ಜಾತಿ ಜನಗಣತಿ ಮೂಲಕ ಸಂಪತ್ತನ್ನು ಬಡವರಿಗೆ ಹಂಚಿಕೆ ಮಾಡುವುದೇ ಕಾಂಗ್ರೇಸ್ನ ಗುರಿ. ದೇಶದಲ್ಲಿ ಬದಲಾವಣೆ ತರುವ ವಾತಾವರಣ ನಿರ್ಮಾಣವಾಗಿದ್ದು ಸಂವಿಧಾನದ ಜಾಗೃತಿಗಾಗಿ ಅಸಂಖ್ಯಾತ ಜನಸಮೂಹ ಮುಂದಾಗಿದೆ. 400 ಸೀಟ್ಗಳು ಗೆದ್ದಲ್ಲಿ ಸಂವಿಧಾನ ಬದಲಾಯಿಸುತ್ತೇವೆ ಎಂಬ ಬಿಜೆಪಿರವರ
ಹೇಳಿಕೆಗೆ ಇದು ಉತ್ತರವಾಗಿದೆ ಎಂದು ಮಾಜಿ ಶಾಸಕ ಡಾ.ರಫೀಕ್ ಅಹಮದ್ ಹೇಳಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಏಪ್ರಿಲ್ 6ರಿಂದ ಏಪ್ರಿಲ್ 23ರವರೆಗೆ ‘ಸಂವಿಧಾನ ರಕ್ಷಣೆಗಾಗಿ ಸ್ಲಂ ಜನರ ಮತ’ ಜಾಗೃತಿ ಜಾಥಾ ನಡೆದಿದ್ದು, ಮಂಗಳವಾರ, ತುಮಕೂರಿನಲ್ಲಿ ಸಮಾರೋಪಗೊಂಡಿದೆ. ಸಮಾರೋಪ ಸವೇಶದಲ್ಲಿ ಡಾ. ರಫೀಕ್ ಅಹಮದ್ ಮಾತನಾಡಿದರು. ” ತುಮಕೂರು, ಮಧುಗಿರಿ, ಕೊರಟಗೆರೆ, ಗುಬ್ಬಿ ಹಾಘೂ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 120 ಸ್ಲಂಗಳಲ್ಲಿ ಸಭೆಗಳನ್ನು ನಡೆಸಲಾಗಿದೆ. ಸಂವಿಧಾನ ರಕ್ಷಣೆಗಾಗಿ ಬಿಜೆಪಿ ಸೋಲಿಸಿ ಕಾಂಗ್ರೇಸ್ನ್ನು ಬೆಂಬಲಿಸುವಂತೆ ರಾಜಕೀಯ ಪ್ರಜ್ಞೆ ಮೂಡಿಸುವಲ್ಲಿ ಜಾಥಾ ಯಶಸ್ವಿಯಾಗಿದೆ” ಎಂದರು.
“ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಾಸಿದ್ದವಾಗಿದೆ. ಜಾತಿ ಜನಗಣತಿ ನಡೆಸಿ ದೇಶದಲ್ಲಿರುವ ದಲಿತರು, ಹಿಂದುಳಿದವರು, ಮಹಿಳೆಯರು, ಅಲೆಮಾರಿಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ದೇಶದ ಸಂಪತ್ತನ್ನು ಹಂಚಿಕೆ ಮಾಡುವ ಪಾಲುದಾರಿಕೆಯನ್ನು ಖಾತ್ರಿಗೊಳಿಸುವ ಮೂಲಕ ಸಂವಿಧಾನವನ್ನು ಎತ್ತಿಹಿಡಿಯುತ್ತೇವೆ” ಎಂದರು.
