿ ನಮ್ಮನ್ನು ಬಳಸಿಕೊಳ್ಳಲಾಗಿದೆ. ನಮಗೆ ಯಾವ ಪ್ರಾತಿನಿಧ್ಯವನ್ನು ಅವರು ನೀಡಲಿಲ್ಲ. ಕಳೆದ ವಿಧಾನಸಭೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮೂವತ್ತಾರು ಜನ ಮರಾಠಿಗರಿಗೆ ಟಿಕೆಟ್ ನೀಡಿದೆ. ಇವರು ನಮಗೆ ಏನು ಮಾಡಿದ್ದಾರೆ” ಎಂದು ಪ್ರಶ್ನಿಸಿದರು.
“ಶಿವಾಜಿ ಮಹಾರಾಜರು ವಿಶ್ವ ನಾಯಕ. ಅದನ್ನು ಬಿಟ್ಟು ಬಿಜೆಪಿಯವರು ಬರೀ ಅವರನ್ನು ಮುಸ್ಲಿಂ ವಿರೋಧಿ ಎಂದು ಸಂಕುಚಿತವಾಗಿ ಬಿಂಬಿಸಿದ್ದಾರೆ. ಶಿವಾಜಿಯವರು ಮುಸ್ಲಿಂ ರಾಜರ ವಿರುದ್ಧ ಹೋರಾಡಿದರೇ ಹೊರತು ಮುಸ್ಲಿಂರ ವಿರೋಧಿಯಲ್ಲ. ಶಿವಾಜಿಯವರ ಸೈನ್ಯದಲ್ಲಿ ಸಾವಿರಾರು ಮುಸ್ಲಿಂ ಸೈನಿಕರಿದ್ದರು. ಇದೆಲ್ಲ ಮರೆಮಾಡಿ ಬೇರೆಯದೇ ಚಿತ್ರವನ್ನು ಆರ್ಎಸ್ಎಸ್ನವರು ದೇಶದ ಜನರಲ್ಲಿ ಬಿತ್ತಿದ್ದಾರೆ. ನಾವೆಲ್ಲ ಈಗ ಜಾಗೃತರಾಗಬೇಕಾಗಿದೆ” ಎಂದರು.
“ಮರಾಠಾ ಸಮುದಾಯದ ಏಳ್ಗೆಗಾಗಿ ತಾವು ಶ್ರಮವಹಿಸುವುದಾಗಿ ಹೇಳಿದ ಲಾಡ್, ನೀವು ಯೋಚನೆ ಮಾಡಿ ಮತ ನೀಡಿ. ಮರಾಠರನ್ನು ಬಿಜೆಪಿಯವರು ಗುತ್ತಿಗೆ ಪಡೆದಂತೆ ಆಡುತ್ತಾರೆ. ಮೋದಿಯವರ ವೈಫಲ್ಯಗಳನ್ನು ನಾವು ಲೆಕ್ಕ ಹಾಕಿ ಮತ ನೀಡಬೇಕು” ಎಂದರು.
“ಇಂದಿರಾಗಾಂಧಿಯಿಂದ ಇಲ್ಲಿಯತನಕ ಕಾಂಗ್ರೆಸ್ ಪಕ್ಷ ಜನತೆಯ ಪರವಿದೆ. ಎಲ್ಲ ಯೋಜನೆಗಳಿಂದ ರಾಜ್ಯದಲ್ಲಿ ಒಂದು ಕುಟುಂಬಕ್ಕೆ ಎಂಟು ಸಾವಿರ ರೂ.ನಷ್ಟು ಹಣ ಬರುತ್ತಿದೆ. ರೈತರ ಸಲುವಾಗಿ ನಾವು ಯಾವತ್ತೂ ಮಿಡಿದಿದ್ದೇವೆ. ಕಪ್ಪುಹಣವಿದೆ ಎಂದು ನೋಟ್ ಬ್ಯಾನ್ ಮಾಡಿ ಉಳ್ಳವರಿಗೆ ಅನುಕೂಲ ಮಾಡಿದರು. ಹಣ ಸಿಗದೇ ಬಡವರು ಸತ್ತರು” ಎಂದರು.
“ಮರಾಠ ಮಹಾರಾಜರು ಅದರಲ್ಲೂ ಶಾಹು ಮಹಾರಾಜರಿಂದ ಕ್ರಾಂತಿಯೇ ಆಗಿದೆ. ಡಾ.ಅಂಬೇಡ್ಕರ್ ಅವರನ್ನು ವಿದೇಶಕ್ಕೆ ಕಳಿಸಿದರು ಅವರು. ಇದು ಮರಾಠರ ಹೆಗ್ಗಳಿಕೆ. ದಶಕಗಳಿಂದ ನಮ್ಮನ್ನು ಬಳಸಿಕೊಂಡು ಬರೀ ‘ಶಿವಾಜಿ ಮಹಾರಾಜ್ ಕೀ ಜೈ..’ ಅನ್ನಿಸಿಕೊಂಡು ನಮ್ಮ ಓಟು ಪಡೆದರು. ಹಿಂದೂ ಹಿಂದೂ ಎಂದು ನಾವು ಜೈಲಿಗೆ ಬೀಳುತ್ತೇವೆ. ಬಿಜೆಪಿ ನಾಯಕರ ಮಕ್ಕಳು ವಿದೇಶದಲ್ಲಿ ಓದುತ್ತಾರೆ” ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು ಮಾತನಾಡಿ, “ಇದು ನಿರ್ಣಾಯಕ ಚುನಾವಣೆ. ಈ ಸಲ ಬದಲಾವಣೆ ಆಗಬೇಕು. ಸತತ ಮೂರು ಬಾರಿ ಆರಿಸಿ ಬಂದು ಯಾವೊಂದು ಮುತುವರ್ಜಿ ವಹಿಸದ ಜಿಗಜಿಣಗಿಯವರನ್ನು ನೀವೆಲ್ಲ ತಿರಸ್ಕರಿಸಿ” ಎಂದು ಕೋರಿದರು.