ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಎಲ್ಲ ಜಾತ್ಯತೀತ, ಪ್ರಜಾಸತ್ತಾತ್ಮಕ ಪಕ್ಷಗಳು ಒಗ್ಗೂಡಿವೆಯೇ ಹೊರತು, ಅಧಿಕಾರಕ್ಕಾಗಿ ಅಲ್ಲ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಪ್ರಧಾನ ಕಾರ್ಯದರ್ಶಿ ಡಿ ರಾಜಾ ಹೇಳಿದ್ದಾರೆ.
ಜಾರ್ಖಂಡ್ನಲ್ಲಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು ವಿರೋಧ ಪಕ್ಷಗಳ ಮೈತ್ರಿ ಬಗ್ಗೆ ಮಾತನಾಡಿದ್ದಾರೆ. “ದೇಶದಲ್ಲಿ ಪ್ರಸ್ತುತ ಪರಿಸ್ಥಿತಿ ‘ಗಂಭೀರ’ವಾಗಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಕೇಸರಿ ಪಕ್ಷವನ್ನು ಬೇರುಸಹಿತ ಕಿತ್ತೊಗೆಯುವ ಅಗತ್ಯವಿದೆ” ಎಂದು ಹೇಳಿದ್ದಾರೆ.
“ಬಿಜೆಪಿಯನ್ನು ಸೋಲಿಸಲು ಎಲ್ಲರೂ ಒಗ್ಗೂಡಬೇಕು ಎಂದು ಜಾತ್ಯತೀತ ಪ್ರಜಾಸತ್ತಾತ್ಮಕ ಪಕ್ಷಗಳು ಅಭಿಪ್ರಾಯಪಟ್ಟಿವೆ. ನಮ್ಮೆಲ್ಲ ಉದ್ದೇಶ ರಾಜಕೀಯ ಅಧಿಕಾರ ಪಡೆಯುವುದಲ್ಲ. ಸಂವಿಧಾನ, ಪ್ರಜಾಪ್ರಭುತ್ವ, ರಾಷ್ಟ್ರ ಮತ್ತು ಅದರ ಭವಿಷ್ಯವನ್ನು ರಕ್ಷಿಸುವುದು” ಎಂದು ಹೇಳಿದ್ದಾರೆ.
“ಒಕ್ಕೂಟದ ನಾಯಕ ಯಾರು ಎಂಬುದು ಸಮಸ್ಯೆಯಲ್ಲ. ಪಕ್ಷಗಳು ಸಾಕಷ್ಟು ಪ್ರಬುದ್ಧವಾಗಿರುವುದರಿಂದ ಎಲ್ಲವನ್ನೂ ಚರ್ಚಿಸಿ ಸಾಮೂಹಿಕವಾಗಿ ನಿರ್ಧರಿಸಬಹುದು. ಐಕ್ಯರಂಗ ರಚನೆಯಾದಾಗ ಮತ್ತು ಗೆದ್ದ ನಂತರ ನಾಯಕತ್ವದ ಪ್ರಶ್ನೆಗಳನ್ನು ಈ ಹಿಂದೆಯೂ ಎದುರಿಸಿದ್ದೇವೆ. ಅಂತಹ ಸಂದರ್ಭಗಳಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಂಡಿದ್ದೇವೆ. ಜಾತ್ಯತೀತ ಪ್ರಜಾಸತ್ತಾತ್ಮಕ ಪಕ್ಷಗಳ ಒಗ್ಗಟ್ಟಿಗೆ ಯಾವುದೇ ಪೂರ್ವಾಪೇಕ್ಷಿತಗಳಿಲ್ಲ” ಎಂದು ರಾಜಾ ತಿಳಿಸಿದ್ದಾರೆ.
“ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಆರ್ಎಸ್ಎಸ್ ಆಕ್ರಮಣಕಾರಿಯಾಗಿ ವರ್ತಿಸುತ್ತಿದೆ. ತನ್ನ ಅಜೆಂಡಾಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದೆ. ದೇಶದಲ್ಲಿ ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಇತರರ ಮೇಲೆ ದಾಳಿಗಳು ಹೆಚ್ಚಾಗಿವೆ. ಸಾರ್ವಜನಿಕ ವಲಯ ಕಿತ್ತುಹಾಕಿ ಖಾಸಗೀಕರಣಗೊಳಿಸಲಾಗಿದೆ. ಸರ್ಕಾರವು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗಾಗಿ ಬಹಿರಂಗವಾಗಿಯೇ ಕೆಲಸ ಮಾಡುತ್ತಿದೆ” ಎಂದು ರಾಜಾ ಆರೋಪಿಸಿದ್ದಾರೆ.
