- 2023ರ ಫೆಬ್ರವರಿ 17ರಂದು ಬಜೆಟ್ನಲ್ಲಿ ಘೋಷಣೆ ಮಾಡಿದ್ದ ಸಿಎಂ
- ₹1 ಕೋಟಿ ಮೊತ್ತದ ಕಾಮಗಾರಿಗಳಲ್ಲಿ ಶೇ 24ರಷ್ಟು ಮೀಸಲಾತಿ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ನೀಡಲಾಗುವ ಕಾಮಗಾರಿಗಳ ಗುತ್ತಿಗೆ ಮೊತ್ತವನ್ನು ₹50 ಲಕ್ಷದಿಂದ ₹1 ಕೋಟಿಗೆ ವಿಸ್ತರಿಸಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ಎಸ್ಸಿ/ಎಸ್ಟಿ ಗುತ್ತಿಗೆ ಮೀಸಲಾತಿ ಪ್ರಮಾಣವನ್ನು ₹50 ಲಕ್ಷ ದಿಂದ ₹1 ಕೋಟಿಗೆ ಹೆಚ್ಚಿಸಬೇಕು ಎಂದು 2018ರಲ್ಲಿಯೇ ಘೋಷಣೆ ಮಾಡಲಾಗಿತ್ತು. ಅನುಷ್ಠಾನಗೊಳ್ಳುವುದು ಬಾಕಿ ಇತ್ತು. 2023ರ ಫೆಬ್ರವರಿ 17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ನಲ್ಲಿ ಈ ಅಂಶವನ್ನು ಪುನಃ ಘೋಷಿಸಿದ್ದರು.
ಗುತ್ತಿಗೆಯ ಮೀಸಲು ಮೊತ್ತ ಹೆಚ್ಚಳದ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ರಾಜ್ಯ ಎಸ್ಸಿ/ಎಸ್ಟಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಎನ್ ಮಹದೇವ ಸ್ವಾಮಿ, “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ₹50 ಲಕ್ಷದವರೆಗಿನ ಸಣ್ಣ ಕಾಮಗಾರಿಗಳಲ್ಲಿ ಶೇ.24ರವರೆಗೆ ಮೀಸಲಾತಿ ನಿಗದಿ ಮತ್ತು ಗುತ್ತಿಗೆ ಮೊತ್ತವನ್ನು ₹1 ಕೋಟಿಗೆ ಹೆಚ್ಚಳ ಮಾಡುವುದಾಗಿ ಘೋಷಿಸಿರುವುದನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದೆವು” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾಸನ | ಮೂಲ ಸೌಕರ್ಯಗಳಿಗೆ ಆಗ್ರಹ; ಚುನಾವಣೆ ಬಹಿಷ್ಕಾರಕ್ಕೆ…
“ಬಹಳಷ್ಟು ಬಾರಿ ಸರ್ಕಾರಕ್ಕೆ ಮನವಿ ಮಾಡುವ ಜೊತೆಗೆ ಹೋರಾಟಗಳ ಮೂಲಕ ಗಮನ ಸೆಳೆದಿದ್ದೇವು. 2023ರ ಬಜೆಟ್ನಲ್ಲಿ ಪುನಃ ಅದೇ ವಿಚಾರವನ್ನು ಘೋಷಣೆ ಮಾಡಿದ್ದರು. ಚುನಾವಣೆ ದಿನಾಂಕ ಪ್ರಕಟವಾಗುವ ಮೊದಲೇ ಸುಗ್ರೀವಾಜ್ಞೆ ಹೊರಡಿಸಬೇಕು ಎಂಬುದು ನಮ್ಮ ಆಗ್ರಹವಾಗಿತ್ತು. ಅದರಂತೆಯೇ ಇಂದು ಆದೇಶ ಮಾಡಲಾಗಿದೆ” ಎಂದು ಸಂತಷ ವ್ಯಕ್ತಪಡಿಸಿದರು.