ಶರಾವತಿ ಜಲ ವಿದ್ಯುತ್ ಯೋಜನೆಯು ಕರ್ನಾಟಕದ ಒಟ್ಟು ವಿದ್ಯುತ್ ಉತ್ಪಾದನೆಯ ಶೇ.51ರಷ್ಟು ಪೂರೈಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸೋಲಾರ್ ಯೋಜನೆಗಳಿಂದ ಸ್ವಲ್ಪ ಪ್ರಮಾಣ ಕಡಿಮೆ ಆಗಿದೆ. ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹಾರ ಮಾಡಲಿಲ್ಲವಾದಲ್ಲಿ ಈ ಬಾರಿ ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡಲಾಗುವುದೆಂಬ ಮಾತುಗಳು ಕೇಳಿ ಬರುತ್ತಿವೆ.
1959 ರಿಂದ 1960ರ ಪ್ರಾರಂಭದಲ್ಲಿ ಸಾಗರ ಹೊಸನಗರ ತಾಲೂಕಿನ ಸುಮಾರು 1ಲಕ್ಷ ಎಕರೆ ಜಮೀನು ಮುಳುಗಡೆ ಆಗಿದ್ದು, ಭೂಸ್ವಾಧಿನ ಆಗಿದೆ. ಮುಳುಗಡೆ ಆದ ಸಂದರ್ಭದಲ್ಲಿ ಸಾಗರ ಹೊಸನಗರ ತಾಲೂಕಿನ ಹಲವಾರು ರೈತರಿಗೆ ನೋಟಿಸ್ ನೀಡಿರುವುದೂ ಕೂಡ ಕಂಡಬಂದಿದೆ.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಸುಮಾರು ವರ್ಷಗಳಿಂದ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಇದ್ದು, ಕಾಗೋಡು ತಿಮ್ಮಪ್ಪರವರು ಕಂದಾಯ ಮಂತ್ರಿ ಆಗಿದ್ದ ಸಮಯದಲ್ಲಿ ಹಕ್ಕುಪತ್ರ ಕೊಡಿಸುವಂತಹ ಕೆಲಸ ನಡೆದಿತ್ತು. ಮತ್ತೆ ಬಿಜೆಪಿ ಆಡಳಿತಕ್ಕೆ ಬಂದಾಗ ಅವರ ಅವಧಿಯಲ್ಲಿ ಸಂತ್ರಸ್ತರಿಗೆ ನೋಟಿಸ್ ನೀಡಿ ಒಕ್ಕಲೆಬ್ಬಿಸಿ ಹಕ್ಕುಪತ್ರ ಹಿಂಪಡೆಯುವ ಕೆಲಸವಾಯಿತು” ಎಂದು ಹೇಳಿದರು.
“ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಕುರಿತು ಕಾನೂನು ಬದ್ದವಾಗಿ ನ್ಯಾಯಯುತವಾಗಿ ಹೋರಾಟ ಮಾಡಬೇಕಾಗಿರುವುದರಿಂದ, ಪ್ರಸ್ತುತ ಅರಣ್ಯ ಮಂತ್ರಿ ಈಶ್ವರ್ ಖಂಡ್ರೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹತ್ತಿರ ಮಾತನಾಡಿ, ನಾನು ಕೂಡ ಜವಾಬ್ದಾರಿ ವಹಿಸಿಕೊಂಡು ಐಎ ಹಾಕಬೇಕು. ಬಳಿಕ ಅವರಿಗೊಂದು ರಕ್ಷಣೆ ಸಿಕ್ಕಂತಾಗುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ಕಾನೂನು ಪ್ರಕಾರ ಅವರಿಗೆ ಹಕ್ಕುಪತ್ರ ಕೊಡಲೇಬೇಕು. ಕಾನೂನಾತ್ಮಕ ತಿದ್ದುಪಡಿ ಮಾಡಿ ಅವರಿಗೆ ಸಹಾಯವಗುವಂತೆ ಮಾಡುತ್ತೇನೆ. ಈ ಕಡೆ ಮಲೆನಾಡ ಭಾಗದಲ್ಲಿ ಯಾರು ಅರಣ್ಯ ಭೂಮಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ ಅವರಿಗೂ ರಕ್ಷಣೆ ಕೊಡಬೇಕು. ಇದನ್ನು ನಾವು ಮಾಡುತ್ತೇವೆ” ಎಂದು ಭರವಸೆ ನೀಡಿದರು.
ಇದನ್ನೂ ಓದಿದ್ದೀರಾ? ಶಿವಮೊಗ್ಗ | ಪರಿಹರಿಯದ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ; ಲೋಕಸಭಾ ಚುನಾವಣೆ ಬಹಿಷ್ಕಾರದ ಎಚ್ಚರಿಕೆ
“ರಾಜ್ಯ ಸರ್ಕಾರದ ಇತಿಮಿತಿಯಲ್ಲಿ ಮತ್ತು ಕಾನೂನಿನ ತೊಡಕು ಅದೇ ರೀತಿ ಕೇಂದ್ರ ಸರ್ಕಾರವು ನಮ್ಮ ರೈತರ ಪರವಾಗಿ ನಿರ್ಧಾರ ತೆಗೆದುಕೊಂಡರೆ ಅನುಕೂಲವಾಗುತ್ತದೆ. ನಾವೂ ಕೂಡ ಮಾತು ಕೊಟ್ಟಿದ್ದೇವೆ. ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಕೂಡ ಮಾತು ಕೊಟ್ಟಿದ್ದಾರೆ, ರೈತರ ಸಮಸ್ಯೆಗೆ ಸ್ಪಂದಿಸಿ ಹಕ್ಕು ಪತ್ರ ನೀಡಿವುದು, ಹಕ್ಕು ನೀಡುವುದು ಮತ್ತು ಒಕ್ಕಲೆಬ್ಬಿಸದಂತೆ ರಕ್ಷಣೆ ನೀಡುವುದು ನಮ್ಮ ಜವಾಬ್ದಾರಿ. ಕಾನುನಾತ್ಮಕವಾಗಿ ಸಲಹೆ ಪಡೆದು ತ್ವರಿತವಾಗಿ ಮೊದಲ ಹಂತದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸಂಪೂರ್ಣವಾಗಿ ಹಕ್ಕು ಪತ್ರ ಕೊಡಿಸುವ ಕೆಲಸ ಮಾಡುತ್ತೇವೆ” ಎಂದು ಹೇಳಿದರು.