“ಕಳೆದ ಸಂಸತ್ ಅಧಿವೇಶನದಲ್ಲಿ ಅದಾನಿ ವಿಷಯ ಪ್ರಸ್ತಾಪಿಸಲು ಪ್ರತಿಪಕ್ಷಗಳಿಗೆ ಅವಕಾಶ ನೀಡಿರಲಿಲ್ಲ. ಈ ಸರ್ಕಾರವು ದುರಹಂಕಾರಿಯಾಗಿದೆ. ಇದು ವಿರೋಧ ಪಕ್ಷಗಳಿಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಲು ಅವಕಾಶ ನೀಡುವುದಿಲ್ಲ” ಎಂದು ಅವರು ಹೇಳಿದರು.
ಮಣಿಪುರದಲ್ಲಿ ಮೇ 3ರಿಂದ ನಡೆದ ಜನಾಂಗೀಯ ಹಿಂಸಾಚಾರದಲ್ಲಿ 100ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ‘ಮಣಿಪುರ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಡಬಲ್ ಇಂಜಿನ್ ಬಿಜೆಪಿ ಸರ್ಕಾರಗಳು ದೊಡ್ಡ ಪ್ರಗತಿ ಸಾಧಿಸುತ್ತಿವೆ’ ಎಂದು ಮೋದಿ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಅಲ್ಲಿನ ಪರಿಸ್ಥಿತಿಯನ್ನು ನೋಡಿ. ಘಟನೆ ಬಗ್ಗೆ ಪ್ರಧಾನಿ ಮೋದಿ ಮೌನ ತಾಳಿಸಿದ್ದಾರೆ” ಎಂದು ಕಿಡಿಕಾರಿದ್ದಾರೆ.
“ದೇಶಕ್ಕೆ ಕೀರ್ತಿ ತಂದ ಕುಸ್ತಿಪಟುಗಳಿಗೆ ಏನಾಗುತ್ತಿದೆ. ಅವರ ಬಗ್ಗೆ ಮೋದಿ ಒಂದು ಮಾತನ್ನೂ ಆಡಿಲ್ಲ. ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದೆ. ದೇಶಾದ್ಯಂತ ಬಿಜೆಪಿ ವಿರುದ್ಧ ಅಸಮಾಧಾನ ಬೆಳೆಯುತ್ತಿದೆ” ಎಂದು ಅವರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಉತ್ತರಾಖಂಡದಲ್ಲಿ ‘ಕೋಮುವಾದಿ’ ಮಹಾಪಂಚಾಯತ್; ಅನುಮತಿ ನೀಡದಂತೆ ನಿವೃತ್ತ ಅಧಿಕಾರಿಗಳ ಒತ್ತಾಯ
“ಜಾರ್ಖಂಡ್, ದೆಹಲಿ ಮತ್ತು ತಮಿಳುನಾಡಿನಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರಗಳಿಗೆ ಕಿರುಕುಳ ನೀಡಲು ಬಿಜೆಪಿ ಎಲ್ಲ ಅಸ್ತ್ರಗಳನ್ನು ಬಳಸುತ್ತಿದೆ. ಮೋದಿ ಮತ್ತು ಅವರ ಸರ್ಕಾರವು ವಿರೋಧ ಪಕ್ಷಗಳು ಮತ್ತು ಬಿಜೆಪಿಯೇತರ ಸರ್ಕಾರಗಳನ್ನು ಬೆದರಿಸಲು ಪ್ರಯತ್ನಿಸುತ್ತಿದೆ. ಅವರು ಇಂತಹ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಜನರನ್ನು ವಂಚಿಸಬಹುದೆಂದು ಭಾವಿಸಿದ್ದಾರೆ. ಆದರೆ, ಜನರು ಪ್ರಬುದ್ಧರಾಗಿದ್ದಾರೆ. ಮೋದಿ ಸರ್ಕಾರ ದೇಶಕ್ಕೆ ಏನು ಮಾಡಿದೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಹಾರದ ಪಾಟ್ನಾದಲ್ಲಿ ಜೂನ್ 23 ರಂದು ನಡೆಯಲಿರುವ ವಿರೋಧ ಪಕ್ಷಗಳ ಸಭೆಯಲ್ಲಿ ರಾಜಾ ಅವರು ಸಿಪಿಐಅನ್ನು ಪ್ರತಿನಿಧಿಸಲಿದ್ದಾರೆ. ಸಭೆಯಲ್ಲಿ ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ವಿವಿಧ ಪಕ್ಷಗಳ ಉನ್ನತ ನಾಯಕರು ಭಾಗವಹಿಸಲಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ತಂತ್ರವನ್ನು ರೂಪಿಸಲಿದ್ದಾರೆ.