ಶಿರಸಿ ಮಲೆನಾಡು ಆದರೆ, ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ. ಈ ವರ್ಷ ಬೇಸಿಗೆಗೂ ಮೊದಲೇ ಕುಡಿಯಲು ನೀರಿಲ್ಲ. ಇನ್ನು ಬೇಸಿಗೆ ಕಳೆಯುವುದು ಹೇಗೆ ಎಂಬುದು ಇಲ್ಲಿನ ಗ್ರಾಮದ ಜನರ ಆತಂಕ.
ತಾಲೂಕಿನ ದೊಡ್ನಳ್ಳಿ ಗ್ರಾಮದ ಲಂಡಕನಗಳ್ಳಿ, ಬಚಗಾಂವ್ ಭಾಗದಲ್ಲಿ ಈಗಾಗಲೇ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಅಲ್ಲದೇ ಐದು ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಅಲ್ಲದೆ, ಸಮರ್ಪಕವಾದ ರಸ್ತೆಗಳೂ ಇಲ್ಲ.
ಕುಡಿಯುವ ನೀರಿನ ಸಮಸ್ಯೆ ಇದೆ. ಅಗತ್ಯವಿದ್ದಾಗ ನೀರು ಪೂರೈಸುವಂತೆ ಸ್ಥಳೀಯರು ಪಂಚಾಯಿತಿಗೆ ಕೋರಿದ್ದಾರೆ. ಆದರೆ, ಪಂಚಾಯಿತಿ ಪರ್ಯಾಯ ವ್ಯವಸ್ಥೆ ಬಗ್ಗೆ ಈವರೆಗೆ ಕ್ರಮವಹಿಸಿಲ್ಲ. ಈ ಭಾಗದಲ್ಲಿ ರಸ್ತೆಯ ಬೇಡಿಕೆ ಹಲವು ವರ್ಷಗಳಿಂದ ಇದ್ದರೂ ಈವರೆಗೆ ಈಡೇರಿಲ್ಲ ಎಂದು ದೂರುತ್ತಾರೆ ಗ್ರಾಮಸ್ಥರು.
ಬಚಗಾಂವ ಗ್ರಾಮದ ಕಾಳೆಹೊಂಡ, ಹಿಟ್ನಗದ್ದೆ ಭಾಗದಲ್ಲಿ ಅಲ್ಪಸಂಖ್ಯಾತ ಸಮುದಾಯದವರ ಸಂಖ್ಯೆ ಹೆಚ್ಚಿದ್ದು, ಕುಡಿಯುವ ನೀರಿನ ಸಮಸ್ಯೆ ಇದೆ. ಸರಿಯಾದ ರಸ್ತೆಗಳಿಲ್ಲ. ಇತ್ತೀಚೆಗೆ ನಗರ ಸಮೀಪದ ಲಾಲಗೌಡ ನಗರದಲ್ಲಿ ಕೊಳವೆಬಾವಿ ಕೊರೆದು ನೀರು ಪೂರೈಸುತ್ತಿದ್ದರೂ, ಅದು ಕೆಲವು ಮನೆಗಳಿಗೆ ಮಾತ್ರ ಸೀಮಿತವಾಗಿದೆ.
ಈ ಭಾಗದಲ್ಲಿ ಹಂದಿಗೊಲ್ಲರು ವಾಸವಿದ್ದು, ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದಾರೆ. ಅವರ ಜೀವನ ನಿರ್ವಹಣೆಗೆ ಅನುಕೂಲ ಕಲ್ಪಿಸುವ ವ್ಯವಸ್ಥೆ ಆಗಬೇಕು ಎಂದು ಆಗ್ರಹಿಸುತ್ತಿದ್ದಾರೆ.