- ಅಡ್ಜೆಸ್ಟ್ಮೆಂಟ್ ರಾಜಕಾರಣ ಬಿಟ್ಟು ನ್ಯಾಯಾಂಗ ಆಯೋಗ ರಚಿಸುವ ಮೂಲಕ ತನಿಖೆ ನಡೆಸಲಿ
- ಈ ಹಿಂದಿನ ಅನೇಕ ಎಸ್ಐಟಿ ತನಿಖೆಗಳು ಈಗಾಗಲೇ ಹಳ್ಳ ಹಿಡಿದಿವೆ : ಪೃಥ್ವಿ ರೆಡ್ಡಿ
“ರಾಜ್ಯ ಕಾಂಗ್ರೆಸ್ ಸರ್ಕಾರ ಈ ಹಿಂದಿನ ಬಿಜೆಪಿ ಸರ್ಕಾರದ ಸಾವಿರಾರು ಕೋಟಿ ಭ್ರಷ್ಟಾಚಾರ ಹಗರಣಗಳ ತನಿಖೆಗಾಗಿ ವಿಶೇಷ ತನಿಖಾ ತಂಡ ನೇಮಿಸಿರುವುದು ಕೇವಲ ವಿರೋಧ ಪಕ್ಷಗಳ ಬಾಯಿ ಮುಚ್ಚಿಸಿ, ಬ್ಲಾಕ್ ಮೇಲ್ ತಂತ್ರಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆಯೇ ಹೆಚ್ಚಾಗಿದೆ” ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮುಖ್ಯಮಂತ್ರಿಗಳಿಗೆ ತಮ್ಮ ಎಲ್ಲ ಗ್ಯಾರಂಟಿಗಳನ್ನು ಈಡೇರಿಸಲು ಭ್ರಷ್ಟಮುಕ್ತ ಆಡಳಿತದಿಂದ ಮಾತ್ರ ಸಾಧ್ಯ ಎಂಬ ಇಚ್ಛೆ ಇದ್ದಲ್ಲಿ ಸರ್ವೋಚ್ಚ ಹಾಗೂ ಉಚ್ಚನ್ಯಾಯಾಲಯಗಳ ಹಾಲಿ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ಆಯೋಗಗಳನ್ನು ರಚಿಸಿ ತನಿಖೆ ನಡೆಸಲಿ” ಎಂದರು.
“ಬಿಟ್ ಕಾಯಿನ್, 40% ಪರ್ಸೆಂಟ್, ಕೋವಿಡ್ ಕಾಲದ ಖರೀದಿ, ನೇಮಕಾತಿ ಹಾಗೂ ವರ್ಗಾವಣೆ, ಡಿ- ನೋಟಿಫಿಕೇಶನ್ ಹಗರಣಗಳ ತನಿಖೆಗಾಗಿ ಸರ್ಕಾರದ ಅಡಿಯಲ್ಲಿನ ಪೊಲೀಸ್ ಅಧಿಕಾರಿಗಳಿಂದ ಯಾವುದೇ ನ್ಯಾಯ ಸಿಗುವುದಿಲ್ಲ. ಇವರು ತಮ್ಮದೇ ಇಲಾಖೆಯ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸುವ ಬದ್ಧತೆ ಎಂದಿಗೂ ಸಾಧ್ಯವಿರುವುದಿಲ್ಲ” ಎಂದರು.
“ಸರ್ಕಾರದ ಈ ಕ್ರಮ ರಾಜ್ಯದ ಜನತೆಯ ಸಾವಿರಾರು ಕೋಟಿ ತೆರಿಗೆ ಹಣವನ್ನು ಲೂಟಿ ಮಾಡಿದ ಹಗರಣಗಳನ್ನು ತಿಪ್ಪೇ ಸಾರಿಸಿ, ಮುಚ್ಚಿ ಹಾಕುವ ಪ್ರಕ್ರಿಯೆ ಹೊರತು ಬೇರೇನೂ ಅಲ್ಲ. ಇವುಗಳಿಂದ ವಿಪಕ್ಷಗಳ ಬಾಯಿಮುಚ್ಚಿಸಬಹುದೇ ಹೊರತು, ರಾಜ್ಯದ ಜನತೆಗೆ ಯಾವುದೇ ನ್ಯಾಯವನ್ನು ಕೊಡಿಸಲು ಸಾಧ್ಯವಿಲ್ಲ. ಈ ಹಿಂದಿನ ಅನೇಕ ಎಸ್ಐಟಿ ತನಿಖೆಗಳು ಈಗಾಗಲೇ ಹಳ್ಳ ಹಿಡಿದಿವೆ” ಎಂದು ಪೃಥ್ವಿ ರೆಡ್ಡಿ ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸೊಪ್ಪು ಮಾರಾಟ ಮಾಡುತ್ತಿದ್ದ ವೃದ್ಧೆಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ದುಷ್ಕರ್ಮಿಗಳು
“ಕೇವಲ ನ್ಯಾಯಾಂಗ ಆಯೋಗದ ಮುಂದೆ ಮಾತ್ರ ನಮ್ಮಲ್ಲಿರುವ ದಾಖಲೆ ಹಾಗೂ ಸಾಕ್ಷಿಗಳನ್ನು ಒದಗಿಸುತ್ತೇವೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅನೇಕ ಬಾರಿ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇದು ಗೊತ್ತಿದೆ. ಇವರಿಗೆ ರಾಜ್ಯವನ್ನು ಭ್ರಷ್ಟಮುಕ್ತ ಮಾಡಲು ನಿಜಕ್ಕೂ ಮನಸ್ಸಿದ್ದಲ್ಲಿ ಈ ಕೂಡಲೇ ಅಡ್ಜೆಸ್ಟ್ ಮೆಂಟ್ ರಾಜಕಾರಣವನ್ನು ಬಿಟ್ಟು ನ್ಯಾಯಾಂಗ ಆಯೋಗಗಳನ್ನು ರಚಿಸುವ ಮೂಲಕ ತನಿಖೆ ಮಾಡಿಸಲಿ” ಎಂದು ಪೃಥ್ವಿ ರೆಡ್ಡಿ ಸವಾಲು ಎಸೆದರು.