ಶಿವಸೇನೆ (ಯುಬಿಟಿ) ಜಮ್ಮು ಮತ್ತು ಕಾಶ್ಮೀರ ಘಟಕವು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಉಧಮ್ಪುರ ಮತ್ತು ಜಮ್ಮು ಕ್ಷೇತ್ರದಿಂದ ಕಣಕ್ಕಿಳಿದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬೆಲ ವ್ಯಕ್ತಪಡಿಸಿದೆ. ಉಧಮ್ಪುರದಲ್ಲಿ ಏಪ್ರಿಲ್ 19ರಂದು, ಜಮ್ಮುವಿನಲ್ಲಿ ಏಪ್ರಿಲ್ 26ರಂದು ಚುನಾವಣೆ ನಡೆಯಲಿದೆ.
ಶಿವಸೇನೆ (ಉದ್ಧವ್ ಬಾಲ್ಸಾಬ್ ಟಾಕ್ರೆ) ಜಮ್ಮು ಮತ್ತು ಕಾಶ್ಮೀರ ಘಟಕದ ಅಧ್ಯಕ್ಷ ಮನೀಶ್ ಸಹಾನಿ, “ಕೇಂದ್ರಾಡಳಿತ ಪ್ರದೇಶದಲ್ಲಿ ಪಕ್ಷದ ನಾಯಕರಿಗೆ ಉತ್ತಮ ಕಾರ್ಯತಂತ್ರದಡಿಯಲ್ಲಿ ಭದ್ರತೆಯನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ನಾಯಕರುಗಳ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಹೈಕಮಾಂಡ್ ಈ ಪ್ರದೇಶದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದಂತೆ ತಿಳಿಸಿದೆ. ನಾವು ಈ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡುತ್ತೇವೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಬಿಜೆಪಿ ಟಿಕೆಟ್ ಕೈತಪ್ಪುತ್ತಿದ್ದಂತೆ ಕಾಂಗ್ರೆಸ್ ಸೇರಲು ವರುಣ್ ಗಾಂಧಿಗೆ ಆಹ್ವಾನ
“ಉಧಮ್ಪುರ ಮತ್ತು ಜಮ್ಮು ಕ್ಷೇತ್ರದಿಂದ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ಮತ್ತು ಅವರಿಗೆ ಮತ ಹಾಕಲು ನಾವು ನಮ್ಮ ಕಾರ್ಯಕರ್ತರಿಗೆ, ಬೆಂಬಲಿಗರಿಗೆ, ಜಿಲ್ಲಾ ಘಟಕಕ್ಕೆ ತಿಳಿಸಿದ್ದೇವೆ” ಎಂದರು.
“ಜಮ್ಮು ಮತ್ತು ಕಾಶ್ಮೀರದ ಜನರ ಹಕ್ಕುಗಳನ್ನು ಮತ್ತೆ ಪಡೆಯಲು ನಮ್ಮ ಪಕ್ಷವು ಧ್ವನಿ ಎತ್ತುವುದನ್ನು ಮುಂದುವರಿಸುತ್ತದೆ. ರಾಜ್ಯತ್ವದ ಮರುಸ್ಥಾಪನೆ, ಕಾಶ್ಮೀರಿ ಪಂಡಿತರ ಸುರಕ್ಷಿತ ವಾಪಸಾತಿ ಮತ್ತು ಶಾಂತಿಯುತ ವಾತಾವರಣದ ಭರವಸೆಗಳನ್ನು ಬಿಜೆಪಿ ನೇತೃತ್ವದ ಕೇಂದ್ರಕ್ಕೆ ನೆನಪಿಸುತ್ತಲೇ ಇರುತ್ತದೆ” ಎಂದು ಮನೀಶ್ ಸಹಾನಿ ಹೇಳಿದರು.