ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗ್ಯಾರಂಟಿ ಯೋಜನೆಗಳಿಂದ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದಿದ್ದಾರೆ. ಈ ಹೇಳಿಕೆಗೆ ಏನರ್ಥ? ಎಂದು ಶಿವಮೊಗ್ಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲರವರು ಪ್ರಶ್ನಿಸಿದ್ದಾರೆ.
ಶಿವಮೊಗ್ಗದಲ್ಲಿ ಪತ್ರಿಕಾ ಹೇಳಿನೀಡಿರುವ ಅವರು, ಎಚ್.ಡಿ. ಕುಮಾರಸ್ವಾಮಿ ಮಾತಿನಿಂದ ಗ್ಯಾರಂಟಿ ಯೋಜನೆಯ ಸೌಲಭ್ಯ ಪಡೆಯುತ್ತಿರುವ ತಾಯಂದಿರಿಗೆ, ಅಕ್ಕ-ತಂಗಿಯರಿಗೆ ಅವಮಾನ ಮಾಡಿದ್ದಾರೆ. ಮಹಿಳೆಯರಿಗೆ ಅವಮಾನ ಮಾಡಿರುವ ಕುಮಾರಸ್ವಾಮಿ ತಮ್ಮ ಹೇಳಿಕೆಗೆ ಕ್ಷಮೆಗೆ ಅರ್ಹವಲ್ಲ ಶಿಕ್ಷೆಗೆ ಅರ್ಹವಾಗಿದೆ ಎಂದರು.
ವಿವಾದಿತ ಹೇಳಿಕೆಗೆ ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಿ.ಎಸ್. ಚಂದ್ರಭೂಪಾಲರವರು ಮಹಿಳೆಯರಿಗೆ ಕುಮಾರಸ್ವಾಮಿಯಿಂದ ಆಗಿರುವ ಬಹಿರಂಗ ಅವಮಾನ ವಾಪಸ್ಸು ಹೋಗುತ್ತದೆಯೇ? ಎಂದು ಪ್ರಶ್ನಿಸಿ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿರುವ ಕುಮಾರಸ್ವಾಮಿ ವಿರುದ್ಧ ಮಹಿಳಾ ಆಯೋಗ ಕಠಿಣ ಕ್ರಮ ಕೈಗೊಂಡು, ಕಠಿಣ ಶಿಕ್ಷೆ ವಿಧಿಸಲು ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಪಡಿಸಿದ್ದಾರೆ.
ಜನರು ಗ್ಯಾರಂಟಿ ಯೋಜನೆಗಳ ಮೇಲಿನ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಆರೋಪಿಸಿರುವುದು ಗಮನಿಸಿದರೆ, ಜನರ ಮನಸ್ಥಿತಿ ಅರ್ಥ ಮಾಡಿಕೊಂಡಿಲ್ಲ ಎಂದರು.
ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಅನುಷ್ಠಾನಗೊಳಿಸಲು ಕಾಂಗ್ರೆಸ್ ಜನರ ಭಾವನೆ, ನಂಬಿಕೆಗಳೊಂದಿಗೆ ಆಟವಾಡಿಲ್ಲ. ಜನತೆಗೆ ನೀಡಿರುವ ಐದು ಗ್ಯಾರಂಟಿ ಯೋಜನೆಗಳು ಜನತೆಯ ಕಣ್ಣಿಗೆ ಸ್ಪಷ್ಟವಾಗಿ ಕಾಣಿಸುತ್ತದೆ. ಸುಳ್ಳುಗಳೇ ನಮ್ಮ ಸಾಧನೆ ಎಂದು ತಿಳಿದುಕೊಂಡಿರುವ ಬಿ.ವೈ.ರಾಘವೇಂದ್ರರವರು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಅಂಕಿ-ಅಂಶಗಳನ್ನು ಕಣ್ಣು ತೆರೆದು ಪ್ರಾಮಾಣಿಕವಾಗಿ ಗಮನಿಸಲಿ ಎಂದು ಸಿ.ಎಸ್.ಚಂದ್ರಭೂಪಾಲರವರು ಆಗ್ರಹಿಸಿದರು.
ಯಾವುದೇ ಮಾನದಂಡ ಇಲ್ಲದೇ ಯಾವುದೇ ತತ್ವ-ಸಿದ್ಧಾಂತಗಳಿಲ್ಲದೇ ರಾಜಕೀಯ ಮೈತ್ರಿ ಮಾಡಿಕೊಂಡಿರುವ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿ.ವೈ. ರಾಘವೇಂದ್ರ ಗ್ಯಾರಂಟಿ ಯೋಜನೆಗಳ ಬಗ್ಗೆ ಚುನಾವಣೆ ಗಿಮಿಕ್ಗಾಗಿ ಮಾತನಾಡುವುದು ಬೇಕಾಗಿಲ್ಲ. ಗ್ಯಾರಂಟಿ ಯೋಜನೆಯ ಸೌಲಭ್ಯ ಪಡೆದಿರುವ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಗ್ಯಾರಂಟಿ ಯೋಜನೆಯ ಲಾಭ ಬಿಟ್ಟುಕೊಡಲು ಬಹಿರಂಗವಾಗಿ ಕರೆ ನೀಡಲಿ ಎಂದು ಸಿ.ಎಸ್. ಚಂದ್ರಭೂಪಾಲ ರವರು ಒತ್ತಾಯಿಸಿದ್ದಾರೆ.