“ಜಿಲ್ಲೆಯಲ್ಲಿ ಸ್ಲಂ ಜನರ ಪ್ರಣಾಳಿಕೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ ಪರಮೇಶ್ವರ್, ಸಹಕಾರಿ ಸಚಿವ ಕೆ.ಎನ್ ರಾಜಣ್ಣ, ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ ಮುದ್ದಹನುಮೇಗೌಡ ಹಾಘೂ ಪ್ರಗತಿಪರ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳ ಗಮನ ಸೆಳೆದು ಸಾರ್ವಜನಿಕರಿಂದ ಮೆಚ್ಚುಗೆ ಪಡೆಯಲಾಗಿದೆ” ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹ್ಮದ್ ಮಾತನಾಡಿ, “ಜಿಲ್ಲೆಯಲ್ಲಿ ಕೊಳಗೇರಿ ಸಮಿತಿ ತನ್ನದೇಯಾದ ಜನರ ಸಂಘಟನೆ ಹೊಂದಿದೆ. ತುಮಕೂರಿನಲ್ಲಿ ಸಂಚಾರಿಸಿದ ಭಾರತ್ ಜೋಡೊ ಸಂದರ್ಭದಲ್ಲಿ ರಾಹುಲ್ ಗಾಂಧಿಯವರಿಗೆ ಡಾ.ಜಿ.ಪರಮೇಶ್ವರ್ ಸಮುಖದಲ್ಲಿ ಸ್ಲಂ ಜನಾಂದೋಲನ ಸಂಘಟನೆಯ ಎ.ನರಸಿಂಹಮೂರ್ತಿ ಅವರು ಸಲ್ಲಿಸಿದ ಸ್ಲಂ ಜನರ 10 ಒತ್ತಾಯಗಳಲ್ಲಿ ಬಹುತೇಕ ಅಂಶಗಳನ್ನು ಕಾಂಗ್ರೇಸ್ನ ನ್ಯಾಯಪತ್ರ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ನಗರ ಉದ್ಯೋಗ ಖಾತ್ರಿ, ಆರೋಗ್ಯದ ಹಕ್ಕು, ಎಸ್.ಸಿ/ಎಸ್.ಟಿ ಜನಸಂಖ್ಯೆಗನುಗುಣವಾಗಿ ಕಾಯಿದೆ ಜಾರಿ ಅಸಂಘಟಿತ ಕಾರ್ಮಿಕರ ಕಲ್ಯಾಣ ಸೇರಿದಂತೆ ವಸತಿ ಹಕ್ಕು ಕಾಯಿದೆಯನ್ನು ಜಾರಿಗೊಳಿಸುವ ಭರವಸೆ ನೀಡಿದೆ. ಹಾಗಾಗಿ, ಸ್ಲಂ ಜನರ ಬಹುದಿನಗಳ ಒತ್ತಾಯಗಳನ್ನು ಕಾಂಗ್ರೆಸ್ ಈಡೇರಿಸಲು ಮುಂದಾಗಿರುವುದರಿಂದ ನಮ್ಮ ಪಕ್ಷವನ್ನು ಗೆಲ್ಲಿಸಬೇಕು” ಎಂದು ಮನವಿ ಮಾಡಿದರು.
ಸ್ಲಂ ಜನಾಂದೋಲನದ ರಾಜ್ಯ ಸಂಚಾಲಕ ನರಸಿಂಹಮೂರ್ತಿ ಮಾತನಾಡಿ, “ತುಮಕೂರು ಜಿಲ್ಲೆಯಲ್ಲಿ ಪ್ರಾರಂಭವಾಗಿರುವ ‘ಸಂವಿಧಾನ ರಕ್ಷಣೆಗಾಗಿ ಸ್ಲಂ ಜನರ ಮತ’ ಜಾಗೃತಿ ನಮ್ಮ ಜನರಲ್ಲಿ ರಾಜಕೀಯ ಪ್ರಜ್ಞೆ ತರುವಲ್ಲಿ ಯಶಸ್ವಿಯಾಗಿದೆ. ವಿಶೇಷವಾಗಿ ಯುವಜನರನ್ನು ಸಂವಿಧಾನದತ್ತ ಆಲೋಚಿಸಲು ಅರಿವು ನೀಡಿದ್ದು ಇಡೀ ರಾಜ್ಯದಲ್ಲಿ ಸ್ಲಂ ಜನರ ರಾಜಕೀಯ ತಿಳಿವಳಿಕೆ ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಇದಕ್ಕಾಗಿ ಸಾವಿರಾರು ಕಾರ್ಯಕರ್ತರು ಪ್ರತಿದಿನ ಕೆಲಸ ಮಾಡುತ್ತಿದೆ. ಈ ಬಾರಿ ದೇಶದಲ್ಲಿ ಸಂವಿಧಾನವನ್ನು ರಕ್ಷಿಸುವ ‘ಇಂಡಿಯಾ’ ಕೂಟದ ಸರ್ಕಾರ ಅಸ್ತಿತ್ವಕ್ಕೆ ಬರುವ ಸೂಚನೆ ಇದೆ” ಎಂದರು.
ಸಮಾವೇಶದಲ್ಲಿ ಮೆಹಬೂಬ್ಸಾಬ್, ಸೈಯದ್ ಅಲ್ತಾಫ್, ಸಿದ್ದಪ್ಪ, ಸ್ವಾಮಿನಾಥ್, ಅರುಣ್, ಶಂಕ್ರಯ್ಯ ,ಕೃಷ್ಣಮೂರ್ತಿ, ತಿರುಮಲಯ್ಯ, ಜಾಬೀರ್ಖಾನ್, ಕಣ್ಣನ್, ಮುಬಾರಕ್, ಚಕ್ರಪಾಣಿ, ಪುಟ್ಟರಾಜು, ರಂಗನಾಥ್, ಸಿದ್ದರಾಜು, ರಾಜು, ಚಿರಂಜೀವಿ, ನರಸಿಂಹಮೂರ್ತಿ, ಮಂಜುನಾಥ್, ಮುತ್ತುರಾಜ್, ಶಾಬುದ್ದಿನ್, ಶಂಕರ್ಗೌಡ, ಬಸವರಾಜು, ಕಾಶಿರಾಜ್,ಮಾಧವನ್, ಶಾರದಮ್ಮ, ಸುಹೇಲ್ ಮುಂತಾದವರು ಪಾಲ್ಗೊಂಡಿದ್ದರು.